ETV Bharat / state

ಆಲಮಟ್ಟಿ ಜಲಾಶಯ ಬಹುತೇಕ ಭರ್ತಿ: ನದಿ ಪಾತ್ರದ ಜನರಿಗೆ ಎಚ್ಚರಿಕೆ

author img

By

Published : Aug 9, 2022, 2:00 PM IST

Almatti Dam: ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ತಟದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಒಳಹರಿವು ಪ್ರತಿ 24 ಗಂಟೆಗೊಮ್ಮೆ ಹೆಚ್ಚುತ್ತಿದೆ. ನೀರಿನ ಹರಿವು ಹೆಚ್ಚಾದರೆ ನಾಳೆಯೊಳಗಾಗಿ ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಯಿದೆ.

Almatti Dam
ಆಲಮಟ್ಟಿ ಜಲಾಶಯ

ವಿಜಯಪುರ: ಉತ್ತರ ಕರ್ನಾಟಕದ ಜೀವನದಿ ಆಲಮಟ್ಟಿ(ಲಾಲ್ ಬಹದ್ದೂರ ಶಾಸ್ತ್ರಿ) ಜಲಾಶಯ ಭರ್ತಿಗೆ ದಿನಗಣನೆ ಶುರುವಾಗಿದೆ. ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ತಟದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಒಳಹರಿವು ಪ್ರತಿ 24 ಗಂಟೆಗೊಮ್ಮೆ ಹೆಚ್ಚುತ್ತಿದೆ. ಇದರಿಂದ ಹೊರ ಹರಿವು ಸಹ ಹೆಚ್ಚಾಗಿದ್ದು, ನಿನ್ನೆ ಮತ್ತು ಇಂದು 1 ಲಕ್ಷ ಕ್ಯೂಸೆಕ್ ನೀರನ್ನು ಹರಿ ಬಿಡಲಾಗುತ್ತಿದೆ.

ನಾಳೆಯೊಳಗೆ ಭರ್ತಿಯಾಗುವ ಸಾಧ್ಯತೆ: ಜಲಾಶಯದ ಒಳಹರಿವು ಹೆಚ್ಚಾದ ಪರಿಣಾಮ 519.60 ಮೀಟರ್ ಸಂಗ್ರಹದ ಜಲಾಶಯದಲ್ಲಿ ಇಂದು ಬೆಳಗ್ಗೆ 519.37ಮೀಟರ್ ನಷ್ಟು ನೀರು ಸಂಗ್ರಹವಾಗಿದೆ. ಇದೇ ಪ್ರಮಾಣದಲ್ಲಿ ಆಲಮಟ್ಟಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾದರೆ ನಾಳೆಯೊಳಗಾಗಿ ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಗಳಿವೆ.

ಸದ್ಯ ಜಲಾಶಯದ 26 ಕ್ರಸ್ಟ್ ಗೇಟ್​​ಗಳ ಪೈಕಿ 24 ಕ್ರಸ್ಟ್‌ ಗೇಟ್​​ಗಳನ್ನು ತೆರೆದು 55 ಸಾವಿರ ಕ್ಯೂಸೆಕ್ ಹಾಗೂ ಕೆಪಿಸಿಎಲ್ ಮೂಲಕ 45 ಸಾವಿರ ಕ್ಯೂಸೆಕ್ ಸೇರಿ ಒಟ್ಟು 1 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇಂದು ನೀರಿನ ಒಳಹರಿವು 79.492 ಕ್ಯೂಸೆಕ್ ಹಾಗೂ ಹೊರ ಹರಿವು 1 ಲಕ್ಷ ಕ್ಯೂಸೆಕ್ ಇದೆ. ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 123.08 ಟಿಎಂಸಿ ಇದ್ದು, ಸದ್ಯ ಜಲಾಶಯದಲ್ಲಿ117.376 ಟಿಎಂಸಿ ನೀರು ಸಂಗ್ರಹವಿದೆ.

ಗ್ರಾಮಸ್ಥರಿಗೆ ಎಚ್ಚರಿಕೆ: ಆಲಮಟ್ಟಿ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿಬಿಡುತ್ತಿರುವ ಕಾರಣ ನಾರಾಯಣಪುರ ಜಲಾಶಯ ವ್ಯಾಪ್ತಿಯ ಮುದ್ದೇಬಿಹಾಳ ತಾಲೂಕಿನ ಕೆಲ ಗ್ರಾಮಗಳು ಹಾಗೂ ಕೃಷ್ಣಾ ನದಿ ಪಾತ್ರದಲ್ಲಿ ಮತ್ತೆ ಪ್ರವಾಹದ ಕಾರ್ಮೋಡ ಕವಿದಿದೆ. ಹೀಗಾಗಿ ಜಿಲ್ಲಾಡಳಿತ ಈ ಗ್ರಾಮದ ಜನರು ಎಚ್ಚರಿಕೆಯಿಂದ ಇರಲು ಹಾಗೂ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಿದೆ.

ಕೃಷ್ಣೆಗೆ ಬಾಗಿನ?: ಆಲಮಟ್ಟಿ ಜಲಾಶಯ ಭರ್ತಿಯಾದ ನಂತರ ಸಾಂಪ್ರದಾಯಿಕವಾಗಿ ಕೃಷ್ಣೆಗೆ ರಾಜ್ಯದ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ. ಆದರೆ ಸದ್ಯ ಸಿಎಂ ಬೊಮ್ಮಾಯಿ ಅವರಿಗೆ ಕೋವಿಡ್​​ ಸೋಂಕು ತಹುಲಿದ್ದು, ಅವರು ಸಂಪೂರ್ಣ ಗುಣಮುಖರಾದ ಮೇಲೆ ಕೃಷ್ಣೆಗೆ ಬಾಗಿನ ಅರ್ಪಿಸಲಾಗುವುದು ಎಂದು ಕೆಬಿಜೆಎನ್​ಎಲ್(ಕೃಷ್ಣಾ ಭಾಗ್ಯ ಜಲ ನಿಗಮ ಲಿಮಿಟೆಡ್) ಮೂಲಗಳು ತಿಳಿಸಿವೆ.

ಇದನ್ನೂ ಓದಿ: ವಿಜಯಪುರದಲ್ಲಿ ಧಾರಾಕಾರ ಮಳೆ: ಕೃಷಿಭೂಮಿ ಜಲಾವೃತ, ಹೆದ್ದಾರಿ ಬಂದ್, ಸಂಚಾರ ಸ್ಥಗಿತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.