ETV Bharat / state

ವಿಜಯಪುರದಲ್ಲಿ ಮತ್ತೆ ಭೂಕಂಪನ: ಭಾರಿ ಸದ್ದು.. ಭಯಭೀತರಾದ ಜನತೆ

author img

By

Published : Jan 12, 2023, 8:41 PM IST

ವಿಜಯಪುರದಲ್ಲಿ ಮತ್ತೆ ಭೂಕಂಪನ - ನಗರದ ಹಲವೆಡೆ ಭೂಕಂಪದ ಅನುಭವ - ಭಾರೀ ಸದ್ದಿಗೆ ಭಯಭೀತರಾದ ಜನತೆ

earthquake-in-vijaypur
ವಿಜಯಪುರದಲ್ಲಿ ಮತ್ತೆ ಭೂಕಂಪನ : ಭಾರಿ ಸದ್ದು.. ಭಯಭೀತರಾದ ಜನತೆ

ವಿಜಯಪುರ : ನಗರದಲ್ಲಿ ಇಂದು ಸಂಜೆ ಭಾರಿ ಸದ್ದಿನೊಂದಿಗೆ ಮತ್ತೆ ಭೂಕಂಪದ ಅನುಭವವಾಗಿದೆ. ಸಂಜೆ ಸುಮಾರು 5.45ರ ಹೊತ್ತಿಗೆ ಭೂಕಂಪ ಉಂಟಾಗಿದೆ ಎಂದು ತಿಳಿದು ಬಂದಿದೆ. ಕೂಡಲೇ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ನಗರದ ಗೋಳಗುಮ್ಮಟ, ಕೀರ್ತಿ ನಗರ, ಜಲನಗರ, ತೊರವಿ, ಗಣೇಶ ನಗರ ಸೇರಿದಂತೆ ಹಲವೆಡೆ ಭಾರಿ ಸದ್ದು ಕೇಳಿ ಬಂದಿದೆ. ಅಲ್ಲದೇ ಹೊರವಲಯದ ಜೈನಾಪುರ‌ ಕ್ರಾಸ್ ಸೇರಿದಂತೆ ನಗರ ಸುತ್ತಮುತ್ತಲಿನ ಪ್ರದೇಶದಲ್ಲೂ ಭೂಕಂಪದ ಜೊತೆ ಭಾರಿ ಸದ್ದು ಕೇಳಿ ಬಂದಿದೆ ಎಂದು ಹೇಳಲಾಗಿದೆ. ಆದರೆ ಆಲಮಟ್ಟಿಯಲ್ಲಿರುವ ಭೂ ಮಾಪನ ಕೇಂದ್ರದಲ್ಲಿ ಭೂಮಿ‌ ಕಂಪಿಸಿದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಜಿಲ್ಲಾಡಳಿತ ಮೂಲಗಳು ಖಚಿತ ಪಡಿಸಿವೆ.

ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಭೂಮಿಯಲ್ಲಿನ ತೇವಾಂಶ ಹೆಚ್ಚಾಗಿದೆ. ಇದು ತಾಪಮಾನದಲ್ಲಿ ಏರಿಳಿತ, ಭೂಮಿಯಿಂದ ಶಬ್ದ ಕೇಳುವುದು, ಭೂಮಿ‌ ಕಂಪನಕ್ಕೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಹಲವು ಬಾರಿ ಭೂಮಿ‌ ಕಂಪಿಸಿದ ಅನುಭವವಾದ ಮೇಲೆ ಜಿಲ್ಲಾಡಳಿತದ ಮನವಿ ಮೇರೆಗೆ ಭೂಗರ್ಭ ಇಲಾಖೆ ಅಧಿಕಾರಿಗಳ ತಂಡ ಜಿಲ್ಲೆಗೆ ಆಗಮಿಸಿ ಪರಿಶೀಲನೆ ನಡೆಸಿತ್ತು.

