ವಿಜಯಪುರ: ಯುವಕರಿಗೆ ಸಮಯ ಸಿಕ್ಕರೆ ಮೋಜು ಮಸ್ತಿಗೆ ಮೀಸಲಿಡುವ ಕಾಲ ಇದು. ಆದರೆ ವಿಜಯಪುರದಲ್ಲಿ ಕೆಲ ಯುವಕರು ಸಿಕ್ಕ ಸಮಯದಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿಯೇ ಉದ್ಯಮಿ ಪ್ರೇಮಾನಂದ ಹತ್ತಿ ಎಂಬುವವರು ಗೆಳೆಯರ ಬಳಗ ಎಂಬ ಸಂಘಟನೆ ಸ್ಥಾಪನೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಬಸವನಾಡು ವಿಜಯಪುರ ನಗರದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಗೆಳೆಯರ ಬಳಗ ಎಂಬ ತಂಡವೊಂದು ಪ್ರತಿ ಸೋಮವಾರ ಪ್ರಸಾದ ವಿತರಿಸುತ್ತದೆ. ಹೀಗೆ ಸತತ 360 ಸೋಮವಾರ ಪ್ರಸಾದ ವಿತರಿಸುವ ಮೂಲಕ ನಿನ್ನೆಗೆ ಯಶಸ್ವಿಯಾಗಿ 6 ವರ್ಷ ಪೂರೈಸಿದೆ.
ಉದ್ಯಮಿ ಪ್ರೇಮಾನಂದ ಹತ್ತಿ 2018ರಿಂದ ಸಿದ್ದೇಶ್ವರ ದೇವಸ್ಥಾನದಲ್ಲಿ ಬಾಳೆಹಣ್ಣು, ಸೇಬು ಹಣ್ಣುಗಳನ್ನು ವಿತರಿಸುತ್ತಿದ್ದಾರೆ. ಪ್ರೇಮಾನಂದ ಗೆಳೆಯರ ಬಳಗದಿಂದ ಪ್ರತಿ ಸೋಮವಾರ ಬೆಳಿಗ್ಗೆ ಶ್ರೀ ಸಿದ್ದೇಶ್ವರನಿಗೆ ಅಭಿಷೇಕ, ಪೂಜೆ ಮಾಡಿಸಿದ ಬಳಿಕ ಪ್ರಸಾದ ವಿತರಣೆ ಮಾಡಲಾಗುತ್ತದೆ. ಸೋಮವಾರ 500 ಕ್ಕೂ ಹೆಚ್ಚು ಜನರಿಗೆ ಇಲ್ಲಿ ಪ್ರಸಾದ ವಿತರಿಸಲಾಗುತ್ತದೆ. ಪ್ರೇಮಾನಂದ ಗೆಳೆಯರ ಬಳಗದ ಹಲವು ಮಿತ್ರರು ಪ್ರಸಾದ ವಿತರಣೆಗೆ ಸಾಥ್ ನೀಡುತ್ತಾರೆ.
ಎರಡು ವರ್ಷಗಳ ಹಿಂದೆ ಹರಡಿದ್ದ ಕೊರೊನಾ ಸಂಕಷ್ಟದಲ್ಲಿಯೂ ದೇವಸ್ಥಾನದಲ್ಲಿ, ಪ್ರಸಾದ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಪೌಷ್ಟಿಕ ಆಹಾರ ವಿತರಿಸಲಾಗಿದೆ. 6ನೇಯ ವಾರ್ಷಿಕೋತ್ಸವದ ಅಂಗವಾಗಿ ನಿನ್ನೆ ಅಂಧ ಮಕ್ಕಳಿಗೆ ಸ್ವೆಟರ್ ವಿತರಿಸಿ ಸರಳವಾಗಿ ಸಂಭ್ರಮಿಸಿದರು. ಇನ್ನೂ ದೇವರ ಸೇವೆಗಾಗಿ ಪ್ರಾರಂಭವಾದ ಈ ಸೇವೆ ಇನ್ನೂ ಮುಂದುವರೆಸುವ ಆಸೆ ಈ ಗೆಳೆಯರ ಬಳಗದ್ದಾಗಿದೆ.
ಕೇವಲ ಪ್ರಸಾದ ವಿತರಣೆಗೆ ಮಾತ್ರ ಸೀಮಿತವಾಗದೆ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಬಡವರಿಗೆ ನಿರ್ಗತಿಕರಿಗೆ, ಪೌರ ಕಾರ್ಮಿಕರಿಗೆ ಗೆಳೆಯರ ಬಳಗ ಆಹಾರದ ಕಿಟ್ ವಿತರಿಸಿದೆ. ಕೊರೊನಾ ಲಸಿಕೆ ಕುರಿತು ಜಾಗೃತಿ ಮೂಡಿಸುವ ಮೂಲಕ ಲಸಿಕಾ ಕಾರ್ಯಕ್ರಮದಲ್ಲಿ ಎಲೆ ಮರೆ ಕಾಯಿಯಂತೆ ಕಾರ್ಯ ನಿರ್ವಹಿಸಿದೆ. ಶ್ರಾವಣ ಮಾಸದಲ್ಲಿ ಬರುವ ಭಕ್ತಾದಿಗಳಿಗೆ ಸಾಬು ದಾನಿ, ಹಣ್ಣಿನ ಪ್ರಸಾದ ವಿತರಿಸಿದೆ. ಶಿವರಾತ್ರಿಯಲ್ಲಿ ಕರ್ಜೂರ, ಶೇಂಗಾ ಹೀಗೆ ಹಲವು ತರಹದ ಪ್ರಸಾದ ವಿತರಿಸುವ ಮೂಲಕ ಭಕ್ತರ ಮೆಚ್ಚುಗೆ ಗಳಿಸಿದೆ. ಈ ಗೆಳೆಯರ ಬಳಗದ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ದೇವಸ್ಥಾನದ ಅರ್ಚಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ ಧಾರಾಕಾರ ಮಳೆ.. ಭೀಮಾ, ಕೃಷ್ಣಾ ನದಿ ಪಾತ್ರದ ಜನರಿಗೆ ಎಚ್ಚರಿಕೆ