ETV Bharat / state

ಆಲಮಟ್ಟಿ ಜಲಾಶಯಕ್ಕೆ ಹರಿದು ಬಂತು ಜೀವಜಲ; ಜನರ ನಿಟ್ಟುಸಿರು

author img

By

Published : Jul 13, 2023, 8:54 AM IST

Updated : Jul 13, 2023, 2:07 PM IST

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ. 19 ಸಾವಿರ ಕ್ಯೂಸೆಕ್ ನೀರು ಅಣೆಕಟ್ಟೆಯೊಡಲು ಸೇರಿದೆ. ಇಂದಿನ ಮಟ್ಟ 20.547 ಟಿಎಂಸಿ.

water Inflow to Alamatti Dam
ಆಲಮಟ್ಟಿ ಜಲಾಶಯಕ್ಕೆ ಹರಿದು ಬಂದ ನೀರು

ಆಲಮಟ್ಟಿ ಜಲಾಶಯಕ್ಕೆ ಹರಿದು ಬಂತು ಜೀವಜಲ

ವಿಜಯಪುರ: ಖಾಲಿ ಖಾಲಿಯಾಗಿ ಕಾಣುತ್ತಿದ್ದ ಜಿಲ್ಲೆಯ ಜೀವಜಲ ಆಲಮಟ್ಟಿ‌ ಜಲಾಶಯಕ್ಕೆ ಕೊನೆಗೂ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಪ್ರಸಕ್ತ ಸಾಲಿನಲ್ಲಿ ಇದೇ ಮೊದಲ ಬಾರಿ ಪ್ರಮಾಣದ ಒಳಹರಿವು ಆರಂಭವಾಗಿದೆ. ಡ್ಯಾಂನಲ್ಲಿ ನೀರಿಲ್ಲದಿರುವುದಕ್ಕೆ ಜನರು ಆತಂಕಗೊಂಡಿದ್ದರು. ಅದರಲ್ಲೂ ಮುಂಗಾರು ಆರಂಭವಾಗಿ ತಿಂಗಳು ಕಳೆದರೂ ಮಳೆಯಾಗದ ಹಿನ್ನೆಲೆಯಲ್ಲಿ ನದಿತೀರದ ಜನರು ಬರದ ಭೀತಿಯಲ್ಲಿದ್ದರು. ಆದ್ರೆ ಇದೀಗ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾದ್ದರಿಂದ ಕೃಷ್ಣಾ ನದಿಗೆ ನೀರು ಹರಿದುಬರುತ್ತಿದೆ. ನದಿತೀರದ ಜನರ ಮುಖದಲ್ಲಿಯೂ ಮಂದಹಾಸ ಅರಳಿದೆ.

19 ಸಾವಿರ ಕ್ಯೂಸೆಕ್ ಒಳಹರಿವು: ಆಲಮಟ್ಟಿ ಜಲಾಶಯಕ್ಕೆ ಪ್ರಸಕ್ತ ಸಾಲಿನಲ್ಲಿ 19,172 ಕ್ಯೂಸೆಕ್​ನಷ್ಟು ನೀರು ಬಂದಿದೆ. ಕೃಷ್ಣಾ ನದಿಯ ಮೇಲ್ಭಾಗದಲ್ಲಿ ಅಂದ್ರೆ ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವುದರಿಂದ ಆಲಮಟ್ಟಿಗೆ ಒಳಹರಿವು ಶುರುವಾಗಿದೆ. ಜಲಾಶಯದ ಇಂದಿನ‌ ನೀರಿನ ಮಟ್ಟ 20.547 ಟಿಎಂಸಿಗೆ ತಲುಪಿದೆ. ಇದರಿಂದಾಗಿ ಜಲಾಶಯಕ್ಕೆ ಕೊಂಚ ಕಳೆ ಬಂದಿದೆ.

519.60 ಮೀಟರ್​​ ಎತ್ತರದ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಜಲಾಶಯ (ಆಲಮಟ್ಟಿ ಡ್ಯಾಂ) 123.081 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದ್ರೆ ಮಳೆಯಾಗದ ಕಾರಣ ಜಲಾಶಯದಲ್ಲಿ ಕೇವಲ 18.939 ಟಿಎಂಸಿ ನೀರಿತ್ತು. ಜಲಚರಗಳಿಗಾಗಿ ಮೀಸಲಿರಿಸಿದ ಡೆಡ್ ಸ್ಟೋರೇಜ್ ಹೊರತುಪಡಿಸಿ ಕೇವಲ 1.319 ಟಿಎಂಸಿ ನೀರು ಸಂಗ್ರಹವಿತ್ತು.

