ಕಾರವಾರ: ತೌಕ್ತೆ ಹೆಸರಿನ ಚಂಡಮಾರುತದ ಅಬ್ಬರಕ್ಕೆ ಜಿಲ್ಲೆಯ ಕರಾವಳಿ ಭಾಗ ತತ್ತರಿಸಿದೆ. ತಡರಾತ್ರಿ ಸುರಿದ ಭಾರಿ ಗಾಳಿಸಹಿತ ಮಳೆಗೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಕಡಲತೀರಗಳ ಮನೆಗಳಿಗೆ ನೀರು ನುಗ್ಗಿ ಜನಜೀವನಕ್ಕೆ ಸಮಸ್ಯೆಯಾಗಿದೆ.
ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿದ್ದು, ಕರಾವಳಿ ಭಾಗದಲ್ಲಿ ಮಳೆಗಿಂತಲೂ ಗಾಳಿಯ ಅಬ್ಬರವೇ ಜೋರಾಗಿದೆ. ಗಾಳಿಯ ಹೊಡೆತಕ್ಕೆ ಕಾರವಾರದ ಕೆಎಎಸ್ಆರ್ಟಿಸಿ ಡಿಪೋ ಬಳಿ ಬೃಹತ್ ಗಾತ್ರದ ಮರ ಧರಾಶಾಹಿಯಾಗಿದೆ. ಹೀಗಾಗಿ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು. ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಇದನ್ನೂ ಓದಿ: ತೌಕ್ತೆ ಹೊಡೆತಕ್ಕೆ ಆಳ ಸಮುದ್ರದಲ್ಲಿ ಸಿಲುಕಿದ ಎರಡು ಬೋಟ್ಗಳು; 5 ಮಂದಿ ನಾಪತ್ತೆ
ಕಾರವಾರದ ಹಾರವಾಡ ಹಾಗೂ ಮಾಜಾಳಿಯಲ್ಲಿ ತಡರಾತ್ರಿ ಬೃಹತ್ ಅಲೆಗಳು ಅಪ್ಪಳಿಸಿದ್ದು ಸಮುದ್ರ ತೀರದ ಮನೆಗಳಿಗೆ ನೀರು ನುಗ್ಗಿತು. ಹೀಗಾಗಿ ಜನರು ಪರದಾಡುವಂತಾಯಿತು. ಸಮುದ್ರ ತೀರದಲ್ಲಿದ್ದ ದೋಣಿಗಳು ಅಲೆಗಳ ಅಬ್ಬರಕ್ಕೆ ಸಿಲುಕಿ ಹಾನಿಗೊಳಗಾಗಿವೆ. ಕಡಲ ತೀರದ ನಿವಾಸಿಗಳು ರಾತ್ರಿಪೂರ್ತಿ ನಿದ್ದೆಗೆಟ್ಟು ಭಯದಲ್ಲೇ ಸಮಯ ಕಳೆಯುವಂತಾಗಿತ್ತು. ಘಟ್ಟದ ಮೇಲ್ಬಾಗದಲ್ಲಿಯೂ ಗಾಳಿಯ ಆರ್ಭಟ ಜೋರಾಗಿದೆ. ರಾತ್ರಿಯಿಂದಲೇ ಹಲವೆಡೆ ವಿದ್ಯುತ್ ಕಡಿತಗೊಂಡಿದೆ.