ETV Bharat / state

ದಂಪತಿ ತೆರಳುತ್ತಿದ್ದ ಸ್ಕೂಟಿಗೆ ಗುದ್ದಿದ ಕಂಟೈನರ್: ಪತ್ನಿ ಸಾವು, ಪತಿ ಸ್ಥಿತಿ ಗಂಭೀರ

author img

By

Published : Jan 10, 2023, 3:32 PM IST

ಕಂಟೈನರ್ ಡಿಕ್ಕಿಯಾದ ಪರಿಣಾಮ ಮಹಿಳೆ ಸಾವು - ಬಿಎಸ್​ಎನ್​ಎಲ್​ ನಿವೃತ್ತ ಉದ್ಯೋಗಿ ಮೃತರು - ಮಹಿಳೆಯ ದೇಹ ಛಿದ್ರ ಛಿದ್ರ

crime news
crime news

ಕಾರವಾರ(ಉತ್ತರ ಕನ್ನಡ): ದಂಪತಿ ತೆರಳುತ್ತಿದ್ದ ಸ್ಕೂಟಿಗೆ ಹಿಂಬದಿಯಿಂದ ಕಂಟೈನರ್ ಡಿಕ್ಕಿಯಾಗಿ ಪತ್ನಿ ಸ್ಥಳದಲ್ಲಿಯೇ ಮೃತಪಟ್ಟು ಅವರ ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಗೇರುಸೊಪ್ಪ ವೃತ್ತದ ಬಳಿ ನಡೆದಿದೆ. ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ಸಾವಿತ್ರಿ ಭಟ್(64) ಮೃತ ದುರ್ದೈವಿ.

ಪತಿ ಗಂಭೀರ ಗಾಯಗೊಂಡಿದ್ದು ಹೊನ್ನಾವರ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ. ಕುಮಟಾ ಭಾಗದಿಂದ ಹೊನ್ನಾವರಕ್ಕೆ ಆಗಮಿಸುತ್ತಿದ್ದ ದಂಪತಿಗೆ ಹಿಂಬದಿಯಿಂದ ಬರುತ್ತಿದ್ದ ಕಂಟೈನರ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಮಹಿಳೆಯ ದೇಹ ಛದ್ರ ಛಿದ್ರವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಉಳ್ಳಾಲ (ದಕ್ಷಿಣ ಕನ್ನಡ): ಗೋಣಿಚೀಲದಲ್ಲಿ 40,000 ರೂ. ಮೌಲ್ಯದ ಗಾಂಜಾ ತುಂಬಿಕೊಂಡು ಬೈಕ್​​ನಲ್ಲಿ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿರುವ ಘಟನೆ ತಲಪಾಡಿ ತಚ್ಚಣಿ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಮಂಜೇಶ್ವರ ಸುಂಕದಕಟ್ಟೆಯ ಮೊಹಮ್ಮದ್ ರಾಝಿಕ್ ಎಂಬಾತನನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಅಸ್ಗರ್ ತಲೆಮರೆಸಿಕೊಂಡಿದ್ದಾನೆ. ಇಬ್ಬರು ತಲಪಾಡಿ ಗ್ರಾಮದ ತಚ್ಚಣಿ ಎಂಬಲ್ಲಿ ಗಾಂಜಾ ಮಾರಾಟ ಮಾಡಲು ಬಂದಿದ್ದರು.

crime news
ಗಾಂಜಾ ಸಾಗಾಟ

ಯಮಹಾ R15 ಬೈಕ್​​ನಲ್ಲಿ 4 ಕೆ.ಜಿ ತೂಕದ 40,000 ರೂ. ಮೌಲ್ಯದ ಗಾಂಜಾ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಬೈಕ್ ಅಡ್ಡಗಟ್ಟಿದ್ದಾರೆ. ಈ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದಾನೆ. ಬಂಧಿತನಿಂದ ಗಾಂಜಾ ಹಾಗೂ 1 ಲಕ್ಷ ರೂ. ಸೇರಿದಂತೆ ಒಟ್ಟು 1,40,000 ಬೆಲೆ ಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಈ ಹಿಂದೆ ಮಂಜೇಶ್ವರ, ಕಾಸರಗೋಡು, ಕುಂಬ್ಳೆ ಠಾಣಾ ವ್ಯಾಪ್ತಿಯಲ್ಲಿ ಕೊಲೆಯತ್ನ, ಗಾಂಜಾ ಮಾರಾಟ ಪ್ರಕರಣಗಳಿವೆ.

