ETV Bharat / bharat

ಬಾಲಕ ರಾಮನಿಗೆ 80 ಕೆಜಿ ತೂಕದ ಖಡ್ಗ ಅರ್ಪಿಸಿದ ಮಹಾರಾಷ್ಟ್ರದ ಭಕ್ತ

author img

By ETV Bharat Karnataka Team

Published : Jan 25, 2024, 4:18 PM IST

ಮಹಾರಾಷ್ಟ್ರದ ಭಕ್ತರೊಬ್ಬರು 80 ಕೆಜಿ ತೂಕದ 7 ಅಡಿ 3 ಇಂಚು ಉದ್ದದ ದೈತ್ಯ ಖಡ್ಗವನ್ನು ರಾಮಮಂದಿರಕ್ಕೆ ಅರ್ಪಿಸಿ, ಭಕ್ತಿ ಸಮರ್ಪಿಸಿದ್ದಾರೆ.

ಮಹಾರಾಷ್ಟ್ರ ಭಕ್ತ
ಮಹಾರಾಷ್ಟ್ರ ಭಕ್ತ

ಅಯೋಧ್ಯೆ (ಉತ್ತರ ಪ್ರದೇಶ) : ಅಯೋಧ್ಯೆಯ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಮೊದಲು ಮತ್ತು ನಂತರವೂ ಅಯೋಧ್ಯೆಗೆ ಉಡುಗೊರೆಗಳ ಮಹಾಪೂರವೇ ಹರಿದು ಬಂದಿತ್ತು. ಇದೀಗ ಮಹಾರಾಷ್ಟ್ರದ ಭಕ್ತರೊಬ್ಬರು 80 ಕೆಜಿ ತೂಕದ 7 ಅಡಿ 3 ಇಂಚು ಉದ್ದದ ದೈತ್ಯ ಖಡ್ಗವನ್ನು ರಾಮಲಲ್ಲಾಗೆ ಅರ್ಪಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.

"ನಾನು ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದೇನೆ. ಐತಿಹಾಸಿಕ ಆಯುಧಗಳ ಸಂಗ್ರಹಕನಾಗಿದ್ದೇನೆ. ಈಗಾಗಲೇ ನಾನು ನನ್ನ ಶಸ್ತ್ರಾಸ್ತ್ರಗಳ ಪ್ರದರ್ಶನವನ್ನು ಅನೇಕ ಸ್ಥಳಗಳಲ್ಲಿ ನಡೆಸಿದ್ದೇನೆ. ಇಂದು ನಾನು ನಂದಕ ಖಡ್ಗ (ವಿಷ್ಣುವಿನ ಖಡ್ಗ)ವನ್ನು ಶ್ರೀರಾಮನಿಗೆ ಸಮರ್ಪಿಸಲು ತಂದಿದ್ದೇನೆ. ಈ ಖಡ್ಗದ ವಿಶೇಷತೆ ಎಂದರೆ 80 ಕೆಜಿ ತೂಕ ಮತ್ತು 7 ಅಡಿ 3 ಇಂಚು ಉದ್ದವಿದೆ'' ಎಂದು ನೀಲೇಶ್ ಅರುಣ್ ಸಾಕರ್ ತಿಳಿಸಿದ್ದಾರೆ.

"ನೀವು ಈ ಖಡ್ಗವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಗವಾನ್ ವಿಷ್ಣುವಿನ 'ದಶಾವತಾರ'ಗಳನ್ನು ಚಿತ್ರಿಸಿರುವುದನ್ನು ಕಾಣಬಹುದು. ಕತ್ತಿಯ ಬ್ಲೇಡ್ ಅನ್ನು ಉಕ್ಕಿನಿಂದ ಮಾಡಲಾಗಿದ್ದು, ಹಿತ್ತಾಳೆ ಹಿಡಿಕೆಯ ಮೇಲೆ ಚಿನ್ನದ ಹೊದಿಕೆ ಇದೆ" ಎಂದು ನೀಲೇಶ್ ಖಡ್ಗದ ಕುರಿತು ಮಾಹಿತಿ ನೀಡಿದರು.

