ETV Bharat / state

ಹಾಸ್ಟೆಲ್​ ಆಹಾರ ಪೂರೈಕೆಯಲ್ಲಿ ವ್ಯತ್ಯಯ ಆರೋಪ: ವಿದ್ಯಾರ್ಥಿಗಳಿಂದ ವಿಜಯಪುರ ಡಿಸಿ ಮನೆಗೆ ಮುತ್ತಿಗೆ

author img

By ETV Bharat Karnataka Team

Published : Nov 18, 2023, 10:48 AM IST

Updated : Nov 18, 2023, 1:25 PM IST

ವಿಜಯಪುರ ಜಿಲ್ಲೆಯ ಹಿಂದುಳಿದ ವರ್ಗಗಳ ವಸತಿ ನಿಲಯದ ವಿದ್ಯಾರ್ಥಿಗಳು ಅಡುಗೆ ಸಿಬ್ಬಂದಿ ವಿರುದ್ಧ ಡಿಸಿ ಮನೆಯ ಎದುರು ಪ್ರತಿಭಟನೆ‌ ನಡೆಸಿರುವ ಘಟನೆ ನಡೆದಿದೆ.

protest
ಪ್ರತಿಭಟನೆ

ಸಮಸ್ಯೆ ಕುರಿತು ದಲಿತ ವಿದ್ಯಾರ್ಥಿ ಪರಿಷತ್‌ ಮುಖಂಡ ಅಕ್ಷಯ್​ ಹೇಳಿಕೆ

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸಿ ಮನೆಯ ಎದುರು ವಿದ್ಯಾರ್ಥಿಗಳು ಅಹೋರಾತ್ರಿ ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ. ವಿದ್ಯಾರ್ಥಿಗಳು ಇಲ್ಲಿನ ಅಂಬೇಡ್ಕರ್​​​ ಸರ್ಕಲ್‌ನಲ್ಲಿರುವ ಜಿಲ್ಲಾಧಿಕಾರಿ ಮನೆ ಎದುರು‌ ಪ್ರತಿಭಟನೆ‌ ನಡೆಸಿದ್ದಾರೆ. ಬಿಸಿಎಂ ಹಾಸ್ಟೆಲ್​ ವಿದ್ಯಾರ್ಥಿಗಳು ದಲಿತ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಿದ್ದಾರೆ.

ಹಾಸ್ಟೆಲ್​ನಲ್ಲಿ ಆಹಾರ ಪೂರೈಕೆಯಲ್ಲಿ ವ್ಯತ್ಯಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮತ್ತು ಅಡುಗೆ ಮಾಡುವ ಸಿಬ್ಬಂದಿ ಸರಿಯಾಗಿ ಅಡುಗೆ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ. ಅಡುಗೆ ಸಹಾಯಕ ತಮಗೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ದೂರಿದ ವಿದ್ಯಾರ್ಥಿಗಳು ಮತ್ತು ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರು ಸ್ಥಳಕ್ಕೆ ಡಿಸಿ ಆಗಮಿಸಲೇಬೇಕು ಎಂದು ಪಟ್ಟು ಹಿಡಿದಿದ್ದರು. ಪ್ರತಿಭಟನಾ ಸ್ಥಳಕ್ಕೆ ಬಿಸಿಎಂ ಅಧಿಕಾರಿಗಳು ಆಗಮಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಮತ್ತು ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

ಪ್ರತಿಭಟನೆ ಕುರಿತು ದಲಿತ ವಿದ್ಯಾರ್ಥಿ ಪರಿಷತ್‌ ಮುಖಂಡ ಅಕ್ಷಯ್​ ಮಾತನಾಡಿ, "ವಿಜಯಪುರ ಜಿಲ್ಲೆಯ ಹಿಂದುಳಿದ ಇಲಾಖೆಯ ಅಧೀನದಲ್ಲಿ ಇರುವಂಥ ಮೆಟ್ರಿಕ್​ ಪೂರ್ವ ವಸತಿ ನಿಲಯದಲ್ಲಿ ಒಂದು ವಾರದಿಂದ ಯಾವುದೇ ವಿದ್ಯಾರ್ಥಿಗಳಿಗೆ ಅನ್ನ, ನೀರು ಊಟ ಕೊಡದೆ ಉಪವಾಸ ಕೆಡವಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇದು ಅಸಹ್ಯಕರ ಘಟನೆಯಾಗಿದೆ ಎಂದು ನಾವು ಭಾವಿಸುತ್ತೇವೆ. ಕಾರಣ ಅಲ್ಲಿ ಇರುವಂಥಹ ಸಿಬ್ಬಂದಿಗಳು ದುರುದ್ದೇಶವನ್ನು ಇಟ್ಟುಕೊಂಡು ವಿದ್ಯಾರ್ಥಿಗಳನ್ನು ಉಪವಾಸ ಕೆಡವಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುವುದು, ಅವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ದೌರ್ಜನ್ಯವನ್ನು ನಾವು ಖಂಡಿಸಿ ಜಿಲ್ಲಾಧಿಕಾರಿ ನಿವಾಸದ ಮುಂದೆ ಪ್ರತಿಭಟನೆ ಮಾಡುತ್ತಿದ್ದೇವೆ. ವಸತಿ ನಿಲಯದ ವಿದ್ಯಾರ್ಥಿಗಳನ್ನು ಉಪವಾಸವಿಟ್ಟಿದ್ದು ಯಾತಕ್ಕಾಗಿ ಎಂದು ಪ್ರಶ್ನಿಸಿದ್ದಾರೆ?.

ಅಲ್ಲದೆ ಇಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ಅನಧಿಕೃತವಾಗಿ ಬಂದು ಸಿಬ್ಬಂದಿಗಳ ಮೇಲೆ ದಬ್ಬಾಳಿಕೆ ಮಾಡಿ ವಿದ್ಯಾರ್ಥಿಗಳನ್ನು ಉಪವಾಸವಿಟ್ಟಿದ್ದಾರೆ. ಈ ವಿಚಾರವನ್ನು ಇಲಾಖೆಯ ಗಮನಕ್ಕೆ ತಂದರೂ ಕೂಡ ವಿದ್ಯಾರ್ಥಿಗಳ ಪರವಾಗಿ ಯಾವುದೇ ಸ್ಪಂದನೆ ನೀಡದೆ ಇರುವುದರಿಂದ ನಾವು ನೇರವಾಗಿ ಜಿಲ್ಲಾಧಿಕಾರಿಗಳ ನಿವಾಸಕ್ಕೆ ಮುತ್ತಿಗೆ ಹಾಕಿದ್ದೇವೆ. ನಮಗೆ ಸೂಕ್ತ ನ್ಯಾಯ ನೀಡಬೇಕು ಎಂದು ಮಾಧ್ಯಮದವರ ಮುಖಾಂತರ ಮನವಿ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: ಯಾದಗಿರಿ: ಕಲುಷಿತ ನೀರು ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ, ಡಿಸಿ ಪರಿಶೀಲನೆ

Last Updated :Nov 18, 2023, 1:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.