ETV Bharat / state

ಸಿದ್ದರಾಮಯ್ಯನವರ ಯೋಜನೆಯನ್ನು ಯಾರೂ ಒಪ್ಪುವುದಿಲ್ಲ: ಸಂಸದ ಅನಂತಕುಮಾರ ಹೆಗಡೆ

author img

By ETV Bharat Karnataka Team

Published : Dec 26, 2023, 4:31 PM IST

Updated : Dec 26, 2023, 5:27 PM IST

ಸಿದ್ದರಾಮಯ್ಯನವರು ಮನಸ್ಸಿಗೆ ಬಂದ ಹಾಗೆ ಕೇಂದ್ರ ಸರ್ಕಾರದಿಂದ ದುಡ್ಡು ಕೇಳಿದರೆ ಕೊಡಲು ಅದು ಅವರ ಆಸ್ತಿಯಲ್ಲ ಎಂದು ಸಂಸದ ಅನಂತಕುಮಾರ್​ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್​ ವಿರುದ್ದ ಸಂಸದ ಅನಂತಕುಮಾರ ಹೆಗಡೆ ಕಿಡಿ
ಕಾಂಗ್ರೆಸ್​ ವಿರುದ್ದ ಸಂಸದ ಅನಂತಕುಮಾರ ಹೆಗಡೆ ಕಿಡಿ

ಸಿದ್ದರಾಮಯ್ಯ​ ವಿರುದ್ಧ ಅನಂತಕುಮಾರ ಹೆಗಡೆ ವಾಗ್ದಾಳಿ

ಶಿರಸಿ: ಸಿದ್ದರಾಮಯ್ಯರ ಯೋಜನೆಗಳನ್ನು ಯಾರೂ ಒಪ್ಪುವುದಿಲ್ಲ. ಮನಸ್ಸಿಗೆ ಬಂದ ಹಾಗೆ ಕೇಂದ್ರದಿಂದ ದುಡ್ಡು ಕೇಳಿದರೆ ನೀಡಲು ಅದು ಅವರ ಪಿತ್ರಾರ್ಜಿತ ಆಸ್ತಿಯಲ್ಲ ಎಂದು ಬಿಜೆಪಿ ಸಂಸದ ಅನಂತ ಕುಮಾರ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.‌ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಇಂದು ಸುದ್ದಿಗಾರರೊಂದಿಗೆ‌ ಮಾತನಾಡಿದ ಅವರು, ರಾಜ್ಯಕ್ಕೆ ಕೇಂದ್ರ ಅನುದಾನ ನೀಡುತ್ತಿಲ್ಲ ಎನ್ನುವ ಕಾಂಗ್ರೆಸ್ ನಾಯಕರ ಆರೋಪಗಳಿಗೆ ಪ್ರತಿಕ್ರಿಯಿಸಿದರು.

ಕೇಂದ್ರ ಸರ್ಕಾರದಿಂದ ಅನುದಾನ ಕೇಳಲು ಅದಕ್ಕೆ ಅದರದ್ದೇ ಆದಂತಹ ರೂಪುರೇಷೆಗಳಿದೆ. ಓಸಿ ಚೀಟಿಯ ರೀತಿ ಬರೆದು ಅನುದಾನ ಕೇಳುವುದಲ್ಲ. ಸರಿಯಾದ ಯೋಜನೆಗಳನ್ನು ಹಾಕಿಕೊಂಡು ಕೇಳಲಿ. ಈ ಕುರಿತು ಸಿದ್ಧರಾಮಯ್ಯ ಯೋಚಿಸಿ ಮಾತನಾಡಲಿ. ಇದು ಕರ್ನಾಟಕವಲ್ಲ, ಮೋದಿ ಸರ್ಕಾರ. ಪ್ರತಿಯೊಂದಕ್ಕೂ ಲೆಕ್ಕ ಕೇಳಿ ಅನುದಾನ ನೀಡುತ್ತಾರೆ ಎಂದರು.

