ETV Bharat / state

ಮಲ್ಲಿಗೆ ನಗರಿಯಲ್ಲಿ ಮಳೆರಾಯನ ಅಬ್ಬರ: ಕುಂಭದ್ರೋಣ ಮಳೆಗೆ ನಲುಗಿದ ಉ.ಕನ್ನಡ ಜಿಲ್ಲೆ

author img

By

Published : Jul 18, 2021, 9:05 PM IST

Updated : Jul 18, 2021, 10:55 PM IST

ಭಟ್ಕಳದಲ್ಲಿ ಇಂದು ಮಳೆ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಎಡಬಿಡದೆ ಸುರಿಯುತ್ತಿರುವ ಮಳೆಗೆ ರಾಷ್ಟ್ರೀಯ ಹೆದ್ದಾರಿ 66 ಸಂಶುದ್ದೀನ್ ವೃತ್ತ, ರಂಗಿನಕಟ್ಟೆ, ಶಿರಾಲಿ ಸೇರಿದಂತೆ ಇತರೆಡೆ ನೀರು ತುಂಬಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಮಲ್ಲಿಗೆ ನಗರಿಯಲ್ಲಿ ಮಳೆರಾಯನ ಅಟ್ಟಹಾಸ
ಮಲ್ಲಿಗೆ ನಗರಿಯಲ್ಲಿ ಮಳೆರಾಯನ ಅಟ್ಟಹಾಸ

ಕಾರವಾರ: 'ಮಲ್ಲಿಗೆ ನಗರಿ' ಭಟ್ಕಳದಲ್ಲಿ ದಾಖಲೆ ಪ್ರಮಾಣದಲ್ಲಿ ವರುಣದೇವ ಅಬ್ಬರಿಸುತ್ತಿದ್ದು, ಜನರನ್ನು ತೊಂದರೆಯಲ್ಲಿ ಸಿಲುಕಿಸಿದ್ದಾನೆ. ಪಟ್ಟಣದ ಕೆಲ ಪ್ರದೇಶಗಳು ಜಲಾವೃತಗೊಂಡಿದೆ. ಶರಾಬಿ ನದಿ ಉಕ್ಕಿ ಹರಿಯುತ್ತಿದೆ.

ಕಳೆದ ರಾತ್ರಿಯಿಂದ ಕರಾವಳಿಯ ತಾಲೂಕುಗಳಲ್ಲಿ ಅಧಿಕ ವರ್ಷಧಾರೆಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ಭಟ್ಕಳದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ಸಂಶುದ್ದೀನ್ ವೃತ್ತ, ರಂಗಿನಕಟ್ಟೆ, ಶಿರಾಲಿ ಸೇರಿದಂತೆ ಇತರೆಡೆ ನೀರು ತುಂಬಿ ವಾಹನ ಸಂಚಾರಕ್ಕೆ ತೊಂದರೆಯಾಯಿತು.

ಮಲ್ಲಿಗೆ ನಗರಿಯಲ್ಲಿ ಮಳೆರಾಯನ ಅಟ್ಟಹಾಸ

ಹೊಳೆಯಂತಾಗಿರುವ ಹೆದ್ದಾರಿಯಲ್ಲಿ ಸವಾರರು ವಾಹನಗಳನ್ನು ಓಡಿಸಲು ಹರಸಾಹಸ ಪಡಬೇಕಾದ ಸ್ಥಿತಿ ಇತ್ತು. ಐಆರ್‌ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಈ ರೀತಿ ಹೆದ್ದಾರಿಯಲ್ಲಿ ನೀರು ನಿಲ್ಲುವಂತಾಗಿದೆ ಎನ್ನಲಾಗುತ್ತಿದೆ. ಇದರಿಂದಾಗಿ ರಸ್ತೆ ಪಕ್ಕದ ಅಂಗಡಿಗಳು ಮತ್ತು ಮನೆಗಳಿಗೆ ನೀರು ನುಗ್ಗಿ‌ತು.

