ETV Bharat / state

ಕೆಡಿಪಿ ಸಭೆಯಲ್ಲಿ ಸಚಿವರು - ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ: ಅತಿರೇಕಕ್ಕೇರಿದ ಬಳಿಕ ಪೊಲೀಸರ ಮಧ್ಯಸ್ಥಿಕೆ

author img

By ETV Bharat Karnataka Team

Published : Sep 4, 2023, 10:28 PM IST

Updated : Sep 5, 2023, 5:28 PM IST

ಭಟ್ಕಳದ ತಾಲೂಕು ಪಂಚಾಯತ್​ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆದಿದೆ. ಈ ವೇಳೆ ಸಚಿವರು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಕೆಡಿಪಿ ಸಭೆಯಲ್ಲಿ ಸಚಿವರು-ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ
ಕೆಡಿಪಿ ಸಭೆಯಲ್ಲಿ ಸಚಿವರು-ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ

ಕೆಡಿಪಿ ಸಭೆಯಲ್ಲಿ ಸಚಿವರು-ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ

ಭಟ್ಕಳ : ರಾಜ್ಯ ಮೀನುಗಾರಿಕೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆ.ಡಿ.ಪಿ (20 ಅಂಶ ಸೇರಿ) ಪ್ರಗತಿ ಪರಿಶೀಲನಾ ಸಭೆಯು ಸೋಮವಾರದಂದು ತಾಲೂಕು​ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎಮ್ ಎಮ್ ಬೀಳಗಿ ಅವರ ನೇಮಕದ ಬಳಿಕ, ಇರುವ ಸಿಬ್ಬಂದಿ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಈ ವಿಚಾರವಾಗಿ ಸಚಿವರು ನಿರ್ದೇಶಕರಲ್ಲಿ ಪ್ರಶ್ನಿಸಿದ್ದಕ್ಕೆ, 'ನಾನು ಸರ್ಕಾರದ ಮಾರ್ಗಸೂಚಿಯಂತೆ ಕೆಲಸ ಮಾಡಿದ್ದೇನೆ. ನನ್ನ ಮೇಲೆ ಅಪಪ್ರಚಾರ ಮಾಡಿದ್ದಾರೆ. ನನ್ನ ಶಿಸ್ತು, ರೀತಿ, ಕೆಲಸ ಉಳಿದ ಸಿಬ್ಬಂದಿಗೆ ಸಮಸ್ಯೆ ಆಗಿದ್ದಕ್ಕೆ ಅವರು ವರ್ಗಾವಣೆ ಮಾಡಿಸಿಕೊಂಡು ಹೋಗಿರಬಹುದು ಎಂದರು.

ಆಗ ಸಚಿವ ಮಂಕಾಳ ಅವರು, ನಿಮ್ಮ ವಿರುದ್ದ ಎಲ್ಲ ಸಾಕ್ಷಿ ನನ್ನ‌ ಬಳಿ ಇದೆ. ಇದನ್ನು ಸಭೆಯಲ್ಲಿ ಬಯಲು ಮಾಡಬೇಕಾಗುತ್ತದೆ ಎಂದು ಹೇಳಿದರು. ಇದಕ್ಕೆ ಅವರ ಜೊತೆಗೆ ನಿರ್ದೇಶಕ ಅಧಿಕಾರಿ ಮಾತಿಗಿಳಿದರು. 'ದೇಶದಲ್ಲಿ ರಾಮನನ್ನು, ಗಾಂಧಿಯನ್ನು ಜನರು ಬಿಟ್ಟಿಲ್ಲ' ಎಂಬ ಮಾತು ಹೇಳಿದ ಇಲಾಖೆ ನಿರ್ದೇಶಕರ ಮಾತಿಗೆ, ಸಚಿವ ಮಂಕಾಳ ವೈದ್ಯ ಏಕವಚನದಲ್ಲಿ ಸಭೆಯಿಂದ ಹೊರಗೆ ನಡೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ, ಪೊಲೀಸರು ಮಧ್ಯಸ್ಥಿಕೆ ವಹಿಸಿ ಅಧಿಕಾರಿಯನ್ನು ಸಮಾಧಾನಪಡಿಸಿ, ಸಭೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದರು. ನಂತರ ಅಧಿಕಾರಿಯ ವರ್ತನೆಯ ವಿರುದ್ದ ಸಭೆಯಲ್ಲಿ ಠರಾವು ತೆಗೆಯುವಂತೆ ಸಚಿವರು ಸೂಚಿಸಿದರು.

