ಮುದ್ದೇಬಿಹಾಳ(ವಿಜಯಪುರ): ಒಕ್ಕಲುತನ ಎಂದರೆ ಅದೊಂದು ಲಾಭದಾಯಕವಲ್ಲದ ಕೆಲಸ ಎನ್ನುವವರಿಗೆ ಇಲ್ಲೊಂದು ರೈತ ಕುಟುಂಬ ಮಾದರಿಯಾಗಿದೆ. ತಮಗಿರುವ ಒಂದು ಎಕರೆಯಲ್ಲಿ ಹಲವು ಬಗೆಯ ತರಕಾರಿ ಬೆಳೆಗಳನ್ನು ಬಿತ್ತಿ ಸೈ ಎನ್ನಿಸಿಕೊಂಡಿದ್ದೂ ಅಲ್ಲದೇ ವರ್ಷಕ್ಕೆ ಎರಡು ಲಕ್ಷ ರೂ.ಲಾಭವನ್ನು ಮಾಡಿಕೊಳ್ಳುತ್ತಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದ ರೈತ ನಿಜಲಿಂಗಪ್ಪ ಓಲೇಕಾರ ಕುಟುಂಬ ಇಂತಹದ್ದೊಂದು ಕೃಷಿ ಕಾಯಕದಲ್ಲಿ ನಿರತವಾಗಿದೆ. ತಮಗಿರುವ ಒಂದೇ ಎಕರೆಯಲ್ಲಿ ಏಳೆಂಟು ತರಹದ ಕಾಯಿಪಲ್ಯೆ ಬೆಳೆದಿದ್ದಾರೆ. ಟೊಮೇಟೊ, ಚವಳಿಕಾಯಿ, ಹಾಗಲಕಾಯಿ, ನುಗ್ಗೆ ಗಿಡ, ಹಿರೇಕಾಯಿ, ಬದನೆಕಾಯಿ, ಮೆಣಸಿನ ಕೃಷಿಮಾಡಿದ್ದಾರೆ. ಇದಲ್ಲದೇ ಪಾಲಕ್, ಕೊತ್ತಂಬರಿ, ಹುಣಚಕಿ ಕೂಡಾ ಬೆಳೆಯುತ್ತಿದ್ದಾರೆ.
ಬೆಳೆದಿರುವ ತರಕಾರಿಗೆ ಮುದ್ದೇಬಿಹಾಳ ಮಾರುಕಟ್ಟೆಯನ್ನು ಅವಲಂಬಿಸಿದ್ದು, ವರ್ಷಕ್ಕೆ ಮೂರು ಲಕ್ಷ ರೂ. ಆದಾಯ ಬರುತ್ತಿದ್ದು 60-70 ಸಾವಿರ ರೂ. ಖರ್ಚಾಗುತ್ತದೆ. ಐದು ಜನ ಹೊಲದಲ್ಲಿ ಕೆಲಸ ಮಾಡುತ್ತೇವೆ. ಮನೆಯ ಉಪ ಜೀವನಕ್ಕೂ ಕಾಯಿಪಲ್ಯೆ ಖರ್ಚು ಉಳಿಯುತ್ತಿದೆ ಎನ್ನುತ್ತಾರೆ ರೈತ ನಿಜಲಿಂಗಪ್ಪ ಓಲೇಕಾರ.
ಶೇಷ ಎಂದರೆ ಇವರ ಹೊಲದಲ್ಲಿ ಜೇನು ಕೃಷಿಗಾಗಿ ಡಬ್ಬಗಳನ್ನು ಇರಿಸುವ ಕಾರ್ಯ ಮಾಡುತ್ತಿದ್ದು ಕೃಷಿ ಹೊಂಡ ಇದೆ. ಲಭ್ಯವಿರುವ ಜಮೀನಿನಲ್ಲಿ ಸಾವಯವ ಗೊಬ್ಬರ ತಯಾರಿಸಲು ಗುಂಡಿ ವ್ಯವ್ಯಸ್ಥೆ ಮಾಡಿದ್ದಾರೆ. ಹಾಗೆ ಇರುವ ತಮ್ಮದೇ ಜಮೀನಿನಲ್ಲಿ ಪಕ್ಕದ ರೈತರ ಹೊಲಕ್ಕೆ ತಿರುಗಾಡಲು ರಸ್ತೆ ಬಿಟ್ಟಿದ್ದಾರೆ.
ಯೂಟ್ಯೂಬ್ ಸ್ಪೂರ್ತಿ: ಯುವ ರೈತ ದ್ಯಾಮಣ್ಣ ಓಲೇಕಾರ ಮಾತನಾಡಿ, ಯೂಟ್ಯೂಬ್ವೊಂದರಲ್ಲಿ ರೈತರೊಬ್ಬರ ವಿಡಿಯೋ ನೋಡಿ ಇಷ್ಟು ಕಡಿಮೆ ಜಮೀನಿನಲ್ಲಿ ಹೆಚ್ಚು ಬೆಳೆಯುವುದು. ಹಣ ಗಳಿಸುವುದು ಹೇಗೆ ಎಂಬುದನ್ನು ನೋಡಿಕೊಂಡಿದ್ದೆ. ಅದರಲ್ಲಿ ಕಬ್ಬಿನ ಬದುವಿನ ಮೇಲೆ, ಟೊಮೇಟೊ ಬದುವಿನ ಮೇಲೆ, ಕರಿಬೇವು ಹೀಗೆ ನಾನಾ ಬೆಳಗಳನ್ನು ಜಮೀನು ವ್ಯರ್ಥವಾಗಿ ಬಿಡದೇ ವಿವಿಧ ರೀತಿಯ ತರಕಾರಿಯನ್ನು ಬೆಳೆದು ವರ್ಷಕ್ಕೆ ಹನ್ನೆರಡು ಲಕ್ಷ ರೂ.ಆದಾಯ ಗಳಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಅವರಿಗೆ ದಿನಕ್ಕೆ ಐದು ಸಾವಿರದಂತೆ ಆದಾಯ ಬರುತ್ತಿದೆ. ಅಂತವರನ್ನು ಮಾದರಿ ಇಟ್ಟುಕೊಂಡು ಈ ಎಲ್ಲ ಬೆಳೆಯನ್ನು ಬೆಳೆಯುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಮಡಿಕೇರಿಯಲ್ಲಿ ಡಿ. 24 ಮತ್ತು 25 ರಂದು 'ಜೇನು ಹಬ್ಬ'