ಸಾಲ ಮನ್ನಾ ಯೋಜನೆ ಫಲಾನುಭವಿಗಳಿಗೆ ಹತ್ತಾರು ವಿಘ್ನ.. 3 ವರ್ಷವಾದರೂ ಬಗೆಹರಿಯದ ದಾಖಲೆ ಸಮಸ್ಯೆ

author img

By

Published : Sep 19, 2021, 12:38 PM IST

farmers-facing-problem-in-loan-waiver-scheme

ರಾಜ್ಯದಲ್ಲಿ ಮೈತ್ರಿ ಸರ್ಕಾರದ ವೇಳೆ ಘೋಷಿಸಲಾಗಿದ್ದ ಸಾಲ ಮನ್ನಾ ಯೋಜನೆ ಫಲಾನುಭವಿಗಳಿಗೆ ನೂರಾರು ವಿಘ್ನ ಕಾಡುತ್ತಿದೆ. ದಾಖಲೆಗಳ ಪರಿಶೀಲನೆ ವೇಳೆ ನ್ಯೂನ್ಯತೆ ಕಂಡುಬಂದಿದ್ದು, ಸಾಲ ಮನ್ನಾಕ್ಕಾಗಿ ಅರ್ಜಿ ಸಲ್ಲಿಸಿದ್ದ ರೈತರು ಸರ್ಕಾರಿ ಕಚೇರಿಗೆ ಅಲೆಯುವ ಸ್ಥಿತಿ ಎದುರಾಗಿದೆ.

ಶಿರಸಿ (ಉತ್ತರ ಕನ್ನಡ): ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ ಜಾರಿಗೆ ತಂದಿದ್ದ ಬೆಳೆಸಾಲ ಮನ್ನಾ ಯೋಜನೆಯ ಫಲದಿಂದ ಉತ್ತರ ಕನ್ನಡ ಜಿಲ್ಲೆಯ ಸುಮಾರು 2 ಸಾವಿರ ರೈತರು ವಂಚಿತರಾಗಿದ್ದಾರೆ‌. ಸಾಲ ಮನ್ನಾಗೆ ಅರ್ಜಿ ಸಲ್ಲಿಸಿ 3 ವರ್ಷ ಕಳೆದರೂ ದಾಖಲೆಗಳ ಗೊಂದಲ, ತಾಂತ್ರಿಕ ಅಡಚಣೆಯಿಂದ ಅರ್ಹ ರೈತರಿಗೂ ಸಾಲ ಮನ್ನಾ ಸೌಲಭ್ಯ ದೊರೆತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಒಬ್ಬ ರೈತನಿಗೆ ಗರಿಷ್ಠ 1 ಲಕ್ಷ ರೂ.ವರೆಗಿನ ಬೆಳೆಸಾಲ ಮನ್ನಾ ಮಾಡುವ ಯೋಜನೆ 2018ರ ಆಗಸ್ಟ್‌ನಲ್ಲಿ ಜಾರಿಗೆ ತರಲಾಗಿತ್ತು. ಆದರೆ ಯೋಜನೆ ಜಾರಿಗೊಂಡು ಮೂರು ವರ್ಷ ಕಳೆದರೂ ಹಲವು ರೈತರಿಗೆ ಸೌಲಭ್ಯ ಸಿಗದಂತಾಗಿದೆ. ಅಂದಾಜು‌ 2 ಸಾವಿರ ರೈತರಲ್ಲಿ 900ರಷ್ಟು ರೈತರ ಪಡಿತರ ಚೀಟಿ ದೋಷವೂ ಇದರಲ್ಲಿ ಸೇರಿದೆ. ಬೆಳೆಸಾಲ ಪಡೆಯುವ ರೈತ ಆಯಾ ಸಹಕಾರಿ ಸಂಸ್ಥೆ ಅಥವಾ ಬ್ಯಾಂಕ್‌ಗಳಲ್ಲಿ ಪಹಣಿ, ಪಡಿತರ ಚೀಟಿ, ಆಧಾರ್ ಕಾರ್ಡ್ ದಾಖಲೆ ನೀಡಬೇಕಿತ್ತು.

ಸಾಲ ಮನ್ನಾ ಯೋಜನೆ ಫಲಾನುಭವಿಗಳಿಗೆ ವಿಘ್ನ

ಹಲವು ರೈತರು ಸಾಲಕ್ಕೆ ಅರ್ಜಿ ಸಲ್ಲಿಸುವಾಗ ನೀಡಿದ ಪಡಿತರ ಚೀಟಿಯನ್ನು ಕೆಲ ತಿಂಗಳ ನಂತರ ಬದಲಿಸಿಕೊಂಡಿದ್ದರು. ಕೆಲವರ ಹೆಸರು ಪಹಣಿಯಲ್ಲಿದ್ದಂತೆ ಬೇರೆ ದಾಖಲೆಗಳಲ್ಲಿ ಇಲ್ಲದಿರುವುದು ಸಾಲ ಮನ್ನಾಕ್ಕೆ ಅರ್ಜಿ ಪರಿಗಣಿಸುವಾಗ ಈ ಲೋಪದೋಷದಿಂದಾಗಿ ಅರ್ಜಿ ತಿರಸ್ಕೃತಗೊಳ್ಳುತ್ತಿವೆ.

ಬಳಿಕ ದಾಖಲೆಗಳಲ್ಲಿ ಕಂಡುಬಂದ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಬಂದೊದಗಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಸಚಿವರಾಗಿರುವ ಶಿವರಾಮ ಹೆಬ್ಬಾರ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.‌

ಇದನ್ನೂ ಓದಿ: ಕಾಂಗ್ರೆಸ್​ನವರು ನೀಚರು, ದಿನಕ್ಕೊಂದು ಧೋರಣೆ ಶುರು ಮಾಡ್ತಾರೆ: ಸಚಿವ ಸುಧಾಕರ್ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.