ETV Bharat / state

ವಿಜಯಪುರ: ನಾಳೆ ಸಿಎಂ ಸಿದ್ದರಾಮಯ್ಯರಿಂದ ಕೃಷ್ಣಾಗೆ ಬಾಗಿನ ಅರ್ಪಣೆ

author img

By ETV Bharat Karnataka Team

Published : Sep 1, 2023, 8:20 PM IST

ಮುಂಗಾರು ಮಳೆ ವಿಳಂಬವಾದ ಕಾರಣ ಸಿಎಂ ಸಿದ್ದರಾಮಯ್ಯ ನೆರವೇರಿಸಬೇಕಿದ್ದ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮ ತಡವಾಗಿದೆ.

ಆಲಮಟ್ಟಿ ಜಲಾಶಯ
ಆಲಮಟ್ಟಿ ಜಲಾಶಯ

ವಿಜಯಪುರ : ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹದ್ದೂರ್ ಶಾಸ್ತ್ರಿ (ಆಲಮಟ್ಟಿ) ಜಲಾಶಯ ಸಂಪೂರ್ಣವಾಗಿ ಭರ್ತಿಯಾದ ಹಿನ್ನೆಲೆಯಲ್ಲಿ ಸೆ 2ರಂದು (ನಾಳೆ) ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷ್ಣಾಗೆ ಬಾಗಿನ ಅರ್ಪಿಸಲಿದ್ದಾರೆ. ಸಿಎಂ ಆಗಮನದ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸೇರಿದಂತೆ ಜಿಲ್ಲೆಯ ಶಾಸಕರು, ಮುಖಂಡರು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಾಮಾನ್ಯವಾಗಿ ಆಗಸ್ಟ್​ ತಿಂಗಳಲ್ಲೇ ಜಲಾಶಯ ಭರ್ತಿಯಾಗಿ ಸಂಪ್ರದಾಯದಂತೆ ಸಿಎಂ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸುತ್ತಿದ್ದರು. ಆದರೆ ಈ ಬಾರಿ ಮುಂಗಾರು ಮಳೆ ವಿಳಂಬವಾಗಿದೆ. ಗಂಗಾಪೂಜೆ ಹಾಗೂ ಬಾಗಿನ ಅರ್ಪಿಸುವ ಕಾರ್ಯವೂ ತಡವಾಗಿದೆ.

ನಾಳೆ ಬೆಳಗ್ಗೆ ವಿಮಾನದ ಮೂಲಕ ಬಳ್ಳಾರಿಯ ಜಿಂದಾಲ್​ಗೆ ಸಿದ್ದರಾಮಯ್ಯ ಆಗಮಿಸಿ ಅಲ್ಲಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಆಲಮಟ್ಟಿಯ ಹೆಲಿಪ್ಯಾಡ್​ಗೆ ಬರಲಿದ್ದಾರೆ. ಹೆಲಿಪ್ಯಾಡ್​ನಿಂದ ರಸ್ತೆ ಮಾರ್ಗವಾಗಿ ಜಲಾಶಯದ ಆವರಣಕ್ಕೆ ಆಗಮಿಸಿ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸುವರು. ಬಳಿಕ ರಸ್ತೆ ಮಾರ್ಗವಾಗಿ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಕಚೇರಿಗೆ ತೆರಳಿ ಅಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ 3 ಹಂತ ಕುರಿತ ಭೂಸ್ವಾಧೀನ, ಪುನರ್‌ವಸತಿ ಪುನರ್‌ನಿರ್ಮಾಣ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸುವರು.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ವಿವಿಧ ರೈತಪರ ಸಂಘಟನೆಗಳು, ರೈತರು ಸಿಎಂಗೆ ಅಹವಾಲು ಸಲ್ಲಿಕೆ ಮಾಡಲಿದ್ದಾರೆ. ಜಿಲ್ಲೆಯಲ್ಲಿ ಮಳೆಯ ಕೊರತೆ ಉಂಟಾಗಿದ್ದು, ಜಿಲ್ಲೆಯನ್ನು ಸಂಪೂರ್ಣ ಬರಗಾಲ ಜಿಲ್ಲೆ ಎಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿ ರೈತರು ಹಾಗೂ ರೈತಪರ ಸಂಘಟನೆಗಳು ಮನವಿ ಸಲ್ಲಿಸಲಿದ್ದಾರೆ. ಮಧ್ಯಾಹ್ನ 3ಕ್ಕೆ ಆಲಮಟ್ಟಿಯಿಂದ ಜಿಂದಾಲ್ ಮಾರ್ಗವಾಗಿ ಸಿಎಂ ಬೆಂಗಳೂರಿಗೆ ವಾಪಸ್‌ ಆಗಲಿದ್ದಾರೆ.

ಭದ್ರತೆ: ಸಿಎಂ ಆಗಮನದ ಹಿನ್ನೆಲೆಯಲ್ಲಿ ಎಸ್ಪಿ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಓರ್ವ ಎಎಸ್ಪಿ, 4 ಡಿಎಸ್ಪಿ, 7 ಜನ ಇನ್ಸ್‌ಪೆಕ್ಟರ್‌ಗಳು, 31 ಪಿಎಸ್‌ಐ, ಎಎಸೈ 20 ಹಾಗೂ 260 ಹೆಡ್ ಕಾನ್ಸ್‌​ಸ್ಟೇಬಲ್ ಹಾಗೂ ಕಾನ್ಸ್‌ಸ್ಟೇಬಲ್​ಗಳು, ಕೆಎಸ್‌ಆರ್‌ಪಿಸಿ 2 ತುಕಡಿ, ಡಿಎಆರ್ 4 ತುಕಡಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಆಲಮಟ್ಟಿ ಜಲಾಶಯದ ಆವರಣದಲ್ಲಿನ ಕೆಲ ಮಾರ್ಗಗಳ ಬದಲಾವಣೆ ಮಾಡಲಾಗಿದೆ. ನಾಳೆ ಆಲಮಟ್ಟಿ ಉದ್ಯಾನವನ, ಜಲಾಶಯ ವೀಕ್ಷಣೆ ಹಾಗೂ ವಾಸ್ತವ್ಯಕ್ಕೆ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ : ತುಂಬೆ ಡ್ಯಾಂನಲ್ಲಿ ಕುಸಿದ ನೀರಿನ ಮಟ್ಟ: ಮಳೆ ಬಾರದಿದ್ದರೆ ಮಂಗಳೂರಿಗೆ ನೀರಿನ ಸಮಸ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.