ETV Bharat / state

ಚಿಂಚನಸೂರ್ ಕಾಂಗ್ರೆಸ್​ ಸೇರ್ಪಡೆಯಿಂದ ಜೆಡಿಎಸ್ ಮೇಲೆ ಯಾವುದೇ ಪರಿಣಾಮ ಉಂಟಾಗಲ್ಲ: ಹೆಚ್​ಡಿಕೆ

author img

By

Published : Mar 24, 2023, 3:04 PM IST

ಬಿಜೆಪಿ ಮತ್ತು ಕಾಂಗ್ರೆಸ್​ನಲ್ಲಿ ಅಭ್ಯರ್ಥಿಗಳ ಕೊರತೆ ಇರುವ ಕಾರಣ ಚುನಾವಣೆ ಮುಂಚೆ ಕಾಂಗ್ರೆಸ್ ಆಪರೇಷನ್ ಹಸ್ತ ಮಾಡುತ್ತಿದೆ ಎಂದು ಹೆಚ್​ಡಿಕೆ ಹೇಳಿದರು.

ಹೆಚ್​ಡಿ ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ

ಗುರುಮಠಕಲ್: ಬಿಜೆಪಿ ಎಂಎಲ್​​ಸಿ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಘರ್ ವಾಪಸಿ ಆಗಿರುವುದರಿಂದ ಕ್ಷೇತ್ರದಲ್ಲಿ ಜೆಡಿಎಸ್​ಗೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ ಎಂದು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದ ಶಾಸಕ ನಾಗನಗೌಡ ಕಂದಕೂರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅಭಿವೃದ್ಧಿ ಕೆಲಸಗಳು ಹಾಗೂ ಶರಣು ಗೌಡ ಕಂದಕೂರ ಅವರ ಕ್ಷೇತ್ರದ ಮೇಲೆ ಇರುವ ಕಾಳಜಿಯಿಂದ ಜನರು ಮತ್ತು ಯುವಕರು ಜೆಡಿಎಸ್ ಪರವಾಗಿದ್ದರೆ ಎಂಬುದಕ್ಕೆ ಯರಗೋಳ ಗ್ರಾಮದಲ್ಲಿ ಜರುಗಿದ ಐತಿಹಾಸಿಕ ಪಂಚರತ್ನ ಯಾತ್ರೆ ಆಯೋಜನೆ ನಿದರ್ಶನವಾಗಿದೆ ಎಂದರು.

ಬಾಬುರಾವ್ ಚಿಂಚನಸೂರ್ ತೊಡೆ ತಟ್ಟಿ ಖರ್ಗೆ ಅವರನ್ನು ಸೋಲಿಸುತ್ತೇನೆ ಎಂದಿದ್ದರು. ಈಗ ಅವರಿಗೆ ಹಾಸಿಗೆ ಹಾಕಿರುವುದು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊರತೆ ಇದೆ ಎಂಬುದು ಕಾಣುತ್ತಿದೆ. ನಮ್ಮ ಶರಣು ಗೌಡ ಕಂದಕೂರ ಈ ಬಾರಿ ಹೆಚ್ಚಿನ ಅಂತರದಲ್ಲಿ ಗೆಲುವು ದಾಖಲೆ ಮಾಡುತ್ತಾರೆ ಎಂಬ ಆತ್ಮವಿಶ್ವಾಸವಿದೆ. ಬಾಬುರಾವ್ ತಮ್ಮ ಕೋಲಿ ಜಾತಿಯನ್ನು ಎಸ್​ಟಿಗೆ ಸೇರಿಸುತ್ತೇನೆ ಎಂದು ಬಿಜೆಪಿಗೆ ಸೇರ್ಪಡೆ ಆಗಿ ಎಲ್ಲ ಅಧಿಕಾರ ಅನುಭವಿಸಿದರು. ಆದರೆ ಅವರು ಏನು ಮಾಡಿದರು. ಮುಂದೆ ಅವರ ಸಮಾಜಕ್ಕೆ ಏನು ಉತ್ತರಿಸುತ್ತಾರೆ. ಅವರಿಗೆ ಯಾವ ರೀತಿ ತಕ್ಕ ಪಾಠ ಕಲಿಸುತ್ತಾರೆ ಎಂಬುದು ಕ್ಷೇತ್ರದ ಜನರು ಚುನಾವಣೆಯಲ್ಲಿ ತೋರಿಸುತ್ತಾರೆ ಎಂದು ಹೆಚ್​ಡಿಕೆ ತಿಳಿಸಿದರು.

