ETV Bharat / state

ವಿಜಯಪುರ ನಗರ ಕ್ಷೇತ್ರದಿಂದ ಮತ್ತೆ ಗೆಲುವು ದಾಖಲಿಸಿದ ಯತ್ನಾಳ್​​

author img

By

Published : May 13, 2023, 7:17 PM IST

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್​​ 94,211 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ.

basanagowda-patil-yatnal-won-in-vijayapura-constituency
ವಿಜಯಪುರ ನಗರ ಕ್ಷೇತ್ರದಿಂದ ಮತ್ತೆ ಗೆಲುವು ದಾಖಲಿಸಿದ ಯತ್ನಾಳ್​​

ವಿಜಯಪುರ: ವಿಜಯಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್​ ಯತ್ನಾಳ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​​ ಅಭ್ಯರ್ಥಿ ಅಬ್ದುಲ್​​ ಹಮೀದ್​​​ ಮುಷರೀಫ್​​ ವಿರುದ್ಧ ಸುಮಾರು 8 ಸಾವಿರ ಮತಗಳ ಅಂತರದ ಗೆಲುವು ಪಡೆದರು. ಒಟ್ಟು 94,211 ಮತಗಳನ್ನು ಪಡೆದಿದ್ದು, ಅಬ್ದುಲ್​​ ಹಮೀದ್​​​ ಮುಷರೀಫ್ 85,978 ಮತ ಪಡೆದಿದ್ದಾರೆ.

ಹಿಂದೂ ಫೈರ್ ಬ್ರಾಂಡ್, ನೇರನುಡಿ, ವಿವಾದಾತ್ಮಕ ಹಾಗೂ ಖಂಡ ತುಂಡವಾಗಿ ಮಾತನಾಡುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರದ್ದು ಸದಾ ಲವಲವಿಕೆಯ ರಾಜಕಾರಣ. ಅಟಲ್​ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ಯತ್ನಾಳ್ ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವರಾಗಿ ಸಚಿವರಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ ಸೇರಿದ ಪ್ರಭಾವಿ ನಾಯಕರಾಗಿರುವ ಇವರು, ಬಿಜೆಪಿ ಪಕ್ಷವನ್ನು ಬೇರುಮಟ್ಟದಿಂದ ಕಟ್ಟಿರುವ ಬಿ.ಎಸ್.ಯಡಿಯೂರಪ್ಪ, ಅನಂತ್​ ಕುಮಾರ್ ನಂತರ ಇವರು​ ಕೂಡ ಒಬ್ಬರು. ಕಾಮರ್ಸ್​ನಲ್ಲಿ ಪದವೀಧರಾಗಿರುವ ಯತ್ನಾಳ್, ಮೂಲತಃ ಕೃಷಿ ಕುಟುಂಬದಿಂದ ಬಂದವರು. ರಾಜಕೀಯದ ಜೊತೆ ಜೊತೆಗೆ ಗೋ ಶಾಲೆ, ಆಸ್ಪತ್ರೆ ಹಾಗೂ ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ನೇರನುಡಿಯಿಂದ ಯತ್ನಾಳ್ ತಮ್ಮದೇಯಾದ ಅಭಿಮಾನಿ ಬಳಗ ಹೊಂದಿದ್ದಾರೆ. ಆಗಾಗ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿರುವವರು ಯತ್ನಾಳ್‌, ಸಂಸದರಾಗಿ, ಕೇಂದ್ರ ಸಚಿವರಾಗಿ, ವಿಧಾನಪರಿಷತ್‌ ಸದಸ್ಯರಾಗಿ ಕೆಲಸ ಮಾಡಿದ ಅನುಭವವಿದೆ.

