ಭಾರತ್ ಜೋಡೋ ನ್ಯಾಯ ಯಾತ್ರೆ: ಮಣಿಪುರಕ್ಕೆ ತೆರಳಿದ ಕಾಂಗ್ರೆಸ್ ನಾಯಕರು-ವಿಡಿಯೋ
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg?imwidth=128)
Published : Jan 14, 2024, 12:37 PM IST
![ETV Thumbnail thumbnail](https://etvbharatimages.akamaized.net/etvbharat/prod-images/14-01-2024/640-480-20505498-thumbnail-16x9-don.jpg)
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಬಲವರ್ಧನೆಗಾಗಿ ಕಾಂಗ್ರೆಸ್ ಎರಡನೇ ಹಂತದ 'ಭಾರತ್ ಜೋಡೋ ನ್ಯಾಯ ಯಾತ್ರೆ'ಯನ್ನು ಇಂದಿನಿಂದ ಆರಂಭಿಸಲಿದೆ. ಇದಕ್ಕಾಗಿ ಕೈ ನಾಯಕರು ಯಾತ್ರೆ ಆರಂಭವಾಗಲಿರುವ ಸ್ಥಳ ಮಣಿಪುರದ ತೌಬಲ್ಗೆ ಇಂದು ದೆಹಲಿಯಿಂದ ವಿಮಾನದಲ್ಲಿ ತೆರಳಿದರು. ಸಂಸದ ರಾಹುಲ್ ಗಾಂಧಿ ಅವರ ವಿಮಾನ ಹವಾಮಾನ ವೈಪರೀತ್ಯದ ಕಾರಣದಿಂದ ವಿಳಂಬವಾಗಿದೆ.
ನಾಯಕರು ಯಾತ್ರೆಗಾಗಿ ಇಂಫಾಲ್ಗೆ ತೆರಳಲು ದೆಹಲಿ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ ಬಂದಾಗ, ದಟ್ಟ ಮಂಜಿನ ಕಾರಣಕ್ಕಾಗಿ ವಿಮಾನ ಟೇಕ್ಆಫ್ ಆಗುವುದು ತಡವಾಯಿತು. ವಾತಾವರಣ ತಿಳಿಯಾದ ಬಳಿಕ ಎಲ್ಲರೂ ಇಂಡಿಗೋ ವಿಶೇಷ ವಿಮಾನದಲ್ಲಿ ಪ್ರಯಾಣಿಸಿದರು. ರಾಹುಲ್ ಗಾಂಧಿ ಅವರಿದ್ದ ಇನ್ನೊಂದು ವಿಶೇಷ ವಿಮಾನವೂ ಮಂಜಿನ ಕಾರಣಕ್ಕಾಗಿ ಹಾರಾಟಕ್ಕೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ಉಳಿದುಕೊಂಡಿದ್ದಾರೆ.
ಖೋಂಗ್ಜೋಮ್ ಯುದ್ಧ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಸುವುದರ ಮೂಲಕ ಇಂದು ಮಧ್ಯಾಹ್ನ 'ಭಾರತ್ ಜೋಡೋ ನ್ಯಾಯ ಯಾತ್ರೆ'ಗೆ ಚಾಲನೆ ಸಿಗಲಿದೆ. ನಂತರ ತೌಬಲ್ನ ಮೈಯ್ ಮೈದಾನದಿಂದ ಯಾತ್ರೆ ಶುರುವಾಗಲಿದೆ. ಇಂಫಾಲ್ನ ಕೊಯಿರೆಂಗೆ ಬಜಾರ್ನಲ್ಲಿ ಸಂಜೆ 5:30ಕ್ಕೆ ನಾಯಕರು ವಿಶ್ರಾಂತಿ ಪಡೆಯುವರು. ಅಲ್ಲಿಂದಲೇ ನಾಳೆ ಯಾತ್ರೆ ಮುಂದುವರಿಯಲಿದೆ. ಈ ಯಾತ್ರೆ ಒಟ್ಟು 67 ದಿನಗಳ ಕಾಲ ನಡೆಯಲಿದೆ. ಸುಮಾರು 6,700 ಕಿಲೋಮೀಟರ್ ಕ್ರಮಿಸಲಿದ್ದು, 110 ಜಿಲ್ಲೆಗಳನ್ನು ಇದು ಹಾದು ಹೋಗಲಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.