ETV Bharat / state

Landslide: ಭಾರಿ ಮಳೆಗೆ ಜೋಯಿಡಾದ ಕ್ಯಾಸಲ್ ರಾಕ್ ಸಮೀಪ ಗುಡ್ಡಕುಸಿತ; ರೈಲು ಸಂಚಾರ ಸ್ಥಗಿತ

author img

By

Published : Jul 26, 2023, 1:44 PM IST

Landslide in Karwar: ಉತ್ತರಕನ್ನಡದಲ್ಲಿ ನಿರಂತರ ಮಳೆಯಿಂದಾಗಿ ಜೋಯಿಡಾದ ಕ್ಯಾಸಲ್ ರಾಕ್ ಸಮೀಪದ ಕರಂಜೋಲ್ ಬಳಿ ಭೂಕುಸಿತ ಸಂಭವಿಸಿದೆ.

ಜೋಯಿಡಾದ ಕ್ಯಾಸಲ್ ರಾಕ್ ಬಳಿ ಗುಡ್ಡಕುಸಿತ
ಜೋಯಿಡಾದ ಕ್ಯಾಸಲ್ ರಾಕ್ ಬಳಿ ಗುಡ್ಡಕುಸಿತ

ಕಾರವಾರ: ಉತ್ತರಕನ್ನಡದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಜೋಯಿಡಾದ ಕ್ಯಾಸಲ್ ರಾಕ್ ಸಮೀಪದ ಕರಂಜೋಲ್ ಬಳಿ ಭೂಕುಸಿತವಾಗಿ ರೈಲ್ವೆ ಸಂಚಾರ ಸ್ಥಗಿತಗೊಂಡಿದೆ. ಕಳೆದ ಕೆಲವು ದಿನಗಳಿಂದ ಬಿಟ್ಟೂಬಿಡದೆ ಮಳೆಯಾಗುತ್ತಿದ್ದು, ಕರಂಜೋಲ್ ರೈಲ್ವೆ ಮಾರ್ಗದಲ್ಲಿಯೇ ಭೂಕುಸಿತವಾಗಿದೆ. ಘಟನೆಯಿಂದ ಹುಬ್ಬಳ್ಳಿ-ಗೋವಾ ರೈಲು ಸಂಚಾರ ಸಂಪೂರ್ಣ ನಿಂತುಹೋಗಿದೆ. ಭೂಕುಸಿತದ ಸ್ಥಳದಲ್ಲಿ ರೈಲ್ವೆ ಸಿಬ್ಬಂದಿ ಹಾಗೂ ಕಾರ್ಮಿಕರು ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಶಿರಸಿ-ಕುಮಟಾ ಹೆದ್ದಾರಿಯ ರಾಗಿ ಹೊಸಳ್ಳಿ ಬಳಿ ಗುಡ್ಡಕುಸಿದು ಹೆದ್ದಾರಿ ಸಂಪೂರ್ಣ ಕೆಸರುಮಯವಾಗಿದ್ದು, ವಾಹನಗಳು ಕೆಸರಿನಲ್ಲಿ ಸಿಲುಕಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿರಸಿ-ಕುಮಟಾ ಹೆದ್ದಾರಿಯಲ್ಲಿ ಮೂರು ದಿನಗಳ ಹಿಂದೆ ಗುಡ್ಡ ಕುಸಿತವಾಗಿ ಕೆಲವು ಗಂಟೆಗಳವರೆಗೆ ಸಂಚಾರ ಸಂಪೂರ್ಣ ಬಂದ್‌ ಆಗಿತ್ತು. ಬಳಿಕ ಮಣ್ಣು ತೆರವುಗೊಳಿಸಲಾಗಿತ್ತಾದರೂ ಇದೇ ಪ್ರದೇಶದಲ್ಲಿ ಮತ್ತೆ ಕುಸಿತವಾಗಿ ಮಣ್ಣು ಹೆದ್ದಾರಿಗೆ ಬಂದಿದೆ.

ಸದ್ಯ ಜೆಸಿಬಿ ಮೂಲಕ ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಪ್ರದೇಶದಲ್ಲಿ ಹೆದ್ದಾರಿ ಸಂಪೂರ್ಣ ಕೆಸರುಮಯವಾದ ಕಾರಣ ವಾಹನಗಳು ಸಂಚರಿಸುವಾಗ ಕೆಸರಿನಲ್ಲಿ ಸಿಲುಕಿಕೊಂಡು ಸವಾರರು ಪರದಾಡಬೇಕಾಗಿದೆ. ಬುಧವಾರ ಮುಂಜಾನೆ ಕೂಡ ಕಾರೊಂದು ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಹೆದ್ದಾರಿ ಕಾಮಗಾರಿಯ ಕಾರ್ಮಿಕರು, ಪ್ರಯಾಣಿಕರು ವಾಹನವನ್ನು ತಳ್ಳಿ ಮೇಲೆತ್ತಲು ಪ್ರಯತ್ನಿಸಿದರು ಕೂಡಾ ಸಾಧ್ಯವಾಗಿರಲಿಲ್ಲ. ಕೊನೆಗೆ ಜೆಸಿಬಿ ಮೂಲಕ ಸಿಲುಕಿರುವ ವಾಹನಕ್ಕೆ ಹಗ್ಗ ಕಟ್ಟಿ ಎಳೆದು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.