ಸಂಸತ್ತಿನಲ್ಲಿ ಇತ್ತೀಚೆಗೆ ನಡೆದ ಹೊಗೆ ಬಾಂಬ್ ದಾಳಿ ಘಟನೆಯ ವಿಚಾರವಾಗಿ ಪ್ರತಿಕ್ರಿಯಿಸಿ, ವಿರೋಧ ಪಕ್ಷಗಳಿಗೆ ಬೇರೆ ವಿಷಯಗಳಿಲ್ಲ. ಅನವಶ್ಯಕವಾದ ವಿಷಯಗಳನ್ನು ದೊಡ್ಡದು ಮಾಡುವ ಕೆಲಸ ಮಾಡಲಾಗುತ್ತಿದೆ. ಸಂಸತ್ತಿನಲ್ಲಿ ಬೇಡದೇ ಇರುವ ಕೆಲಸ ಮಾಡಿದಲ್ಲಿ ತೆಗೆದು ಬಿಸಾಡುತ್ತಾರೆ. ಸಂಸತ್ತಿನ ಘನತೆ, ಗೌರವಕ್ಕೆ ಚ್ಯುತಿ ತರುವ ಕೆಲಸ ಮಾಡಿದಾಗ ಸಭಾಧ್ಯಕ್ಷರಿಗೆ ಅಮಾನತು ಮಾಡುವ ಅಧಿಕಾರವಿದೆ. ಸಂಸತ್ ಪ್ರವೇಶಕ್ಕೆ ಪಾಸ್​ ನೀಡಿದ ಪ್ರತಾಪ್ ಸಿಂಹರ ವಿಷಯವಾಗಿ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಬಿ.ಕೆ.ಹರಿಪ್ರಸಾದ್ ಬಿಜೆಪಿ ವಿರುದ್ಧ ನೀಡಿದ ಹೇಳಿಕೆಗೆ, ಆ ಮಟ್ಟಕ್ಕೆ ಇಳಿದು ಉತ್ತರ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಅವರ ಬಳಿಯೇ ಉತ್ತರ ಸಿಗಬಹುದು ಎಂದರು. ಬಳಿಕ, ದೆಹಲಿ ಭೇಟಿ ವಿಚಾರವಾಗಿ ಮಾತನಾಡಿ, ಅಲ್ಲಿಗೆ ಹೋಗುವುದರಲ್ಲಿ ವಿಶೇಷ ಏನೂ ಇಲ್ಲ. ಅಲ್ಲಿ ದೊಡ್ಡವರೂ ಸಿಗುತ್ತಾರೆ, ಎಲ್ಲವೂ ಸಹಜ ಭೇಟಿ ಎಂದಷ್ಟೇ ತಿಳಿಸಿದರು.

ಲೋಕಸಭಾ ಚುನಾವಣೆಯ ವಿಚಾರಕ್ಕೆ, ಲೋಕಸಭಾ ಚುನಾವಣೆಯಲ್ಲಿ ಮೂರರಲ್ಲಿ ಎರಡಷ್ಟು ಬಹುಮತವನ್ನು ಬಿಜೆಪಿ ಗಳಿಸಲಿದೆ. ಭವಿಷ್ಯದಲ್ಲಿ ಕರ್ನಾಟಕದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್​ ಸರ್ಕಾರದಲ್ಲಿ ಜನರಿಗೆ ಇರಲು ಸಾಧ್ಯವಿಲ್ಲ. ಅಲ್ಲಿ ನೆಮ್ಮದಿ ಇಲ್ಲ ಎಂದಿರುವ ಹೆಗಡೆ, ಆರ್ಥಿಕತೆಯನ್ನು ಬದಿಗೊತ್ತಿ ನೀಡಿರುವ ಗ್ಯಾರಂಟಿ ಸ್ಕೀಮ್​ಗಳು ಕರ್ನಾಟಕ ಜನತೆಗೆ ಮಾಡಿರುವ ದೊಡ್ಡ ದ್ರೋಹ. ಉಚಿತಗಳ ಹೆಸರಿನಲ್ಲಿ ಬಹುಸಂಖ್ಯಾತರನ್ನು ವಂಚಿಸುವ ಸರ್ಕಾರವಿದು. ಇದು ಒಳ್ಳೆಯ ಬೆಳವಣಿಗೆ ಅಲ್ಲ.‌ ಜನರು ನೋವು ಅನುಭವಿಸುತ್ತಿದ್ದಾರೆ ಎಂದರು.

ಹೊಸದಾಗಿ ಹುಟ್ಟಿಕೊಂಡಿರುವ ಇಂಡಿಯಾ ಒಕ್ಕೂಟ ಜನರ ದಿಕ್ಕು ತಪ್ಪಿಸುವ ಕೆಲಸ. ಇದು ಕಾಂಗ್ರೆಸ್​ನ ರೀತಿ. ದೇಶಕ್ಕೆ ದಾನ ಮಾಡಿ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ದೇಶವನ್ನು ಕಾಂಗ್ರೆಸ್ ಗುತ್ತಿಗೆ ಪಡೆದುಕೊಂಡಿದೆಯೇ? ಕಾಂಗ್ರೆಸ್ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ‌ ಸಂಸದರು, ಕಾಂಗ್ರೆಸ್ ಜಾತಿಯ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಜತೆಗೆ ದೇಶ ಒಡೆಯುವ ಕೆಲಸವೂ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.‌

ಇದನ್ನೂ ಓದಿ: ಯುವನಿಧಿ ನೋಂದಣಿಗೆ ಚಾಲನೆ: ಐದೂ ಗ್ಯಾರಂಟಿ ಜಾರಿ ಮಾಡಿದ್ದೇವೆ, ರಾಜ್ಯ ದಿವಾಳಿಯಾಗಿಲ್ಲ; ಸಿದ್ದರಾಮಯ್ಯ

Last Updated :Dec 26, 2023, 5:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.