ETV Bharat / state

ಮಳೆಗಾಗಿ ವಿಚಿತ್ರ ಆಚರಣೆ: ಸ್ಮಶಾನದಲ್ಲಿ ಹೂತಿದ್ದ ಸಮಾಧಿ ಅಗೆದು, ಶವಗಳಿಗೆ ನೀರುಣಿಸಿದ ಗ್ರಾಮಸ್ಥರು!

author img

By

Published : Jun 25, 2023, 7:32 PM IST

Updated : Jun 25, 2023, 8:53 PM IST

ಸ್ಮಶಾನದಲ್ಲಿ ಹೂತಿದ್ದ ಶವಗಳಿಗೆ ನೀರುಣಿಸಿ ಮಳೆಗಾಗಿ ಪ್ರಾರ್ಥಿಸಿರುವ ವಿಚಿತ್ರ ಆಚರಣೆ ವಿಜಯಪುರದಲ್ಲಿ ನಡೆದಿದೆ.

Etv Bharatkalakere-villagers-celebrated-a-strange-ritual-for-rain-in-vijayapura
ಮಳೆಗಾಗಿ ವಿಚಿತ್ರ ಆಚರಣೆ: ಸ್ಮಶಾನದಲ್ಲಿ ಹೂತಿದ್ದ ಸಮಾಧಿ ಅಗೆದು, ಶವಗಳಿಗೆ ನೀರುಣಿಸಿದ ಗ್ರಾಮಸ್ಥರು

ಸ್ಮಶಾನದಲ್ಲಿ ಹೂತಿದ್ದ ಸಮಾಧಿ ಅಗೆದು, ಶವಗಳಿಗೆ ನೀರುಣಿಸಿದ ಗ್ರಾಮಸ್ಥರು

ವಿಜಯಪುರ: ರಾಜ್ಯದಲ್ಲಿ ವಾಡಿಕೆಯಂತೆ ಆಗಬೇಕಾಗಿದ್ದ ಮುಂಗಾರು ಮಳೆ ವಿಳಂಬವಾಗಿದೆ. ಹೀಗಾಗಿ ರಾಜ್ಯದ ಹಲವೆಡೆ ಮಳೆಗಾಗಿ ಪ್ರಾರ್ಥಿಸಿ ಕತ್ತೆ ಮದುವೆ, ಕಪ್ಪೆ ಮದುವೆ, ದೇವರಿಗೆ ನೀರುಣಿಸುವುದು ಸೇರಿದಂತೆ ವಿವಿಧ ರೀತಿಯ ಆಚರಣೆ ಮತ್ತು ಸಂಪ್ರದಾಯವನ್ನು ಈಗಲೂ ಗ್ರಾಮೀಣ ಪ್ರದೇಶದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಸ್ಮಶಾನದಲ್ಲಿ ಹೂತಿದ್ದ ಶವಗಳಿಗೆ ನೀರುಣಿಸಿ ಮಳೆಗಾಗಿ ಪ್ರಾರ್ಥಿಸಿರುವ ವಿಚಿತ್ರ ಆಚರಣೆ ಬೆಳಕಿಗೆ ಬಂದಿದೆ.

ಇದು ವಿಚಿತ್ರ ಸಂಪ್ರದಾಯವಾದರೂ ಸಹ ಗ್ರಾಮಸ್ಥರು ಈ ಆಚರಣೆಯನ್ನು ಹಲವು ದಶಕಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ನೀರು ತುಂಬಿದ ಟ್ಯಾಂಕರ್‌ನೊಂದಿಗೆ ಸ್ಮಶಾನಕ್ಕೆ ತೆರಳಿದ ಗ್ರಾಮಸ್ಥರು ಸಮಾಧಿಗಳನ್ನು ಅಗೆದು ಕೊಳವೆ ಮೂಲಕ ಶವಗಳಿಗೆ ನೀರುಣಿಸಿ, ಮಳೆಗಾಗಿ ಪ್ರಾರ್ಥಿಸಿದರು.