ಇನ್ನು ಹೆಸ್ಕಾಂ ಇಲಾಖೆಯಲ್ಲಿ ನನ್ನ ಅವಧಿಯಲ್ಲಿ 2011ರಲ್ಲಿನ 110 ಕೆವಿ ವಿದ್ಯುತ್ ಘಟಕದ ಮಂಜೂರಿ ಬಗ್ಗೆ ಪ್ರಯತ್ನ ಮಾಡಿದ್ದು, ಇನ್ನು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಶೀಘ್ರವಾಗಿ ಘಟಕ ಸ್ಥಾಪನೆ ಆಗುವಂತೆ ಹೆಸ್ಕಾಂ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಹಾಗೂ ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗೆ ಸೂಚಿಸಿದರು.

ಸ್ವಚ್ಛತೆ ಬಗ್ಗೆ ಗಮನ ಹರಿಸಿ: ಇನ್ನು ಕೆ.ಎಸ್.ಆರ್.ಟಿ.ಸಿ ಬಸ್ ವಿಚಾರದಲ್ಲಿ 10 ಚಾಲಕ ನಿರ್ವಾಹಕರ ಕೊರತೆ ಇರುವ ಬಗ್ಗೆ ಡಿಪ್ಪೋ ಮ್ಯಾನೇಜರ್ ಸಚಿವ ರಲ್ಲಿ ಪ್ರಸ್ತಾಪಿಸಿದ್ದು, ಇದಕ್ಕೆ ಸಚಿವರು 2017-18 ರಲ್ಲಿ ಈ ಮೊದಲಿನಂತೆ ಬಸ್ ಸಂಚಾರದ ಶೆಡ್ಯುಲ್ ಮತ್ತೆ ಆರಂಭ ಆಗಬೇಕು. ಮುಂಡಳ್ಳಿ ಅಳ್ವೇಕೋಡಿ ಬಸ್ ಸಂಚಾರ ಮತ್ತೆ ನಡೆಯಬೇಕು. ಮಹಿಳೆಯರಿಗೆ ಉಚಿತ ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಿ ಕರೆ ಮಾಡುತ್ತಿದ್ದಾರೆ. ಬಸ್ ಬೇಕಿದ್ದರೆ ತಿಳಿಸಿ.‌ ದೂರದ ಊರಿಗೆ ಹೋಗುವ ಎಕ್ಸ್‌ಪ್ರೆಸ್‌ ಬಸ್​ಗಳನ್ನು ಸಹ ನಿಲ್ಲಿಸದೇ ಅದರ ಸಂಚಾರ ಸಹ ಮುಂದುವರಿಸಿರಿ. ಇನ್ನು ನಿಲ್ದಾಣದಲ್ಲಿ ಸ್ವಚ್ಛತೆ ಬಗ್ಗೆ ಗಮನ ಹರಿಸಿ, ಬಸ್ ನಿಲ್ದಾಣದ ಎದುರಿನ ಹೊಂಡವನ್ನು ಐಆರ್​ಬಿ ಕಂಪನಿಯಿಂದ ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಮುರುಡೇಶ್ವರದಲ್ಲಿ ಶೌಚಾಲಯದ ಟೆಂಡರ್​ ಆಗಿಲ್ಲ ಎಂದು ಸಹಾಯಕ ಆಯುಕ್ತರು ಪತ್ರಿಕೆಯಲ್ಲಿ ಬಂದಿರುವ ಬಗ್ಗೆ ಪ್ರಸ್ತಾಪಿಸಿದರು. ಟೆಂಡರ್​ ಹಣವನ್ನು ಹೆಚ್ಚಿಸಿ ಟೆಂಡರ್​ ಮಾಡಿಸಿ ಎಂದು ಸಚಿವರು ತಿಳಿಸಿದರು. ಪೊಲೀಸ್​ ಇಲಾಖೆಯು ಭಟ್ಕಳದಲ್ಲಿ ಗಾಂಜಾ ಡ್ರಗ್ಸ್​, ಅಫೀಮ್​ಗಳಂತಹ ಪ್ರಕರಣದ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರು ಡಿವೈಎಸ್​ಪಿ ಶ್ರೀಕಾಂತ ಕೆ ಅವರಿಗೆ ಸೂಚನೆ ನೀಡಿದರು.