ರಾಜಕೀಯ ಜೀವನ: ಆರ್​ಎಸ್​ಎಸ್​ ಹಿನ್ನೆಲೆಯಿಂದ ಬಂದು ಬಿಜೆಪಿ ಪಕ್ಷದಲ್ಲಿ ತಮ್ಮದೇ ಛಾಪು ಮೂಡಿಸಿದ್ದು ಅವರ ಹೆಗ್ಗುರುತು. 1999 ಹಾಗೂ 2004ರಲ್ಲಿ ಎರಡು ಬಾರಿ ಬಿಜೆಪಿಯಿಂದ ವಿಜಯಪುರ ಮತಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಅವರು ಜವಳಿ ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 1994 ಹಾಗೂ 2018ರಲ್ಲಿ ಎರಡು ಬಾರಿ ಶಾಸಕರಾಗಿಯೂ ಆಯ್ಕೆ ಆಗಿದ್ದಾರೆ. ಒಂದು ಬಾರಿ ಪಕ್ಷೇತರರಾಗಿ ವಿಧಾನ ಪರಿಷತ್ ಸದಸ್ಯರಾಗಿ ಸಹ ಕಾರ್ಯನಿರ್ವಹಿಸಿದ್ದಾರೆ. ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನ ಕಮೀಟಿಯ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದ್ದರು: ಕೆಲವು ರಾಜಕೀಯ ಕಾರಣಗಳಿಂದ ಬಿಜೆಪಿಯಿಂದ ಉಚ್ಛಾಟನೆಗೊಂಡ ಯತ್ನಾಳ್, ಕೆಲವೇ ದಿನಗಳ ಅಂತರದಲ್ಲಿ ಜೆಡಿಎಸ್ ಸೇರಿದರು. ದೇವರಹಿಪ್ಪರಗಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿಸಿ ಸೋಲು ಸಹ ಅನುಭವಿಸಿದ್ದರು. ಮತ್ತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿಫಾರಸ್​ನಿಂದ ಮತ್ತೆ ಬಿಜೆಪಿ ಪಕ್ಷಕ್ಕೆ ವಾಪಸ್ ಆಗಿದ್ದರು. 2018ರಲ್ಲಿ ವಿಜಯಪುರ ನಗರ ಕ್ಷೇತ್ರಕ್ಕೆ ವಿಧಾನಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಕಾಂಗ್ರೆಸ್ ಅಬ್ದುಲ್​​ ಹಮೀದ್​​​ ಮುಷಾರೀಫ್​​ ವಿರುದ್ಧ 6 ಸಾವಿರ ಮತಗಳಿಂದ ಜಯಗಳಿಸಿದ್ದರು.

ಪ್ರಬಲ ಹಿಂದೂ ರಾಷ್ಟ್ರೀಯವಾದ ಪ್ರತಿಪಾದಿಸುವ ಬಸನಗೌಡ ಪಾಟೀಲ್ ಯತ್ನಾಳ್, ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುತ್ತಾರೆ ಹಾಗೂ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿರುವುದು ಅವರ ಮಟ್ಟಿಗೆ ಪ್ಲಸ್‌ ಪಾಯಿಂಟ್‌ ಎಂದು ಹೇಳಲಾಗುತ್ತಿದೆ. ವಿವಾದಾತ್ಮಕ ಹೇಳಿಕೆಗಳ ಹೊರತಾಗಿಯೂ ವಿಶ್ವಾಸದ ಹಿನ್ನೆಲೆ ಅವರಿಗೆ ವಿಜಯಪುರ ನಗರದ ಕ್ಷೇತ್ರದಿಂದ ಬಿಜೆಪಿ ನೀಡಿತ್ತು.

ವೈಯಕ್ತಿಕ ಪರಿಚಯ: 13 ಡಿಸೆಂಬರ್ 1963ರಲ್ಲಿ ರಾಮನಗೌಡ ಬಿ.ಪಾಟೀಲ್ ಯತ್ನಾಳ್ ಮತ್ತು ಕಾಶಿಬಾಯಿ ಆರ್.ಪಾಟೀಲ್ ಯತ್ನಾಳ್ ಪುತ್ರರಾಗಿ ಜನಿಸಿದ ಇವರು, ಮೂಲತಃ ಕೃಷಿಕ ಕುಟುಂಬದಿಂದ ಬಂದವರು. ಇವರ ಪತ್ನಿಯ ಹೆಸರು ಶೈಲಜಾ ಬಸನಗೌಡ ಪಾಟೀಲ್. ರಾಮನಗೌಡ ಮತ್ತು ಆದರ್ಶ ಎಂಬ ಇಬ್ಬರು ಪುತ್ರರನ್ನು ಹೊಂದಿದ್ದಾರೆ.

ಇದನ್ನೂ ಓದಿ: ಸೋಲು ಸ್ವೀಕಾರ ಮಾಡುತ್ತೇವೆ ಎಂದ ಸಿಟಿ ರವಿ ಮತ್ತು ಡಾ ಸುಧಾಕರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.