ರೈತ ವಾಗೇಶ ಹಿರೇಮಠ ಮಾತನಾಡಿ, ಸ್ಮಶಾನದಲ್ಲಿ ಹೂತಿದ್ದ ಶವಗಳಿಗೆ ನೀರುಣಿಸಿದ 10 ದಿನಗಳೊಳಗೆ ಮಳೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಕಳೆದ ವರ್ಷ ಸಹ ಮಳೆ ವಿಳಂಬವಾದಾಗ ಇದೇ ರೀತಿ ಶವಗಳಳಿಗೆ ಸಂತೃಪ್ತಿ ಪಡೆಸಿದ್ದೆವು. ಈಗ ಮತ್ತೊಮ್ಮೆ ಅದೇ ಪ್ರಯೋಗ ಮಾಡಲಾಗುತ್ತಿದೆ. ಈ ಬಾರಿಯೂ ಮಳೆ ಖಂಡಿತವಾಗಿ ಬರುತ್ತದೆ ನಂಬಿಕೆ ಇದೆ. ಇನ್ನು ಹತ್ತು ದಿನಗಳಲ್ಲಿ ಭಾರಿ ಮಳೆಯಾಗಿ, ಬಿತ್ತನೆ ಕಾರ್ಯ ಆರಂಭವಾಗಲಿದೆ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ: ಮುಂಗಾರು ಮುನಿಸು, ದುರ್ಗಾದೇವಿಯನ್ನು ಗ್ರಾಮದ ಗಡಿ ದಾಟಿಸಿ ಮಳೆಗಾಗಿ ಮೊರೆಯಿಟ್ಟ ದೇವಗಿರಿ ಜನರು

ಸಾಮೂಹಿಕ ಪ್ರಾರ್ಥನೆ ವೇಳೆ ಮಳೆಗಾಗಿ ಕಣ್ಣೀರಿಟ್ಟ ಮುಸ್ಲಿಂ ಬಾಂಧವರು: ಇತ್ತೀಚಿಗೆ ಮಳೆಗಾಗಿ ಕೈಗೊಂಡಿದ್ದ ಸಾಮೂಹಿಕ ಪ್ರಾರ್ಥನೆ ವೇಳೆ ಮುಸ್ಲಿಂ ಬಾಂಧವರು ಕಣ್ಣೀರು ಹಾಕಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿತ್ತು. ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದರೂ ಬೆಳಗಾವಿ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗುತ್ತಿಲ್ಲ. ಇದರಿಂದ ನಗರದ ಅಂಜುಮನ್ ಸಂಸ್ಥೆಯ ಈದ್ಗಾ ಮೈದಾನದಲ್ಲಿ ಮಳೆಗಾಗಿ ಸಾವಿರಾರು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದ್ದರು. ಧರ್ಮಗುರು ಮುಫ್ತಿ ಅಬ್ದುಲ್ ಅಜೀಜ್ ಖಾಜಿ ನೇತೃತ್ವದಲ್ಲಿ ನಡೆದಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾವುಕರಾದ ಮುಸ್ಲಿಂ ಬಾಂಧವರು 'ಅಲ್ಹಾ ಮಳೆ ಕರುಣಿಸು' ಎಂದು ಪ್ರಾರ್ಥಿಸಿದ್ದರು.

ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಬೆಳಗಾವಿ ಉತ್ತರ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಮಾಧ್ಯಮಗಳ ಜೊತೆಗೆ ಮಾತನಾಡಿ, ಮೇ ತಿಂಗಳಲ್ಲೇ ಬೆಳಗಾವಿ ಮತ್ತು ಉತ್ತರಕರ್ನಾಟಕದಲ್ಲಿ ಮಳೆ ಆರಂಭವಾಗುತ್ತಿತ್ತು. ಅದರೆ, ಜೂನ್ ಕೊನೆ ವಾರ ಬಂದರೂ ಮಳೆ ಆಗುತ್ತಿಲ್ಲ. ಇದರಿಂದ ರಾಕಸಕೊಪ್ಪ ಮತ್ತು ಹಿಡಕಲ್ ಡ್ಯಾಮ್​ನಲ್ಲಿ ನೀರು ಖಾಲಿಯಾಗುತ್ತಿದೆ. ಹೀಗಾಗಿ ಮಳೆಯಾಗಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ಇವತ್ತು ಮಳೆ ಆಗದಿದ್ದರೆ ಮತ್ತೆ ನಾಳೆ ಪ್ರಾರ್ಥನೆ ಮಾಡುತ್ತೇವೆ ಎಂದಿದ್ದರು.

ಪ್ರಾರ್ಥನೆಯಲ್ಲಿ ಅನೇಕರು ಕಣ್ಣೀರು ಹಾಕಿದ ಬಗ್ಗೆ ಪ್ರತಿಕ್ರಿಯಿಸಿದ ಆಸೀಫ್ ಸೇಠ್, ಜನಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇದನ್ನು ನೆನೆದು ಪ್ರಾರ್ಥನೆ ವೇಳೆ ಕೆಲವರು ಕಣ್ಣೀರು ಹಾಕಿ ಪ್ರಾರ್ಥಿಸಿದ್ದಾರೆ. ಎಲ್ಲ ಧರ್ಮಿಯರು ಅವರ ಆಚಾರಗಳಿಗೆ ತಕ್ಕ ಹಾಗೆ ಪೂಜೆ ಸಲ್ಲಿಸುತ್ತಿದ್ದಾರೆ ಎಂದಿದ್ದರು.

Last Updated : Jun 25, 2023, 8:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.