ಯತ್ನಾಳ ಎದುರೆ ಮಾಜಿ ಸಿಎಂ ಬಿಎಸ್​​ವೈ ಗುಣಗಾನ ಮಾಡಿದ ಸಚಿವ ಪ್ರಭು ಚವ್ಹಾಣ್

author img

By

Published : Jul 14, 2022, 3:57 PM IST

congress-infight-benefits-to-bjp-in-next-election-says-minister-prabhu-chauhan

ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಸಚಿವ ಪ್ರಭು ಚವ್ಹಾಣ್​ ತಿಳಿಸಿದ್ದಾರೆ.

ವಿಜಯಪುರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150ಕ್ಕಿಂತ ಹೆಚ್ಚು ಸ್ಥಾನಗಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಬಗ್ಗೆ ಕಾಂಗ್ರೆಸ್​ನವರು ಅಪಪ್ರಚಾರ ಮಾಡುತ್ತಿದ್ದಾರೆ, ಮಾಡಲಿ ಬಿಡಿ. ಆದರೆ, ಕಾಂಗ್ರೆಸ್​ನಲ್ಲಿಯೇ ಒಳಜಗಳ ಹೆಚ್ಚಾಗಿದೆ. ಇದು ಬಿಜೆಪಿಗೆ ಶೇ.100ರಷ್ಟು ಲಾಭ ಪಡೆಯಲಿದೆ. ಜಗಳ ಅವರದ್ದು, ಲಾಭ ನಮ್ಮದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್​ ಹೇಳಿದರು.

ವಿಜಯಪುರದಲ್ಲಿ ಗೋ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಕೇಂದ್ರದಲ್ಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉತ್ತಮ ಕೆಲಸ ನಡೆಸುತ್ತಿರುವ ಕಾರಣ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.

ಕಾಂಗ್ರೆಸ್​ ಒಳಜಗಳವೇ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಲಾಭ: ಸಚಿವ ಪ್ರಭು ಚವ್ಹಾಣ

ನೇಮಕಾತಿಗೆ ಕಾನೂನು ತೊಡಕು: ಪಶು ಇಲಾಖೆಯಲ್ಲಿ ಒಂದು ಸಾವಿರ ಹುದ್ದೆಗಳು ಖಾಲಿ ಇದ್ದವು. ಅದರಲ್ಲಿ ಈಗಾಗಲೇ 400 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಇನ್ನೂ ಬಾಕಿ ಇರುವ ಹುದ್ದೆಗಳ ನೇಮಕಾತಿ ಮಾಡಲು ಸರ್ಕಾರ ಸಿದ್ದವಿದೆ. ಆದರೆ, ಕೆಲವರು ಈ ವಿಚಾರವಾಗಿ ಕಾನೂನು ಹೋರಾಟ ಮಾಡುತ್ತಿರುವ ಕಾರಣ ಹುದ್ದೆಗಳ ಭರ್ತಿ ವಿಳಂಬವಾಗುತ್ತಿದೆ ಎಂದು ಪ್ರಭು ಚವ್ಹಾಣ್​ ಹೇಳಿದರು.

ಗೋವು ಕಳೆದುಕೊಂಡವರಿಗೆ ಪರಿಹಾರ: ಸದ್ಯ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಸಮಯದಲ್ಲಿ ಮೂಕ ಪ್ರಾಣಿಗಳ ಜೀವ ಹಾನಿ ಹೆಚ್ಚಾಗಿದೆ. ಮೊದಲು ಅವುಗಳ ರಕ್ಷಣೆಗೆ ಆದ್ಯತೆ ನೀಡಲಾಗುವುದು. ಜೀವಹಾನಿಯಾದ ಪ್ರಾಣಿಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಬಿಎಸ್​ವೈ ಹೊಗಳಿದ ಪ್ರಭು: ಯಡಿಯೂರಪ್ಪ ವಿರುದ್ಧ ವಾಗ್ದಾಳಿ‌ ನಡೆಸುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗೋ ಶಾಲೆ ಕಾರ್ಯಕ್ರಮದಲ್ಲಿ ಸಚಿವರೊಂದಿಗೆ ಉಪಸ್ಥಿತರಿದ್ದರು. ಈ ವೇಳೆ ಸಚಿವ ಪ್ರಭು ಚವ್ಹಾಣ ಪದೇ ಪದೆ ನಮ್ಮ ನಾಯಕ ಯಡಿಯೂರಪ್ಪ ಎಂದು ಹೊಗಳಿದರು. ಇದು ಯತ್ನಾಳ ಅವರಿಗೆ ಇರುಸು - ಮುರುಸು ಉಂಟು ಮಾಡುವಂತೆ ಆಗಿತ್ತು. ನಂತರ ಮಾಧ್ಯಮದವರೊಂದಿಗೂ ಯತ್ನಾಳ ಮಾತನಾಡಲು ನಿರಾಕರಿಸಿದರು.

ಇದನ್ನೂ ಓದಿ: ಹಾಸನದ ರಾಜಕೀಯ ಎದುರಾಳಿಗಳು ಸಿಎಂ ಬೊಮ್ಮಾಯಿ ನಿವಾಸದಲ್ಲಿ ಮುಖಾಮುಖಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.