ETV Bharat / state

ವಿಜಯಪುರ: ಗುಟ್ಕಾ ಚೀಲದಲ್ಲಿ ಸಾಗಿಸುತ್ತಿದ್ದ 10 ಲಕ್ಷ ನಗದು ಪೊಲೀಸ್ ವಶಕ್ಕೆ

author img

By

Published : Mar 24, 2023, 9:13 PM IST

ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಬಳಿಯ ಚೆಕ್ ಪೋಸ್ಟ್​ನಲ್ಲಿ ದಾಖಲೆ ಇಲ್ಲದೆ ಬಸ್ಸಿನಲ್ಲಿ ಸಾಗಿಸುತ್ತಿದ್ದ 10 ಲಕ್ಷ ರೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

10 lakh cash was seized without documents in vijayapura
ದಾಖಲೆ ಇಲ್ಲದೆ ಸಾಗಿಸುತ್ತಿದ್ದ 10 ಲಕ್ಷ ನಗದು ವಶ

ವಿಜಯಪುರ: ದಾಖಲೆ ಇಲ್ಲದೆ ಬಸ್ಸಿನಲ್ಲಿ ಸಾಗಿಸುತ್ತಿದ್ದ 10 ಲಕ್ಷ ರೂ ನಗದು ಹಣವನ್ನು ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಹೊರವಲಯದಲ್ಲಿರುವ ಕೃಷ್ಣಾ ನದಿಯ ನೀಲಮ್ಮನ ಸೇತುವೆ ಹತ್ತಿರದ ಚೆಕ್ ಪೋಸ್ಟ್​ನಲ್ಲಿ ಶುಕ್ರವಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುದ್ದೇಬಿಹಾಳದಿಂದ ತಂಗಡಗಿ, ಧನ್ನೂರ, ಹುನಗುಂದ ಮಾರ್ಗವಾಗಿ ಗಜೇಂದ್ರಗಡಕ್ಕೆ ಹೋಗುತ್ತಿದ್ದ ಬಸ್ಸನ್ನು ಪೊಲೀಸರು ತಪಾಸಣೆ ನಡೆಸಿದಾಗ ಗುಟ್ಕಾ ಚೀಲದಲ್ಲಿ 500, 200 ಮತ್ತು 50 ಮುಖಬೆಲೆ ನೋಟುಗಳು ಸೇರಿ ಒಟ್ಟು 10 ಲಕ್ಷ ನಗದು ಪತ್ತೆಯಾಗಿದೆ.

ಈ ವೇಳೆ ಹಣ ಸಾಗಿಸುತ್ತಿದ್ದ ವ್ಯಕ್ತಿ ಮುದ್ದೇಬಿಹಾಳದ ಸುಂದರ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ಮ್ಯಾನೇಜರ್ ಬಸಪ್ಪ ನಿಂಗಪ್ಪ ಹಡಗಲಿ ಎಂದು ಗುರುತಿಸಲಾಗಿದೆ. ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಬ್ಯಾಂಕ್​​ನಿಂದ ಬ್ಯಾಂಕಿಗೆ ವರ್ಗಾವಣೆ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಹಣಕ್ಕೆ ಸಂಬಂಧಿಸಿದಂತೆ ಇವರ ಬಳಿ ಯಾವುದೇ ದಾಖಲೆ ಇರಲಿಲ್ಲ. ಇದರಿಂದ ಸಂಶಯಗೊಂಡ ಪೊಲೀಸ್ ಅಧಿಕಾರಿಗಳು, ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಹಣವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ದಾಖಲೆ ಇಲ್ಲದೆ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಆರೋಪದ ಮೇಲೆ ಮ್ಯಾನೇಜರ್ ಹಡಗಲಿ ವಿರುದ್ಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ಐ ಆರೀಫ್ ಮುಷಾಪುರಿ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ ನಗದು, ಚಿನ್ನ ವಶ: ಮತ್ತೊಂದು ಪ್ರಕರಣದಲ್ಲಿ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ನಗದು ಹಾಗೂ ಚಿನ್ನವನ್ನು ವಿಜಯಪುರ ನಗರದ ಜಮಖಂಡಿ ರಸ್ತೆ ಬಳಿಯ ಚೆಕ್ ಪೋಸ್ಟ್​ನಲ್ಲಿ ವಶ ಪಡಿಸಿಕೊಳ್ಳಲಾಗಿದೆ. 10.30 ಲಕ್ಷ ರೂಪಾಯಿ ನಗದು, 60 ಗ್ರಾಮ ಚಿನ್ನವನ್ನು ವಶ ಪಡಿಸಿಕೊಳ್ಳಲಾಗಿದೆ. ಗಾಂಧಿ ಚೌಕ್ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್ ಸಿದ್ದೇಶ ಮುರುಗುಂಡಿ ನೇತೃತ್ವದಲ್ಲಿ ಕಾರು ತಪಾಸಣೆ ನಡೆಸಿದಾಗ ನಗದು ಪತ್ತೆಯಾಗಿದೆ. ಈ ಸಂಬಂಧ ಕಾರಿನಲ್ಲಿದ್ದ ನರೇಂದ್ರ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿ ಈ ಪ್ರಕರಣ ನಡೆದಿದೆ.