ಬಿಜೆಪಿ ಮತ್ತು ಕಾಂಗ್ರೆಸ್​ನಲ್ಲಿ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ಕಾಂಗ್ರೆಸ್ ಚುನಾವಣೆ ಮುಂಚೆ ಆಪರೇಷನ್ ಹಸ್ತ ಮಾಡುತ್ತಿದೆ. ಚುನಾವಣೆ ಫಲಿತಾಂಶ ಬಂದ ನಂತರ ಬಿಜೆಪಿ ಕಮಲ ಆಪರೇಷನ್ ಮಾಡುತ್ತದೆ ಎಂದು ರಾಷ್ಟ್ರೀಯ ಪಕ್ಷಗಳ ಕುರಿತು ವ್ಯಂಗ್ಯವಾಗಿ ಮಾತನಾಡಿದರು. ಸರ್ಕಾರ ಜಾಹೀರಾತುಗಳಲ್ಲಿ ರಾಜ್ಯದ ಅಭಿವೃದ್ಧಿ ಕುರಿತು ಬಿಂಬಿಸುತ್ತಿದೆ. ಜಾಹೀರಾತುಗಳಿಗೆ ನೀಡುವ ಆದ್ಯತೆ ಜನತೆ ಮೇಲೆ ಮತ್ತು ರಾಜ್ಯದ ಅಭಿವೃದ್ಧಿ ಪರ ತೋರಿಸಬೇಕಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಒಬ್ಬ ಇಲಾಖೆ ಅಧಿಕಾರಿ ಮತ್ತು ಶಾಸಕರು ಮಾಡಬೇಕಾದ ಶಂಕುಸ್ಥಾಪನೆಗಳು ಚುನಾವಣೆ ಹಿನ್ನೆಲೆಯಲ್ಲಿ ಅಮಿತ ಶಾ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಉದ್ಘಾಟನೆ ಮಾಡುತ್ತಿರುವುದು ಚುನಾವಣೆ ಪ್ರಚಾರದ ಹೊಸ ದಾರಿಗೆ ನಾಂದಿ ಹಾಡಿದ್ದಾರೆ. ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಎಂದು ಜಂಭ ಕೊಚ್ಚಿ ಕೊಳ್ಳುತ್ತಿದೆ. ಅಭಿವೃದ್ಧಿ ಕಡೆಗಣಿಸಿರುವ ಕಾರಣಕ್ಕಾಗಿ ಸ್ಥಳೀಯ ನಾಯಕರ ಮೇಲೆ ಭರವಸೆ ಇಲ್ಲದ ಕಾರಣ ಪ್ರತಿಯೊಂದು ಕಾಮಗಾರಿ ಅಪೂರ್ಣವಾಗಿದ್ದರೂ ಕೇಂದ್ರದಿಂದ ಸಚಿವರು ಮತ್ತು ಪ್ರಧಾನಿಗಳು ಬರುತ್ತಿರುವುದು ಅವರ ಹತಾಶೆಗೆ ಒಳಗಾಗಿದ್ದಾರೆ ಅನ್ನಿಸುತ್ತದೆ ಮತ್ತು ಹಾಸ್ಯಸ್ಪದವಾಗಿದೆ ಎಂದು ಬಿಜೆಪಿ ಕುರಿತು ಲೇವಡಿ ಮಾಡಿದರು.

ಮೋದಿ ಅವರ ಎಲ್ಲ ಕಾರ್ಯಕ್ರಮಗಳು ಮತ್ತು ಶಂಕುಸ್ಥಾಪನೆಗಳು ಮುಗಿದ ಮೇಲೆ ಅವರು ಹೇಳಿದ ದಿನಾಂಕಕ್ಕೆ ಚುನಾವಣೆ ಆಯೋಗ ಚುನಾವಣೆ ದಿನಾಂಕದ ಮುಹೂರ್ತ ಫಿಕ್ಸ್ ಮಾಡುತ್ತಾರೆ. ಮೋದಿ ಹೇಳುವ ತನಕ ಚುನಾವಣೆ ಮುಹೂರ್ತ ಫಿಕ್ಸ್ ಮಾಡುವುದಿಲ್ಲ ಎಂದು ಅವರು ಆರೋಪಿಸಿದರು. ಜೆಡಿಎಸ್ ಪಕ್ಷವು ಯುವಕರಿಗೆ ಹೆಚ್ಚಿನ ಟಿಕೆಟ್ ನೀಡಿ ಹೊಸ ರಾಜಕೀಯಕ್ಕೆ ಆದ್ಯತೆ ನೀಡುತ್ತಿದೆ. ಈ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಾಂಗ್ರೆಸ್‌ ರಾಜಭವನ ಚಲೋ: ಸಿದ್ದರಾಮಯ್ಯ, ಡಿಕೆಶಿ ಪೊಲೀಸ್ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.