ಜಿಲ್ಲೆಯ ಕೆಲವೆಡೆ ಶಾಲಾ-ಕಾಲೇಜಿಗೆ ರಜೆ: ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರ, ಜೋಯಿಡಾ, ಹಳಿಯಾಳ ಮತ್ತು ದಾಂಡೇಲಿ ತಾಲೂಕುಗಳಲ್ಲಿ ಅಗತ್ಯ ಮುಂಜಾಗ್ರತೆ ವಹಿಸಲು ಜಿಲ್ಲಾಡಳಿತವು ಇಂದು ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿದೆ. ಭಟ್ಕಳ, ಹೊನ್ನಾವರದಲ್ಲಿಯೂ ಸ್ಥಳೀಯ ಆಡಳಿತ ಮಳೆ ಮುಂದುವರಿದಿದ್ದು ರಜೆ ಮುಂದುವರಿಸಲಾಗಿದೆ. ಇನ್ನುಳಿದ ತಾಲೂಕುಗಳಲ್ಲಿ ಮಳೆ ಪ್ರಮಾಣವನ್ನು ಅವಲೋಕಿಸಿ ಅಲ್ಲಿನ ತಹಶೀಲ್ದಾರ್‌ ಅವರಿಗೆ ಶಾಲೆ ಕಾಲೇಜು ರಜೆಗಳ ಬಗ್ಗೆ ಅಗತ್ಯ ಕ್ರಮ ವಹಿಸಲು ಅಧಿಕಾರ ನೀಡಲಾಗಿದೆ.

ರೈಲು ಸಂಚಾರ ಸ್ಥಗಿತ- ಬೆಳಗಾವಿ ವರದಿ: ಗೋವಾ ರೈಲ್ವೇ ಮಾರ್ಗದ ದೂಧಸಾಗರದಲ್ಲಿ ಭೂಕುಸಿತ ಉಂಟಾದ ಪರಿಣಾಮ ಕೆಲ ರೈಲುಗಳ ಸಂಚಾರವನ್ನು ನೈಋತ್ಯ ರೈಲ್ವೇ ಇಲಾಖೆ ಸ್ಥಗಿತಗೊಳಿಸಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದೂಧಸಾಗರ ಜಲಪಾತದ ಬಳಿಯ ಸುರಂಗ ಮಾರ್ಗದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ. ಹಾಗಾಗಿ ಗೋವಾಕ್ಕೆ ತೆರಳುವ ರೈಲುಗಳನ್ನು ರದ್ದುಗೊಳಿಸಲಾಗಿದೆ. ಗುಡ್ಡ ಕುಸಿತದಿಂದ ರೈಲು ಹಳಿಯ ಮೇಲೆ ಮಣ್ಣು ಬಿದ್ದಿದೆ. ಇದರಿಂದ ಮಂಗಳವಾರ ರಾತ್ರಿ ಗೋವಾದಿಂದ ಬೆಳಗಾವಿ ಮೂಲಕ ದೆಹಲಿಗೆ ತೆರಳುತ್ತಿದ್ದ ನಿಜಾಮುದ್ದಿನ್ ಎಕ್ಸ್‌ಪ್ರೆಸ್ ರೈಲು ಮಾರ್ಗ ಬದಲಾಯಿಸಿ ಮುಂಬೈ ಮೂಲಕ ಕಳುಹಿಸಲಾಯಿತು. ದೆಹಲಿಯಿಂದ ಮಿರಜ್ ಮೂಲಕ ಗೋವಾಕ್ಕೆ ತೆರಳುತ್ತಿದ್ದ ಹಜರತ್ ನಿಜಾಮುದ್ದಿನ್ ಎಕ್ಸ್​ಪ್ರೆಸ್ ರೈಲು ಬೆಳಗಾವಿವರೆಗೆ ಮಾತ್ರ ಬಂದಿದ್ದು, ಅಲ್ಲಿಂದ ಪ್ರಯಾಣಿಕರನ್ನು ಬುಧವಾರ ಬೆಳಗ್ಗೆ 13 ಬಸ್​ಗಳಲ್ಲಿ ಗೋವಾಕ್ಕೆ ಕಳುಹಿಸಲಾಯಿತು. ಸದ್ಯ ಕ್ಯಾಸಲ್​ರಾಕ್ ವರೆಗೆ ಮಾತ್ರ ರೈಲುಗಳು ತೆರಳುತ್ತಿವೆ.

ಇದನ್ನೂ ಓದಿ: KRS Reservoir: 104 ಅಡಿ ತಲುಪಿದ ಕೆಆರ್‌ಎಸ್‌ ಅಣೆಕಟ್ಟೆಯ ನೀರಿನ ಮಟ್ಟ: ರೈತರ ಮೊಗದಲ್ಲಿ ಸಂತಸ- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.