ಇದನ್ನೂ ಓದಿ:ಶಿವಮೊಗ್ಗ, ಚಾಮರಾಜನಗರ ಚೆಕ್ ಪೋಸ್ಟ್​​ಗಳಲ್ಲಿ ಬೆಲೆ ಬಾಳುವ ವಸ್ತುಗಳು ವಶಕ್ಕೆ

ಮಂಗಳೂರು ಪೊಲೀಸರಿಂದ 11ಕೆ.ಜಿ ಗಾಂಜಾ ಸಹಿತ ಮಾದಕ ವಸ್ತು ನಾಶ: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ವಿಲೇವಾರಿಯು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ M/s Ramky Energy and Environment Ltd ಎಂಬಲ್ಲಿ ನಡೆದಿದೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 8 ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ 11 ಕೆಜಿ 194 ಗ್ರಾಂ ಗಾಂಜಾ ಮತ್ತು 14 ಮಿ.ಗ್ರಾಂ ಎಂಡಿಎಂಎ ಯ‌ನ್ನು ಪೊಲೀಸರು ಶುಕ್ರವಾರ ನಾಶಪಡಿಸಿದ್ದಾರೆ.

ಸೆನ್ ಪೊಲೀಸ್ ಠಾಣೆಯ 6 ಪ್ರಕರಣಗಳಲ್ಲಿ ಪತ್ತೆಯಾದ ಒಟ್ಟು 1 ಕೆಜಿ 802 ಗ್ರಾಂ ಗಾಂಜಾವನ್ನು ವಿಲೇವಾರಿ ಮಾಡಲಾಯಿತು. ಈ ಪ್ರಕರಣಗಳಲ್ಲಿ ಒಟ್ಟು 6 ಆರೋಪಿಗಳನ್ನು ಬಂಧಿಸಲಾಗಿತ್ತು. ಕೊಣಾಜೆ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳಲ್ಲಿ ಪತ್ತೆಯಾದ ಒಟ್ಟು 1 ಕೆಜಿ 328 ಗ್ರಾಂ ಗಾಂಜಾವನ್ನು ವಿಲೇವಾರಿ ಮಾಡಲಾಯಿತು. ಈ ಪ್ರಕರಣಗಳಲ್ಲಿ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿತ್ತು. ಪಣಂಬೂರು ಪೊಲೀಸ್ ಠಾಣೆಯಲ್ಲಿ 1 ಪ್ರಕರಣದಲ್ಲಿ ಪತ್ತೆಯಾದ 520 ಗ್ರಾಂ ಗಾಂಜಾವನ್ನು ವಿಲೇವಾರಿ ಮಾಡಲಾಯಿತು. ಈ ಪ್ರಕರಣದಲ್ಲಿ ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿತ್ತು.

ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣದಲ್ಲಿ ಪತ್ತೆಯಾದ 1 ಕೆಜಿ 28 ಗ್ರಾಂ ಗಾಂಜಾವನ್ನು ವಿಲೇವಾರಿ ಮಾಡಲಾಯಿತು. ಈ ಪ್ರಕರಣದಲ್ಲಿ ಒಟ್ಟು 11 ಆರೋಪಿಯನ್ನು ಬಂಧಿಸಲಾಗಿತ್ತು. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 1ಪ್ರಕರಣಗಳಲ್ಲಿ ಪತ್ತೆಯಾದ ಒಟ್ಟು 2 ಕೆಜಿ 456 ಗ್ರಾಂ ಗಾಂಜಾ ಮತ್ತು 0.014 ಗ್ರಾಂ ಎಂಡಿಎಂಎ ಯನ್ನು ವಿಲೇವಾರಿ ಮಾಡಲಾಯಿತು. ಈ ಪ್ರಕರಣಗಳಲ್ಲಿ ಒಟ್ಟು 10 ಆರೋಪಿಗಳನ್ನು ಬಂಧಿಸಲಾಗಿತ್ತು.

ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 3 ಪ್ರಕರಣಗಳಲ್ಲಿ ಪತ್ತೆಯಾದ ಒಟ್ಟು 1 ಕೆಜಿ 510 ಗ್ರಾಂ ಗಾಂಜಾವನ್ನು ವಿಲೇವಾರಿ ಮಾಡಲಾಯಿತು. ಈ ಪ್ರಕರಣಗಳಲ್ಲಿ ಒಟ್ಟು 4 ಆರೋಪಿಗಳನ್ನು ಬಂಧಿಸಲಾಗಿತ್ತು. ಬಜಪೆ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳಲ್ಲಿ ಪತ್ತೆಯಾದ ಒಟ್ಟು 1 ಕೆಜಿ 660 ಗ್ರಾಂ ಗಾಂಜಾವನ್ನು ವಿಲೇವಾರಿ ಮಾಡಲಾಯಿತು. ಈ ಪ್ರಕರಣಗಳಲ್ಲಿ ಒಟ್ಟು 4 ಆರೋಪಿಗಳನ್ನು ಬಂಧಿಸಲಾಗಿತ್ತು.

ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣದಲ್ಲಿ ಪತ್ತೆಯಾದ ಒಟ್ಟು 100 ಗ್ರಾಂ ಗಾಂಜಾವನ್ನು ವಿಲೇವಾರಿ ಮಾಡಲಾಯಿತು. ಈ ಪ್ರಕರಣದಲ್ಲಿ ಒಟ್ಟು 02 ಆರೋಪಿಗಳನ್ನು ಬಂಧಿಸಲಾಗಿತ್ತು. ಶುಕ್ರವಾರ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ ಒಟ್ಟು 11 ಕೆಜಿ 194 ಗ್ರಾಂ ಗಾಂಜಾ ಮತ್ತು 0.014 ಗ್ರಾಂ ಎಂಡಿಎಂಎ ಯನ್ನು ನ್ಯಾಯಾಲಯದ ಅನುಮತಿ ಪಡೆದುಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ M/s Ramky Energy and Environment Ltd ಎಂಬಲ್ಲಿ ನಾಶಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.