ವಿವಾಹೇತರ ಸಂಬಂಧ : ಮಹಿಳೆಯೊಂದಿಗೆ ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದ ವ್ಯಕ್ತಿಯನ್ನು ಹೊಡೆದು‌ ಕೊಂದ ಮಹಿಳೆಯ ಸಂಬಂಧಿಕರು

author img

By

Published : Jan 22, 2023, 7:57 PM IST

Updated : Jan 22, 2023, 8:30 PM IST

illicit-relationship-a-person-killed-by-lovers-family-in-vijayapur

ವಿವಾಹೇತರ ಸಂಬಂಧ - ವ್ಯಕ್ತಿಯನ್ನು ಕೊಂದ ಮಹಿಳೆಯ ಸಂಬಂಧಿಕರು - ವಿಜಯಪುರದ ಬಸವನ ಬಾಗೇವಾಡಿ ತಾಲೂಕಿನ ಹತ್ತರಕಿಹಾಳ ಗ್ರಾಮದಲ್ಲಿ ಪ್ರಕರಣ

ವಿಜಯಪುರ: ಮಹಿಳೆಯೊಬ್ಬರ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಆಕೆಯ ಸಂಬಂಧಿಕರು ಹತ್ಯೆ ಮಾಡಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ಹತ್ತರಕಿಹಾಳ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ಹತ್ತರಕಿಹಾಳ ಗ್ರಾಮದ ಸಂಗಪ್ಪ ಭೀಮಪ್ಪ ಹೂಗಾರ (28) ಎಂದು ಗುರುತಿಸಲಾಗಿದೆ. ಜನವರಿ 19ರಂದು ಸಂಗಪ್ಪ ತನ್ನ ಮನೆಯಲ್ಲಿ ವಿವಾಹಿತ ಮಹಿಳೆ ಜತೆ ಇರುವಾಗ ಸಂಬಂಧಿಕರ ಕೈಗೆ ಸಿಕ್ಕಿ‌ಹಾಕಿಕೊಂಡಿದ್ದಾನೆ. ಇದರಿಂದ ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಸಂಗಪ್ಪನಿಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಎಫ್​ಐಆರ್​ ದಾಖಲಾಗಿದೆ.

ಘಟನೆ ವಿವರ : ಹತ್ಯೆಯಾದ ಸಂಗಪ್ಪ ಈಗಾಗಲೇ ಮದುವೆಯಾಗಿದ್ದನು. ಆದರೂ ಇದೇ ಗ್ರಾಮದ ಮಹಿಳೆ ಜತೆ ವಿವಾಹೇತರ ಸಂಬಂಧ ಹೊಂದಿದ್ದ.‌ ಜ.19ರಂದು ಸಂಗಪ್ಪ ಮಹಿಳೆಯ ಜತೆ ತನ್ನ ಮನೆಯಲ್ಲಿದ್ದಾಗ ಈ ವಿಷಯ ಮಹಿಳೆಯ ಸಂಬಂಧಿಕರಿಗೆ ಗೊತ್ತಾಗಿದ್ದು, ಇಬ್ಬರೂ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಇದರಿಂದ ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಸಂಗಪ್ಪನಿಗೆ ಬಡಿಗೆಯಲ್ಲಿ ಹಲ್ಲೆ ಮಾಡಿದ್ದಾರೆ. ನಂತರ ರಾಜಿ ಸಂಧಾನ ಮಾಡಲು ಬೈಕ್​ನಲ್ಲಿ ದೇಗಿನಾಳ ಗ್ರಾಮದ ಹೊಲಕ್ಕೆ ಆತನನ್ನು‌ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ಸಂಗಪ್ಪನಿಗೆ ಕೈ ಕಾಲು‌ ಕಟ್ಟಿ ಹಾಕಿ ಮನಬಂದಂತೆ ಮತ್ತೆ ಥಳಿಸಿದ್ದಾರೆ. ಇದರಿಂದ ಸಂಗಪ್ಪ ಗಂಭೀರ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದು, ಅದಾಗಲೇ ಸಂಗಪ್ಪ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್​ ವರದಿಯಲ್ಲಿದೆ.

ಘಟನೆ ಸಂಬಂಧ ಮೃತ ಸಂಗಪ್ಪ ಹೂಗಾರ ಪತ್ನಿ ನೀಡಿದ ದೂರಿನಂತೆ ಒಟ್ಟು 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಪರಸಪ್ಪ ಕೊಲಕಾರ, ಬಸಪ್ಪ ಕೊಲಕಾರ, ಮಲ್ಲಪ್ಪ ಕೊಲಕಾರ ಹಾಗೂ ಪ್ರಭು ನಾಟೇಕಾರ ಅವರನ್ನು ಬಂಧಿಸಲಾಗಿದೆ. ಇನ್ನು, ಕೃತ್ಯದಲ್ಲಿ ಭಾಗಿಯಾದ ನಾಲ್ವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವು ಕಡಿದು ಮಹಿಳೆ ಸಾವು: ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಡಿತದಿಂದ ಮಹಿಳೆ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ನಡೆದಿದೆ.‌ ರೈತ ಮಹಿಳೆ ಲಕ್ಷ್ಮೀಬಾಯಿ ವಿಠೋಬಾ ಪೂಜಾರಿ(45) ಮೃತ ದುರ್ದೈವಿ ಯಾಗಿದ್ದಾರೆ. ವಿಷಪೂರಿತ ಹಾವಿನ ಕಡಿತಕ್ಕೊಳಗಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.‌

ಅತ್ಯಾಚಾರ ಆರೋಪಿಗಳ ಬಂಧನ : ವಿಜಯಪುರ ನಗರದಲ್ಲಿ ಮಾನಸಿಕ ಅಸ್ವಸ್ಥ ಯುವತಿ ಮೇಲೆ ಕೆಲ ದಿನಗಳ ಹಿಂದೆ ಅತ್ಯಾಚಾರ ಎಸಗಿದ ಘಟನೆ ನಡೆದಿತ್ತು. ಕಳೆದ ಜನವರಿ 17ರ ತಡರಾತ್ರಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಲಾಗಿತ್ತು. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತ ಯುವತಿಯು ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್​​ಗಾಗಿ ಕಾಯುತ್ತಿದ್ದಳು. ಇದೇ ವೇಳೆ ಮೂವರು ಯುವಕರು ರಾತ್ರಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಳಿಕ ಯುವತಿಯ ವರ್ತನೆ ನೋಡಿದ ಯುವಕರು ನಿಮ್ಮ ಊರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಪುಸಲಾಯಿಸಿ ತಮ್ಮ ಬೈಕ್​ನಲ್ಲಿ ಕರೆದೊಯ್ದಿದ್ದಾರೆ. ಬಳಿಕ ನಗರದ ತರಕಾರಿ ಮಾರುಕಟ್ಟೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಓರ್ವ ಯುವಕ ಆಕೆಯ ಮೇಲೆ ಹಲ್ಲೆ ನಡೆಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಉಳಿದ ಇಬ್ಬರು ಇದಕ್ಕೆ ಸಹಾಯ ಮಾಡಿದ್ದರು. ಈ ಸಂಬಂಧ ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ದಾಖಲೆಗಳಿಲ್ಲದೆ ಅಕ್ರಮವಾಗಿ ಹಣ ಸಾಗಣೆ: 1.14 ಕೋಟಿ ರೂ. ಹಣ ಜಪ್ತಿ, ಓರ್ವನ ಬಂಧನ

Last Updated :Jan 22, 2023, 8:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.