ದಶಾವತಾರವು ಹಿಂದೂಗಳ ಸಂರಕ್ಷಣೆಯ ದೇವರಾದ ಭಗವಾನ್ ವಿಷ್ಣುವಿನ ಹತ್ತು ಅವತಾರಗಳನ್ನು ಸೂಚಿಸುತ್ತದೆ. ದಶಾವತಾರ ಎಂಬ ಪದವು ದಾಸ ಎಂಬ ಪದದಿಂದ ಬಂದಿದೆ. ದಶ ಎಂದರೆ 'ಹತ್ತು' ಮತ್ತು ಅವತಾರ ಎಂದರೆ ಅವರೋಹಣ, ಮಾನವ ರೂಪದಲ್ಲಿ ತನ್ನ ಎಲ್ಲ ಮಹಿಮೆ ಮತ್ತು ವೈಭವದಿಂದ ಇಳಿದವನು ಎಂಬ ಅರ್ಥವನ್ನು ಈ ಪದ ನೀಡುತ್ತದೆ.

ಈ ಅವತಾರಗಳು ಶತಮಾನಗಳ ಮೂಲಕ ಮಾನವ ವಿಕಾಸವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ದುಷ್ಟ ಶಕ್ತಿಗಳನ್ನು ನಿರ್ಮೂಲನೆ ಮಾಡಲು, ಧರ್ಮವನ್ನು ಪುನಃಸ್ಥಾಪಿಸಲು ಮತ್ತು ಯೋಗ್ಯರನ್ನು ಅಥವಾ ಭಕ್ತರನ್ನು ಜನನ ಮತ್ತು ಮರಣಗಳ ಚಕ್ರದಿಂದ ಮುಕ್ತಗೊಳಿಸಲು ವಿಷ್ಣು ಕಾಲಕಾಲಕ್ಕೆ ಭೂಮಿಯ ಮೇಲೆ ಅವತರಿಸುತ್ತಾನೆ ಎಂಬುದು ಭಾರತೀಯ ಸನಾತನಿಗಳ ನಂಬಿಕೆ ಆಗಿದೆ.

ಶ್ರೀ ರಾಮಲಲ್ಲಾನ ದರ್ಶನಕ್ಕಾಗಿ ಪ್ರತಿನಿತ್ಯ ಲಕ್ಷಗಟ್ಟಲೆ ಭಕ್ತರು ಆಗಮಿಸುತ್ತಿದ್ದಾರೆ. ಎಲ್ಲಾ ವಯೋಮಾನದ ಭಕ್ತರು ಅಯೋಧ್ಯೆಯ ಬೀದಿಗಳಲ್ಲಿ ತೀವ್ರವಾದ ಚಳಿ ಮತ್ತು ಮಂಜಿನ ನಡುವೆಯೂ "ಜೈ ಶ್ರೀ ರಾಮ್" ಎಂದು ಪಠಿಸುತ್ತಿರುವುದು ಕಂಡುಬರುತ್ತಿದೆ.

1 ಕಿಲೋಮೀಟರ್ ದೂರ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು: ''ಶ್ರೀರಾಮ ಲಲ್ಲಾನ ಪ್ರಾಣಪ್ರತಿಷ್ಠಾಪನೆಯಿಂದಾಗಿ ಅಯೋಧ್ಯೆಯಲ್ಲಿ ಭಕ್ತರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಅಯೋಧ್ಯೆಯನ್ನು ತೀರ್ಥಯಾತ್ರೆಯ ಕೇಂದ್ರಬಿಂದುವಾಗಿ ಪರಿವರ್ತಿಸಿದೆ. ಪ್ರಾಣ ಪ್ರತಿಷ್ಠೆಯ ನಂತರ ಮೊದಲ ದಿನವೇ 5 ಲಕ್ಷಕ್ಕೂ ಹೆಚ್ಚು ಭಕ್ತರು ರಾಮನ ದರ್ಶನ ಪಡೆದಿದ್ದಾರೆ. ಜನವರಿ 25ರಂದು ಕೂಡ ದೇವಾಲಯದಲ್ಲಿ ಅಪಾರ ಪ್ರಮಾಣದ ಭಕ್ತರ ಹರಿವು ಕಂಡು ಬಂದಿತ್ತು. ಎರಡು ಸರತಿ ಸಾಲುಗಳಿದ್ದು, ತಲಾ 1 ಕಿಲೋಮೀಟರ್ ಉದ್ದವಿತ್ತು'' ಎಂದು ಅಯೋಧ್ಯೆ ರೇಂಜ್ ಐಜಿ ಪ್ರವೀಣ್ ಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪೆನ್ಸಿಲ್ ತುದಿಯಲ್ಲಿ 1.3 ಸೆಂ ಮೀಟರ್​ದ ಶ್ರೀರಾಮ ವಿಗ್ರಹ ರಚಿಸಿದ ಶಿಲ್ಪ ಕಲಾವಿದ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.