ETV Bharat / state

ಬಿಜೆಪಿ, ಕಾಂಗ್ರೆಸ್ ಮತದಾರರಿಗೆ ಹಣ ಹಂಚುತ್ತಿವೆ: ಹೆಚ್​ಡಿಕೆ ಆರೋಪ

author img

By

Published : Oct 28, 2021, 4:42 PM IST

ಸಿಂದಗಿ, ಹಾನಗಲ್​ ಉಪಚುನಾವಣೆಗೆ ಪ್ರಚಾರಕ್ಕೆ ತೆರೆ ಬಿದ್ದಿದೆ. ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್​ ಪಕ್ಷದವರು ಸಿಂದಗಿ ಕ್ಷೇತ್ರದ ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

HD Kumaraswamy
ಹೆಚ್​​ಡಿ ಕುಮಾರಸ್ವಾಮಿ

ವಿಜಯಪುರ: ಬಹಿರಂಗ ಪ್ರಚಾರ ಅಂತ್ಯವಾದ ಮೇಲೆಯೂ ಆಡಳಿತರೂಢ ಬಿಜೆಪಿ ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹಂಚುವ ಕೆಲಸಕ್ಕೆ ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆಯಿಂದ ಸಚಿವ ವಿ.ಸೋಮಣ್ಣ, ಸಿಸಿ ಪಾಟೀಲ್, ಗೋವಿಂದ ಕಾರಜೋಳ ಸೇರಿದಂತೆ ಏಳೆಂಟು ಸಚಿವರು ಕ್ಷೇತ್ರದ ಸಮೀಪದ ರೆಸಾರ್ಟ್​​​ನಲ್ಲಿದ್ದಾರೆ.

ಬುಧವಾರ ಸಂಜೆವರೆಗೂ ಕುಮಾರಸ್ವಾಮಿ ಅವರಿಗೆ ಸಿಂಧಗಿಯಲ್ಲಿ ಓಡಾಡಲು ಫ್ರೀಯಾಗಿ ಬಿಟ್ಟಿದ್ದೇವೆ. ಗುರುವಾರದಿಂದ ನಮ್ಮ ಆಟ ತೋರಿಸುತ್ತೇವೆ ಎಂದು ಸೋಮಣ್ಣ ನಿನ್ನೆಯೇ ಹೇಳಿದ್ದರು. ಈಗ ಅವರು ತಮ್ಮ ಕೊನೆಯ ಹಂತದ ಆಟ ತೋರಿಸಲು ಹೊರಟಿದ್ದಾರೆ ಎಂದು ದೂರಿದರು.

ನನಗೆ ಬಂದ ಮಾಹಿತಿ ಪ್ರಕಾರ ಪ್ರತಿಹಳ್ಳಿಗೆ 30 ರಿಂದ 40 ಲಕ್ಷ ರೂ. ಹಂಚಿಕೆ ಆಗಿದೆ. ಖುದ್ದು ಸಚಿವರೇ ಈ ಕೃತ್ಯದಲ್ಲಿ ತೊಡಗಿರುವ ಮಾಹಿತಿ ಬಂದಿದೆ. ಅದೇ ರೀತಿ ಕಾಂಗ್ರೆಸ್ ಪಕ್ಷದಿಂದಲೂ ದೊಡ್ಡ ಪ್ರಮಾಣದಲ್ಲಿ ಹಣ ಹಂಚುವ ಕೆಲಸ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.

ಒಂದು ಮತಕ್ಕೆ ಒಂದು ಸಾವಿರ:

ಕೆಲ ಹಳ್ಳಿಗಳಲ್ಲಿ ಐದರಿಂದ ಆರು ಮತಗಟ್ಟೆಗಳಿವೆ. ಅಂದರೆ ಪ್ರತಿ ಮತಗಟ್ಟೆಗೆ ತಲಾ 5 ಲಕ್ಷ ರೂ. ನೀಡಲಾಗುತ್ತಿದೆ. ಒಂದು ಮತಕ್ಕೆ 1,000 ರೂ. ಫೀಕ್ಸ್ ಮಾಡಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಸರ್ಕಾರ ರಚನೆ ಮಾಡಿದ ಮೇಲೆ ಹಣದ ಹೊಳೆ ಹರಿಸಿ ಎಲ್ಲ ಚುನಾವಣೆಗಳನ್ನು ಗೆದ್ದಿದೆ ಎಂದು ಕುಟುಕಿದರು.

ಕಾಂಗ್ರೆಸ್​ ಅನುಕರಣೆ ಮಾಡ್ತಿದೆ ಬಿಜೆಪಿ :

ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಾಗ ಸರ್ಕಾರಿ ಅಧಿಕಾರಿಯ ಕಾರಿನಲ್ಲೇ ಹಣ ಸಿಕ್ಕಿ ಬಿದ್ದಿತ್ತು. ಆಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಆಗ ಕಾಂಗ್ರೆಸ್ ಪಕ್ಷದವರು ಮಾಡಿದ ತಂತ್ರಗಾರಿಕೆಯನ್ನೇ ಈಗ ಬಿಜೆಪಿಯವರು ಅಳವಡಿಸಿಕೊಂಡಿದ್ದಾರೆ ಎಂದು ದೂರಿದರು.

ಗೆಲ್ಲಿಸುವಂತೆ ಮನವಿ :

ಇಷ್ಟಾದರೂ ಕ್ಷೇತ್ರದ ಮತದಾರರು ಹಣಕ್ಕಿಂತ ಹೆಚ್ಚಾಗಿ ತಮಗೆ ಬದುಕು ತೋರಿಸಿರುವ ಜೆಡಿಎಸ್ ಪಕ್ಷದ ಬಗ್ಗೆ ಒಲವು ಹೊಂದಿದ್ದಾರೆ. ದೇವೇಗೌಡರು ಹಾಗೂ ನಾನು ನೀಡಿರುವ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಅಭಿಮಾನ ಇದೆ. ಈವರೆಗೂ ನಾನು 80ಕ್ಕೂ ಹೆಚ್ಚು ಹಳ್ಳಿಗಳನ್ನು ಸುತ್ತಿದ್ದೇನೆ. ಎಲ್ಲೆ ಹೋದರೂ ಜನ ನಮ್ಮ ಪಕ್ಷ ನೀಡಿರುವ ಕೊಡುಗೆಗಳ ಬಗ್ಗೆಯೇ ಮಾತನಾಡಿದ್ದರು. ರಾಷ್ಟ್ರೀಯ ಪಕ್ಷಗಳು ಒಡ್ಡುವ ಆಮಿಷಗಳಿಗೆ ಜನರು ಒಳಗಾಗಬಾರದು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಡ್ರಗ್ಸ್, ಬಿಟ್ ಕಾಯಿನ್ ಕೇಸಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.