ETV Bharat / state

ಶಿರಸಿ: ಸ್ನಾನಕ್ಕೆಂದು ನೀರಿಗಿಳಿದ ಯುವಕ ಸುಳಿಗೆ ಸಿಲುಕಿ ಸಾವು

author img

By ETV Bharat Karnataka Team

Published : Dec 24, 2023, 9:25 PM IST

ಶಿರಸಿ ತಾಲೂಕಿನ ಮುರೇಗಾರ್ ಫಾಲ್ಸ್‌ಗೆ ಸ್ನಾನಕ್ಕೆಂದು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

Man Drowned in muregar falls near sirsi
ಶಿರಸಿ: ಸ್ನಾನಕ್ಕೆಂದು ನೀರಿಗೆ ಇಳಿದ ಯುವಕ ಸುಳಿಗೆ ಸಿಲುಕಿ ಮುಳುಗಿ ಸಾವು

ಶಿರಸಿ(ಉತ್ತರಕನ್ನಡ): ಸ್ನಾನಕ್ಕಾಗಿ ಹೊಳೆಗಿಳಿದಾಗ ನೀರಿನ ಸುಳಿಗೆ ಸಿಲುಕಿ ಯುವಕ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುರೇಗಾರ್ ಫಾಲ್ಸ್‌ನಲ್ಲಿ ಭಾನುವಾರ ನಡೆದಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಇನಾಮಪುರದ ಫೈನಾನ್ಸ್‌ನ ಉದ್ಯೋಗಿ ದಾನೇಶ ದೊಡ್ಮನಿ (23) ಮೃತರು. ಇವರು ತನ್ನ 6 ಮಂದಿ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಶಿರಸಿ ತಾಲೂಕಿನ ಸಾಲ್ಕಣಿ ಪಂಚಾಯತ್​ ವ್ಯಾಪ್ತಿಯ ಮುರೇಗಾರ್ ಫಾಲ್ಸ್‌ಗೆ ತೆರಳಿದ್ದರು. ಸ್ನಾನಕ್ಕೆಂದು ನೀರಿಗಿಳಿದಾಗ ಸುಳಿಗೆ ಸಿಲುಕಿ ಮುಳುಗಿದ್ದಾರೆ.

ಘಟನೆ ಮಧ್ಯಾಹ್ನವೇ ನಡೆದಿದೆ. ಸಂಜೆಯ ವೇಳೆಗೆ ಶಿರಸಿಯ ಗೋಪಾಲ ಗೌಡ ಮತ್ತವರ ತಂಡ ಮೃತ ಯುವಕನ ದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆಯ ಪಿಐ ಸೀತಾರಾಮ.ಪಿ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಳೆದ ಒಂದು ವಾರದ ಹಿಂದಷ್ಟೇ ಶಿರಸಿ ತಾಲೂಕಿನಲ್ಲಿ‌ ಒಂದೇ ಕುಟುಂಬದ ಐವರು ನೀರು ಪಾಲಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಯುವಕನ ಬದುಕು‌ ದುರಂತ ಅಂತ್ಯ ಕಂಡಿದೆ. ಇದರಿಂದಾಗಿ ಮುರೇಗಾರ್ ಜಲಪಾತದಲ್ಲಿ ಜನರು ಈಜಾಡುವುದನ್ನು ನಿಷೇಧಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.‌

ಇದನ್ನೂ ಓದಿ: ಶಿರಸಿ: ಕಾರು - ಸರ್ಕಾರಿ ಬಸ್​ ಮಧ್ಯೆ ಭೀಕರ ಅಪಘಾತ; ಕಾರಿನಲ್ಲಿದ್ದ ಐವರು ಸಾವು

ಪ್ರತ್ಯೇಕ ಘಟನೆ: ರಜೆಯ ದಿನ ಕಳೆಯಲು ತೆರಳಿದ್ದ ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಡಿಸೆಂಬರ್​ 17ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಭೈರುಂಭೆ ಸಮೀಪ ಶಾಲ್ಮಲಾ ನದಿಯಲ್ಲಿ ನಡೆದಿತ್ತು. ಮೃತರೆಲ್ಲರೂ ಶಿರಸಿ ನಗರದವರು. ರಾಮನಬೈಲಿನ ಮೌಲಾನಾ ಅಹಮ್ಮದ್ ಸಲೀಂ ಕಲೀಲ್ (44), ನಾದಿಯಾ ನೂರ್ ಅಹಮದ್ ಶೇಖ್ (20), ಕಸ್ತೂರಬಾ ನಗರದ ಮಿಸ್ಬಾ ತಬಸುಮ್ (21), ರಾಮನಬೈಲಿನ ನಬಿಲ್ ನೂರ್ ಅಹಮದ್ ಶೇಖ್ (22) ಹಾಗೂ ಯುವಕ ಉಮರ್ ಸಿದ್ದಿಕ್ (23) ಮೃತರು. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ನಡೆಸಿ, ಸಂಜೆ ವೇಳೆಗೆ ಮೃತದೇಹ ಪತ್ತೆ ಮಾಡಲಾಗಿತ್ತು.

ಆಗಿದ್ದೇನು?: ರಾಮನಬೈಲು ಮತ್ತು ಕಸ್ತೂರಬಾ ನಗರದ ಒಂದೇ ಕುಟುಂಬದ ಸುಮಾರು 25 ಜನರು ಶಾಲ್ಮಲಾ ನದಿಯ ಭೂತನಗುಂಡಿ ಬಳಿ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅವರೊಂದಿಗೆ ಬಂದಿದ್ದ ಮಗುವೊಂದು ಆಟ ಆಡುತ್ತ ನದಿ ನೀರಿಗೆ ಬಿದ್ದಿದೆ. ತಕ್ಷಣವೇ ನೀರಿಗೆ ಜಿಗಿದ ಮೌಲಾನಾ ಅಹಮ್ಮದ್, ಮಗುವನ್ನು ನೀರಿನಿಂದ ಎತ್ತಿಕೊಂಡು, ಅದರ ತಾಯಿ ನಾದಿಯಾ ಅವರಿಗೆ ನೀಡಿದ್ದಾರೆ. ಆದರೆ, ಮಗುವನ್ನು ದಡಕ್ಕೆ ಬಿಟ್ಟು ನೀರಿನಿಂದ ಮೇಲೆ ಬರುವಾಗ ಕಾಲು ಜಾರಿ ಇಬ್ಬರೂ ಮುಳುಗಿದ್ದಾರೆ. ಅವರನ್ನು ರಕ್ಷಿಸುವ ಸಲುವಾಗಿ ನೀರಿಗೆ ಜಿಗಿದ ಮತ್ತೆ ಮೂವರೂ ಸಹ ನೀರಿನಿಂದ ಮೇಲೇಳಲಾಗದೇ ಮುಳುಗಿ ಸಾವಿಗೀಡಾಗಿದ್ದಾರೆ. ಮಗು ಮಾತ್ರ ಸುರಕ್ಷಿತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.