ನಾಳೆ ಎಸ್ಎಸ್ಎಲ್​ಸಿ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳು ಶಾಲೆಗಳಿಗೆ ಬರಲಿದ್ದಾರೆ. ಹೆದ್ದಾರಿಯಲ್ಲಿ ನಿಂತಿರುವ ಕೆಸರು ನೀರು ಮಕ್ಕಳ ಮೈಮೇಲೆ ಚೆಲ್ಲುವ ಸಾಧ್ಯತೆ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಭಟ್ಕಳದ ಮುಂಡಳ್ಳಿ, ಚೌಥನಿ, ಹೊಸ್ಮನೆ ಪ್ರದೇಶಗಳು ಜಲಾವೃತವಾಗಿವೆ. ಇಲ್ಲಿನ ಹಲವು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿರುವ ವಸ್ತುಗಳಿಗೆ ಹಾನಿಯಾಗಿದೆ.

ಇಲ್ಲಿನ ಕುದುರೆಬೀರಪ್ಪ ದೇವಾಲಯ ಮುಳುಗಿದ್ದು, ಮುಂಡಳ್ಳಿ ಮತ್ತು ಭಟ್ಕಳ ಸಂಪರ್ಕಿಸುವ ರಸ್ತೆ ಮುಳುಗಿ ಸಂಪರ್ಕ ಕಡಿತಗೊಂಡಿದೆ. ಈ ನಡುವೆ ಮುಂಡಳ್ಳಿಯ ಶರಾಬಿ ನದಿ ಉಕ್ಕಿ ಹರಿಯುತಿದ್ದು ಪ್ರವಾಹ ಆತಂಕ ತಲೆದೋರಿದೆ. ಮುಟ್ಟಳ್ಳಿ, ಮೂಡಭಟ್ಕಳ ಭಾಗದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ.

ಇದನ್ನೂ ಓದಿ: ಭಟ್ಕಳ : ರಸ್ತೆಯ ಒಂದು ಭಾಗ ಜಲಾವೃತ, ಗಾಳ ಹಾಕಿ ಸ್ಥಳೀಯರ ಪ್ರತಿಭಟನೆ

ವಾಹನಗಳ ಶೋ ರೂಮ್‌ಗಳಿಗೂ ನೀರು ನುಗ್ಗಿದ್ದರಿಂದ ತೊಂದರೆಯಾಗಿದೆ. ಕಳೆದ 24 ಗಂಟೆಗಳಲ್ಲಿ 209 ಮಿಲಿ ಮೀಟರ್ ಮಳೆಯಾಗಿದೆ. ಕಾರವಾರ, ಅಂಕೋಲಾ, ಕುಮಟಾ ಮತ್ತು ಹೊನ್ನಾವರದಲ್ಲಿಯೂ ಭಾರೀ ಮಳೆ ಸುರಿಯುತ್ತಿದೆ.

ಭಟ್ಕಳದಲ್ಲಿ ಇತ್ತೀಚಿಗೆ ಹೋಲಿಸಿದರೆ ಅಧಿಕ ಮಳೆಯಾಗಿದ್ದು, ತಗ್ಗು ಪ್ರದೇಶಗಳ ಜನರು ಮತ್ತೆ ತೊಂದರೆಗೆ ಸಿಲುಕಿದ್ದಾರೆ. ಒಂದೆಡೆ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ನೀರು ತುಂಬಿದ್ದರೆ, ಇನ್ನೊಂದೆಡೆ ಶರಾಬಿ ನದಿಯಲ್ಲಿ ಹೂಳು ತುಂಬಿದ್ದರಿಂದ ನೀರು ರಸ್ತೆ, ಮನೆಗಳಿಗೆ ನುಗ್ಗುಲು ಕಾರಣವಾಗಿದೆ ಎನ್ನಲಾಗುತ್ತಿದೆ.

Last Updated : Jul 18, 2021, 10:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.