ಇದನ್ನೂ ಓದಿ : ವಿಜಯಪುರದಲ್ಲಿ ಭೂಕಂಪನ.. ಸಾರ್ವಜನಿಕರಲ್ಲಿ ಹೆಚ್ಚಿದ ಭೀತಿ

ಆಲಮಟ್ಟಿ ಜಲಾಶಯಕ್ಕೆ ಮಹಾರಾಷ್ಟ್ರದಿಂದ ಅಧಿಕ ಪ್ರಮಾಣದ ನೀರು ಹರಿದು ಬರುವ ಕಾರಣ ಭೂಮಿಯಲ್ಲಿ ನೀರಿನ ಅಂಶ, ತೇವಾಂಶ ಹೆಚ್ಚಾಗಿ ಈ ರೀತಿ ಭೂ ಕಂಪನವಾಗುತ್ತಿರುವುದಾಗಿ ಹೇಳಲಾಗಿತ್ತು. ಇನ್ನು ಪದೇ ಪದೇ ಭೂಕಂಪನದ ಅನುಭವವಾಗುತ್ತಿರುವುದಕ್ಕೆ ಆಲಮಟ್ಟಿ ಜಲಾಶಯ ಭರ್ತಿಯಾಗಿರುವುದು ಮತ್ತು ಎನ್‌ಟಿಪಿಸಿ ಕಾರಣವಲ್ಲ. ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಉತ್ತಮ ಮಳೆಯಾಗಿದೆ.

ಮಳೆ ಹೆಚ್ಚಾದಾಗ ಮಾತ್ರ ಭೂಕಂಪನದ ಅನುಭವ ಉಂಟಾಗಿದೆ. ಹಾಗೆ ನೋಡಿದರೆ ಜಿಲ್ಲೆ ಬರಗಾಲ ಪೀಡಿತ ಪ್ರದೇಶವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಒಣಪ್ರದೇಶದಲ್ಲಿ ನೀರು ಹೆಚ್ಚು ನುಗ್ಗಿದೆ. ಇದರಿಂದಾಗಿ ಕಲ್ಲಿನ ಪದರಗಳು ಅಲುಗಾಡುತ್ತಿವೆ. ಇದರಿಂದ ದೊಡ್ಡ ಶಬ್ಧ ಉಂಟಾಗಿ ಕಂಪನ ಸೃಷ್ಟಿಯಾಗುತ್ತಿದೆ. ರಿಕ್ಟರ್ ಮಾಪಕದಲ್ಲಿ ಕಡಿಮೆ ಪ್ರಮಾಣದ ಭೂ ಕಂಪನದ ಅನುಭವವಾಗಿರುವ ಕಾರಣ ಜನತೆ ಹೆದರುವ ಅವಶ್ಯಕತೆ ಇಲ್ಲ ಎಂದು ನೈಸರ್ಗಿಕ ವಿಕೋಪ ಪರಿಶೀಲನಾ ತಂಡದ ಹಿರಿಯ ವೈಜ್ಞಾನಿಕ ಅಧಿಕಾರಿ ಜಗದೀಶ ಹೇಳಿದ್ದರು.

ಹಲವು ಬಾರಿ ಭೂಕಂಪದ ಅನುಭವ : ಈ ಹಿಂದೆ ಜಿಲ್ಲೆಯಲ್ಲಿ ಹಲವು ಭಾರಿ ಭೂಕಂಪನದ ಅನುಭವವಾಗಿತ್ತು. ಈಗ ಮತ್ತೆ ಭೂಕಂಪನವಾಗಿರುವುದು ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಈ ರೀತಿ ಪದೇ ಪದೇ ಭೂಕಂಪನದ ಅನುಭವವಾಗುತ್ತಿರುವ ಕಾರಣ ಕಳೆದ ವರ್ಷ ಗ್ರಾಮೀಣ ಪ್ರದೇಶದಲ್ಲಿ ಜನರು ಮನೆ ಹೊರಗಡೆ ಮಲಗಿಕೊಂಡು ಕಾಲ ಕಳೆದ ಪ್ರಸಂಗವು ನಡೆದಿತ್ತು. ಇನ್ನೂ ಇಂದು ಆಗಿರುವ ಭೂ ಕಂಪನದ ಬಗ್ಗೆ ಜಿಲ್ಲಾಡಳಿತ ಇನ್ನೂ ನಿಖರ ಮಾಹಿತಿ ನೀಡಬೇಕಾಗಿದೆ.

ಇದನ್ನೂ ಓದಿ : ವಿಜಯಪುರ: ಭೂಮಿ ಕಂಪಿಸಿದ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ, ಪರಿಶೀಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.