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕದಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿರುವ ಘಟನೆ ರಾ.ಹೆ 66ರ ಕೋಟೆಕಾರು ಬೀರಿ ಸಮೀಪ ಸೋಮವಾರ ತಡರಾತ್ರಿ ನಡೆದಿದೆ. ಸ್ಥಳೀಯ ಯುವಕರ ತಂಡ ತಕ್ಷಣ ಕಾರು ಚಾಲಕನನ್ನು ಹೊರಗೆಳೆದು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದೆ. ಹಳೆಯಂಗಡಿ ನಿವಾಸಿ ನೌಫಾಲ್ ಗಾಯಗೊಂಡವರು. ತಲಪಾಡಿ ಕಡೆಯಿಂದ ಹಳೆಯಂಗಡಿಯತ್ತ ತೆರಳುವ ವೇಳೆ ಕಾರು ನಿಯಂತ್ರಣ ಕಳೆದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

crime news
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿ ಹೊಡೆದು, ಚಾಲಕ ಅದರೊಳಕ್ಕೆ ಸಿಲುಕಿಕೊಂಡಿದ್ದ. ತಕ್ಷಣ ಸ್ಥಳೀಯ ಯುವಕರ ತಂಡ ಸ್ಥಳಕ್ಕೆ ದೌಡಾಯಿಸಿ ಕಾರಿನಲ್ಲಿ ಸಿಲುಕಿದ್ದ ನೌಫಾಲ್ ನನ್ನು ಹೊರಗೆಳೆದು ಬೇರೆ ಕಾರಿನ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಯುವಕರ ಸಾಮಾಜಿಕ ಕಳಕಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರು ಕಸ್ಟಮ್ಸ್​ಗೆ ಸಿಕ್ಕಿಬಿದ್ದ ಪ್ರಯಾಣಿಕ: ಸ್ಪೀಕರ್ ಒಳಗೆ ಮರೆಮಾಚಿ ಗೋಲ್ಡ್ ಕಾಯಿನ್​ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಯಾಣಿಕನೋರ್ವನನ್ನು ಬಂಧಿಸಿರುವ ಬೆಂಗಳೂರು ಕಸ್ಟಮ್ಸ್‌ ಅಧಿಕಾರಿಗಳು, ಬಂಧಿತ ಆರೋಪಿಯಿಂದ 19 ಲಕ್ಷ ಮೌಲ್ಯದ 349 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ. ಜ. 7 ರಂದು 6E 1102 ವಿಮಾನದಲ್ಲಿ ದುಬೈನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನ ಸಂಶಯದ ಮೇಲೆ ಬೆಂಗಳೂರು ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

crime news
ಬೆಂಗಳೂರು ಕಸ್ಟಮ್ಸ್​ಗೆ ಸಿಕ್ಕಿಬಿದ್ದ ಪ್ರಯಾಣಿಕ

ಆತನ ಲಗೇಜ್ ಪರಿಶೀಲನೆ ನಡೆಸಿದಾಗ ಅಕ್ರಮ ಚಿನ್ನ ಸಾಗಣಿಕೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಪೀಕರ್ ಒಳಗೆ ಚಿನ್ನದ ಲಾಣ್ಯಗಳು, ನಾನ್ ಸ್ಟಿಕ್ ಪಾನ್ ಮತ್ತು ಮಕ್ಕಳ ಆಟಿಕೆಗಳ ಕಾರಿನಲ್ಲಿ ಮರೆಮಾಚಿ ಚಿನ್ನ ಸಾಗಣಿಕೆ ಮಾಡುತ್ತಿರುವುದು ಕಂಡು ಬಂದಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.

ವಿಜಯಪುರ: ದೇವರ ಮೂರ್ತಿ ಕಳ್ಳತನ.. ಖದೀಮನೋರ್ವ ಚಿನ್ನದಿಂದ ಮಾಡಲ್ಪಟ್ಟ ದೇವರ ಮೂರ್ತಿಯನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಜೇವೂರ ಗ್ರಾಮದಲ್ಲಿ ನಡೆದಿದೆ.‌ ಕಳ್ಳತನದ ದೃಶ್ಯಗಳು ದೇವಸ್ಥಾನದಲ್ಲಿರುವ ಸಿಸಿ‌ ಕ್ಯಾಮರಾದಲ್ಲಿ ಸೆರೆಯಾಗಿದೆ.‌ ಗ್ರಾಮದ ಶ್ರೀರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ರಾತ್ರಿ ವೇಳೆ ಗರ್ಭಗುಡಿಯ ಕೀಲಿ ಮುರಿದು ಒಳನುಗ್ಗಿರುವ ಕಳ್ಳ, ದೇವರ ಕೊರಳಲ್ಲಿದ್ದ ಹಾಗೂ ದೇಗುಲದ ಗದ್ದುಗೆ ಮೇಲಿನ 8 ಕೆಜಿ ಬೆಳ್ಳಿ, 3 ತೊಲಿ ಚಿನ್ನಾಭರಣ ಸೇರಿದಂತೆ ಲಕ್ಷಾಂತರ ಮೌಲ್ಯದ ವಿವಿಧ ವಸ್ತುಗಳನ್ನು ಎಗರಿಸಿದ್ದಾನೆ. ‌

crime news
ದೇವರ ಮೂರ್ತಿ ಕಳ್ಳತನ

ದೇವಸ್ಥಾನದ ಆಡಳಿತ ಮಂಡಳಿ ಈ ಸಂಬಂಧ ಝಳಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಝಳಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜತೆಗೆ ಸಿಸಿ ಕ್ಯಾಮರಾ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇನ್ನೊಬ್ಬ ಕಳ್ಳ ಸಾಥ್​ ನೀಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.