6 ನಗರ ಪ್ರಕರಣ, 4 ಗ್ರಾಮೀಣ ಠಾಣೆ ಸೇರಿ 10 ಗಾಂಜಾ ಸಂಬಂಧಿತ ಪ್ರಕರಣದ ಅಪರಾಧಿಯನ್ನು ಬಂಧನದಲ್ಲಿರುವಂತೆಯೇ ಇರುವಂತೆ ಮಾಡಿ. ಭಟ್ಕಳದಲ್ಲಿ ಗಾಂಜಾ ಸಂಪೂರ್ಣ ಬಂದ್ ಆಗಲೇಬೇಕು. ಗಾಂಜಾ ಮಾರುವವರು ಇರಲೇಬಾರದು. ಶಾಲಾ ಕಾಲೇಜಿಗೆ ಜಾಗೃತಿ ಮೂಡಿಸಿ. ಅಪರಾಧಿಗಳು ಹೊರಗೆ ಬರಬಾರದು. ಹಿಮಾಚಲ ಪ್ರದೇಶದಿಂದ ಬರುತ್ತಿದೆ ಎಂಬ ಮಾಹಿತಿ ಇದ್ದು, ಸದ್ಯ ಗಾಂಜಾ ಪ್ರಕರಣ ನಿಯಂತ್ರಣ ಮಾಡಲೇಬೇಕಿದ್ದು, ಮೊದಲು ಪೆಡ್ಲರ್​ಗಳನ್ನು ತಕ್ಷಣಕ್ಕೆ ಬಂಧಿಸಬೇಕು ಎಂದು ಸಚಿವರು ಸೂಚಿಸಿದರು.

ನುಡಿದಂತೆ ನಡೆಯಲಿದ್ದೇವೆ : ನಗರ ಭಾಗದಲ್ಲಿ ಸಿಸಿಟಿವಿ ಅಳವಡಿಕೆಗೆ ಪುರಸಭೆಗೆ ಕೇಳಿದ್ದೇವೆ. ಅವರು ಅದಕ್ಕೆ ಒಪ್ಪಿದ್ದಾರೆ ಎಂದು ಡಿವೈಎಸ್​ಪಿ ಶ್ರೀಕಾಂತ ಕೆ. ಸಭೆಯಲ್ಲಿ ತಿಳಿಸಿದರು. ಗೃಹಲಕ್ಷ್ಮೀ ಯೋಜನೆಯು ಭಟ್ಕಳದಲ್ಲಿ 29370 ನೋಂದಣಿ ಆಗಿದೆ. ಇನ್ನು 5558 ಬಾಕಿ‌ ಇದೆ. ಒಟ್ಟು ಭಟ್ಕಳದಲ್ಲಿ 83% ನೋಂದಣಿ ಆಗಿದೆ. ಪ್ರತಿಶತ ರೂ. 587,580,00 ಹಣ ಇದೆ. ಪ್ರತಿ ತಿಂಗಳಿಗೆ ನೀಡಲಿದ್ದೇವೆ. 15 ಕೋಟಿ ರೂಪಾಯಿ ಎಲ್ಲಾ ಯೋಜನೆಗೆ ತಾಲೂಕಿಗೆ ಖರ್ಚು ಆಗುತ್ತದೆ ಎಂದ ಸಚಿವರು ಬಡವರ ಪರವಾಗಿ ನುಡಿದಂತೆ ನಡೆಯಲಿದ್ದೇವೆ ಎಂದರು.

ಈ ಸಂಧರ್ಭದಲ್ಲಿ ಸಹಾಯಕ ಆಯುಕ್ತೆ ಡಾ. ನಯನಾ ಎನ್. ತಹಸೀಲ್ದಾರ್​ ತಿಪ್ಪೇಸ್ವಾಮಿ, ತಾಲೂಕ್​ ಪಂಚಾಯತ್​ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ನಮನೆ ಮುಂತಾದವರು ಇದ್ದರು.

ಇದನ್ನೂ ಓದಿ: ಕಾಂಗ್ರೆಸ್ ಗೃಹಪ್ರವೇಶಕ್ಕೆ ಅವರೇ ದಿನ ನಿಗದಿಪಡಿಸಲಿ: ಸಚಿವ ಮಂಕಾಳು ವೈದ್ಯ

Last Updated : Sep 5, 2023, 5:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.