ETV Bharat / state

ಭಟ್ಕಳದಲ್ಲಿ 3 ಕಡೆ ಕಿಡಿಗೇಡಿಗಳಿಂದ ಮೊಟ್ಟೆ ದಾಳಿ.. ಸಿಕ್ಕಿಬಿದ್ದ ಓರ್ವನಿಗೆ ಧರ್ಮದೇಟು

author img

By

Published : Apr 9, 2022, 9:10 AM IST

Updated : Apr 9, 2022, 10:24 AM IST

ಭಟ್ಕಳ ತಾಲೂಕಿನ ಹೆಬಳೆ ಗಾಂಧಿನಗರ, ಹನುಮಾನ್​ ನಗರ ಹಾಗೂ ಪುರವರ್ಗದಲ್ಲಿ ಮೊಟ್ಟೆ ದಾಳಿ ಮಾಡಿ ಯುವಕರು ವಿಕೃತಿ ಮೆರೆದಿದ್ದಾರೆ.

youth group throws egg on the pedestrian in Bhatkal
ಭಟ್ಕಳ 3 ಕಡೆ ಅನ್ಯಕೋಮಿನ ಯುವಕರ ತಂಡದಿಂದ ಮೊಟ್ಟೆ ದಾಳಿ

ಭಟ್ಕಳ(ಉತ್ತರ ಕನ್ನಡ): ತಾಲೂಕಿನ ವಿವಿಧ ಭಾಗದಲ್ಲಿ ಕಿಡಿಗೇಡಿ ಯುವಕರ ಗುಂಪು ಬೈಕ್ ಮೇಲೆ ಬಂದು ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಮೊಟ್ಟೆಯಿಂದ ಹಲ್ಲೆ ಮಾಡಿ ವಿಕೃತಿ ಮೆರೆದಿರುವ ಘಟನೆ ಮಣ್ಕುಳಿಯ ರಾಘವೇಂದ್ರಸ್ವಾಮಿ ಮಠದ ಬಳಿ ನಡೆದಿದೆ. ಈ ವೇಳೆ ಓರ್ವ ಆರೋಪಿ ಸಿಕ್ಕಿ ಬಿದ್ದಿದ್ದು, ಸಾರ್ವಜನಿಕರು ಧರ್ಮದೇಟು ನೀಡಿದ ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ತಾಲೂಕಿನ ಹೆಬಳೆ ಗಾಂಧಿನಗರ, ಹನುಮಾನ್​ ನಗರ ಹಾಗೂ ಪುರವರ್ಗದಲ್ಲಿ ಮೊಟ್ಟೆ ದಾಳಿ ಮಾಡಿ ಯುವಕರು ವಿಕೃತಿ ಮೆರೆದಿದ್ದಾರೆ. ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್​​ ವ್ಯಾಪ್ತಿಯ ಗಾಂಧಿನಗರದಲ್ಲಿ ಮೊದಲು ಮೂರು ಬೈಕ್ ಮೇಲೆ ಬಂದ ಆರು ಜನ ಕಿಡಿಗೇಡಿ ಯುವಕರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಓರ್ವನ ಮೇಲೆ ಮೊಟ್ಟೆ ದಾಳಿ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.

ಮೊಟ್ಟೆ ದಾಳಿ: ಸಿಕ್ಕಿಬಿದ್ದ ಓರ್ವನಿಗೆ ಧರ್ಮದೇಟು

ನಂತರ ಅದೇ ಯುವಕರು ಹನುಮಾನ್​ ನಗರದಲ್ಲಿ ಊಟದ ಬಳಿಕ ರಾತ್ರಿ ವಾಕಿಂಗ್ ಮಾಡುತ್ತಿದ್ದ ಓರ್ವರ ಮೇಲೆ ಯಾವುದೋ ವಸ್ತುವಿನಿಂದ ಎದೆ ಭಾಗಕ್ಕೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಅಲ್ಲಿಂದ ಕಾಲ್ಕಿತ್ತ ಯುವಕರು ತಾಲೂಕಿನ ಪುರವರ್ಗದಲ್ಲಿ ಮತ್ತೆ ಪ್ರತ್ಯಕ್ಷವಾಗಿ ಮನೆ ಪಕ್ಕದಲ್ಲಿದ್ದ ಬೇಕರಿಗೆ ಹೋಗಿ ಬರುತ್ತಿದ್ದ ಯುವಕನ ಮೇಲೆ ಮತ್ತೆ ಮೊಟ್ಟೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಗಮನಿಸಿದ ಹಲ್ಲೆಗೊಳಗಾದ ಯುವಕನ ಸಹೋದರ ತಕ್ಷಣಕ್ಕೆ ತನ್ನ ಕಾರನ್ನು ತೆಗೆದುಕೊಂಡು ಮೂರು ಬೈಕ್​​ನ್ನು ಹಿಂಬಾಲಿಸಿದ್ದಾರೆ. ನಂತರ ಮಣ್ಕುಳಿಯ ರಾಘವೇಂದ್ರಸ್ವಾಮಿ ಮಠದ ಸಮೀಪ ಇಬ್ಬರು ಯುವಕರನ್ನು ಹಿಂಬಾಲಿಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸಾರ್ವಜನಿಕರು ಜಮಾಯಿಸುವಷ್ಟರಲ್ಲಿ ಓರ್ವ ಯುವಕ ತಪ್ಪಿಸಿಕೊಂಡು ಪರಾರಿಯಾಗಿದ್ದು, ಸಿಕ್ಕಿಬಿದ್ದ ಇನ್ನೋರ್ವ ಯುವಕನಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ್ದಾರೆ.

ನಂತರ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿ ಪೊಲೀಸರು ಸಾರ್ವಜನಿಕರನ್ನು ಸಮಾಧಾನಪಡಿಸಿ ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಉಳಿದೆಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಸಾರ್ವಜನಿಕರು ಪೊಲೀಸ್​​ ​ಠಾಣೆಯ ಬಳಿ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಬಳಿಕ ಸ್ಥಳಕ್ಕೆ ಕೆಎಸ್​​ಆರ್‌ಪಿ ತುಕಡಿ ನಿಯೋಜಿಸಿ ಆಕ್ರೋಶಗೊಂಡ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ತಾಲೂಕಿನಾದ್ಯಂತ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಡಿವೈಎಸ್‌ಪಿ ಬೆಳ್ಳಿಯಪ್ಪ ತಿಳಿಸಿದ್ದಾರೆ.

ನಾಳೆ (ಭಾನುವಾರ) ಭಟ್ಕಳದ ಪ್ರಸಿದ್ಧ ಚನ್ನಪಟ್ಟಣ ಹನುಮಂತ ದೇವಸ್ಥಾನದ ಬ್ರಹ್ಮ ರಥೋತ್ಸವವಿದೆ. ಇಂತಹ ಸಂದರ್ಭದಲ್ಲಿ ಈ ರೀತಿ ಘಟನೆ ನಡೆದಿರುವುದು ಭಟ್ಕಳದಂತ ಸೂಕ್ಷ್ಮ ಪ್ರದೇಶದಲ್ಲಿ ಶಾಂತಿ ಕೆದಡುವ ಪ್ರಯತ್ನ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ರಾಷ್ಟ್ರದ್ರೋಹಿಗಳು: ಸಚಿವ ಕೆ.ಎಸ್.ಈಶ್ವರಪ್ಪ

Last Updated : Apr 9, 2022, 10:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.