ಕೃಷಿ ಚಟುವಟಿಕೆಗಂತೂ‌ ಮೊದಲೇ ನೀರಿರಲಿಲ್ಲ, ಕುಡಿಯಲು ನೀರಿನ ಕೊರತೆಯೂ ಎದುರಾಗಿತ್ತು. ಇನ್ನೂ 15-20 ದಿನಕ್ಕಾಗುವಷ್ಟು ಕುಡಿಯುವ ನೀರು ಮಾತ್ರ ಜಲಾಶಯದಲ್ಲಿತ್ತು. ನಿರೀಕ್ಷಿತ ಮಳೆಯಿಲ್ಲದೆ ಜಿಲ್ಲೆಯಲ್ಲಿನ ಹಳ್ಳ- ಕೊಳ್ಳ, ಕೆರೆಗಳೆಲ್ಲವೂ ಸೇರಿ ನೀರಿನ ಎಲ್ಲ ಸಂಪನ್ಮೂಲಗಳು ಬತ್ತಿಹೋಗಿದ್ದವು. ಇದರಿಂದ ಜಿಲ್ಲೆಯ ಜನರು ಕಂಗಾಲಾಗಿದ್ದರು. ಆದ್ರೀಗ ಡೆಡ್ ಸ್ಟೋರೇಜ್ ಹೊರತುಪಡಿಸಿ ನೀರಿನ ಲಭ್ಯತೆ 2.927 ಟಿಎಂಸಿಯಷ್ಟಿದೆ.

ಮಹಾರಾಷ್ಟ್ರ ಮಳೆ ಮೇಲೆ ಎಲ್ಲರ ಚಿತ್ತ: ಮಹಾರಾಷ್ಟ್ರದಲ್ಲಿ ಮಳೆಯಾದ್ರೆ ಕೃಷ್ಣಾ ನದಿಯೊಡಲು ತುಂಬುತ್ತದೆ. ಆದ್ದರಿಂದ ನದಿ ಪಾತ್ರದ ಜನರು ಮಹಾಮಳೆಯತ್ತ ಮುಖ ಮಾಡಿದ್ದಾರೆ. ಇದೀಗ ಅಲ್ಪ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದುಬರುತ್ತಿದೆ.

ನಾರಾಯಣಪುರ ಜಲಾಶಯಕ್ಕಿಲ್ಲ ಹೊರಹರಿವು: ಈಗಷ್ಟೇ ಆಲಮಟ್ಟಿ ಜಲಾಯಶಕ್ಕೆ ಒಳಹರಿವು ದಾಖಲಾದ್ದರಿಂದ ನಾರಾಯಣಪುರ ಜಲಾಶಯಕ್ಕೆ ಹೊರಹರಿವು ಇನ್ನೂ ಆರಂಭವಾಗಿಲ್ಲ.

ಮಳೆಗಾಗಿ ಪ್ರಾರ್ಥನೆ: ಮುಂಗಾರು ಆರಂಭವಾಗಿ ತಿಂಗಳು ಕಳೆದರೂ ಮಳೆರಾಯ ಮಾತ್ರ ಮುನಿಸಿಕೊಂಡಿರುವುದು ಜನರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ರೈತರು ಮುಂಗಾರು ಬೆಳೆ ಬಿತ್ತಿ ವರುಣ ದೇವನ ಕಡೆ ಮುಖ ಮಾಡಿದ್ದಾರೆ. ಇತ್ತ ನೀರಿನ ಸಂಪನ್ಮೂಲಗಳೆಲ್ಲವೂ ಖಾಲಿಯಾಗಿ ಕುಡಿಯುವ ನೀರಿಗೂ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗುವ ಹಂತದಲ್ಲಿದೆ. ಆದ್ದರಿಂದ ಮಳೆಗಾಗಿ ಜನರು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: ಮುಂಗಾರು ವಿಳಂಬ: ವಿಜಯಪುರದ ಆಲಮಟ್ಟಿ ಜಲಾಶಯದಲ್ಲಿ ಕುಸಿಯುತ್ತಿದೆ ನೀರಿನ ಮಟ್ಟ

ಭಾರಿ ಮಳೆಗೆ ಪೊಲೀಸ್‌ ಠಾಣೆ ಮುಳುಗಡೆ; ಆರೋಪಿಯನ್ನು ದೋಣಿಯಲ್ಲಿ ಕೋರ್ಟ್‌ಗೆ ಕರೆದೊಯ್ದ ಪೊಲೀಸರು!

Last Updated : Jul 13, 2023, 2:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.