ಚಿರತೆ ಬಳಿಕ ಹುಲಿ ಪ್ರತ್ಯಕ್ಷ: ಭಯದಲ್ಲಿ ಮಂಡ್ಯ ಜನತೆ!

By ETV Bharat Karnataka Team

Published : Jan 17, 2024, 4:40 PM IST

thumbnail

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದವು. ಇದೀಗ ಹುಲಿ ಭಯದಲ್ಲಿ ಜನರಿದ್ದಾರೆ. ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿನ ಕೃಷಿ ಪ್ರಧಾನ ಹಾಗೂ ಹಳ್ಳಿಗಾಡಿನ ಹಿನ್ನೆಲೆಯುಳ್ಳ ದೃಶ್ಯಗಳ ಚಿತ್ರೀಕರಣಕ್ಕೆ ಪೂರಕವಾಗಿರೋ ನೈಸರ್ಗಿಕ ತಾಣ ಮಂಡ್ಯ ಜಿಲ್ಲೆಯ ಮಹದೇವಪುರದಲ್ಲಿ ಹುಲಿ ಕಾಣಿಸಿಕೊಂಡಿದೆ.  

ರಸ್ತೆಗಳಲ್ಲಿ, ಹೊಲ - ಗದ್ದೆಗಳಲ್ಲಿ ಹುಲಿ ಘರ್ಜಿಸುತ್ತಾ ಓಡಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊಬೈಲ್ ಕ್ಯಾಮರಾಗಳಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿರುವ ಜನರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜನನಿಬಿಡ ಹಾಗೂ ಸದಾ ವಾಹನಗಳು ಸಂಚಾರ ಮಾಡುವ ಸ್ಥಳದಲ್ಲಿ ಹುಲಿ ಪ್ರತ್ಯಕ್ಷ ಆಗಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಬೈಕ್‌ಗಳಲ್ಲಿ ಸಂಚಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ರೈತರು ಕೂಡ ತಮ್ಮ ಜಮೀನುಗಳತ್ತ ತೆರಳಲು ಭಯ ಪಡುತ್ತಿದ್ದಾರೆ. ಶೂಟಿಂಗ್​ಗೆ ತಂಡದವರು ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮವನ್ನು ಹಾಗೂ ಸುತ್ತಲಿನ ಭತ್ತ ಹಾಗೂ ಕಬ್ಬಿನ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೀಗ ಮಹದೇವಪುರದಲ್ಲಿಯೇ ಹುಲಿ ಕಾಣಿಸಿಕೊಂಡಿದ್ದರಿಂದ ಶೂಟಿಂಗ್‌ ಮಾಡುವುದಕ್ಕೆ ಹೋಗುವವರಿಗೂ ಆತಂಕ ಶುರುವಾಗಿದೆ. ಜೊತೆಗೆ, ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಮಹದೇವಪುರ ಗ್ರಾಮದಲ್ಲಿ ಒಬ್ಬಂಟಿಯಾಗಿ ಜನಸಾಮಾನ್ಯರು, ರೈತರು ಸಂಚಾರ ಮಾಡದಂತೆ ಸೂಚನೆ ನೀಡಲಾಗುತ್ತಿದೆ.

ಇದನ್ನೂ ಓದಿ: ಜನವರಿ 19 ರವರೆಗೂ ಪೀಣ್ಯ ಫ್ಲೈ ಓವರ್ ಬಂದ್: ಪರ್ಯಾಯ ಮಾರ್ಗಗಳೇನು?

ಮಹದೇವಪುರ ಗ್ರಾಮದ ಜಮೀನೊಂದರಲ್ಲಿ ಹುಲಿ ಕಾಣಿಸಿಕೊಂಡಿದ್ದು, ಜಮೀನಿನಲ್ಲಿ ಹುಲಿ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೊತೆಗೆ, ಹುಲಿ ರಸ್ತೆ ದಾಟುವಾಗಲೂ ಬೈಕ್ ಸವಾರರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಜಾಗೃತಿ ಮೂಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಜಮೀನೊಂದರಲ್ಲಿ ಹುಲಿ ಹೆಜ್ಜೆಯನ್ನು ಪತ್ತೆ ಮಾಡಿದ್ದು, ಹುಲಿ ಸೆರೆಗಾಗಿ ಬೋನು ಅಳವಡಿಕೆ ಮಾಡುವುದಕ್ಕೆ ಮುಂದಾಗಿದ್ದಾರೆ.

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.