ETV Bharat / state

ಉತ್ತರ ಕನ್ನಡದ 439 ಪ್ರದೇಶದಲ್ಲಿ ಭೂಕುಸಿತ ಸಾಧ್ಯತೆ.. ಸರ್ಕಾರಕ್ಕೆ ಭಾರತೀಯ ಭೌಗೋಳಿಕ ಸಮೀಕ್ಷೆ ವರದಿ ಸಲ್ಲಿಕೆ

author img

By

Published : Jul 29, 2023, 11:25 AM IST

Updated : Jul 29, 2023, 1:14 PM IST

Landslide: ಉತ್ತರ ಕನ್ನಡದ 439 ಪ್ರದೇಶಗಳಲ್ಲಿ ಭೂ ಕುಸಿತವಾಗುವ ಸಾಧ್ಯತೆ ಇದೆ ಎಂದು ಸರ್ಕಾರಕ್ಕೆ ಭಾರತೀಯ ಭೌಗೋಳಿಕ ಸಮೀಕ್ಷೆ ವರದಿ ಸಲ್ಲಿಕೆ ಮಾಡಿದೆ.

Landslide
ಭೂಕುಸಿತ

ಉತ್ತರ ಕನ್ನಡದ 439 ಪ್ರದೇಶದಲ್ಲಿ ಭೂಕುಸಿತ ಸಾಧ್ಯತೆ

ಕಾರವಾರ : ಉತ್ತರ ಕನ್ನಡದಲ್ಲಿ ಆರ್ಭಟಿಸುತ್ತಿದ್ದ ಮಳೆ ಕಡಿಮೆಯಾಗಿದ್ದು, ನದಿ ತೀರಗಳಲ್ಲಿ ಪ್ರವಾಹ ಇಳಿಕೆಯಾಗುತ್ತಿರುವ ಕಾರಣ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಆದರೆ, ಈ ನಡುವೆ ಜಿಲ್ಲೆಯಲ್ಲಿ ನಡೆದ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯಲ್ಲಿ ಜಿಲ್ಲೆಯ 439 ಪ್ರದೇಶಗಳಲ್ಲಿ ಭೂ ಕುಸಿತವಾಗುವ ಬಗ್ಗೆ ಮುನ್ನೆಚ್ಚರಿಕಾ ವರದಿಯೊಂದು ಸರ್ಕಾರಕ್ಕೆ ಸಲ್ಲಿಕೆಯಾಗಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.

ಬಹುಪಾಲು ಅರಣ್ಯ ಪ್ರದೇಶವನ್ನೇ ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಆಗುತ್ತದೆ. ಅದರಲ್ಲಿಯೂ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಪ್ರವಾಹ ಸೃಷ್ಟಿಯಾಗುತ್ತಿರುವುದು ಪ್ರತಿ ಮಳೆಗಾಲದ ವೇಳೆ ಜಿಲ್ಲೆಯ ಜನ ಆತಂಕದಲ್ಲಿ ಕಾಲ ಕಳೆಯಬೇಕಾದ ಸ್ಥಿತಿ ಇದೆ. ಇದರ ನಡುವೆ ಇದೀಗ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಜಿಲ್ಲೆಯ 439 ಸ್ಥಳಗಳಲ್ಲಿ ಗುಡ್ಡ ಕುಸಿತವಾಗುವ ಬಗ್ಗೆ ಮುನ್ನೆಚ್ಚರಿಕಾ ಕ್ರಮವಾಗಿ ನೀಡಿದ ವರದಿಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಇದು ಜಿಲ್ಲೆಯ ಜನರ ಹಾಗೂ ಅಧಿಕಾರಿಗಳ ನಿದ್ದೆಗೆಡಿಸುವಂತೆ ಮಾಡಿದೆ.

ಈಗಾಗಲೇ ಭೂಕುಸಿತವಾಗಿರುವ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ, ಅಣಶಿ ಘಟ್ಟ, ಅರಬೈಲ್ ಘಟ್ಟ ಪ್ರದೇಶಗಳಲ್ಲಿ ಮತ್ತೆ ಭೂಕುಸಿತವಾಗುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಇದಲ್ಲದೆ, ಜಲಾಶಯಗಳ ಅಕ್ಕಪಕ್ಕದ ಪ್ರದೇಶಗಳೂ ಸೇರಿದಂತೆ ವಿವಿಧೆಡೆ ಗುಡ್ಡ ಕುಸಿಯುವ ಸಾಧ್ಯತೆ ಇರುವ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ. ಒಂದೊಮ್ಮೆ ಗುಡ್ಡ ಕುಸಿತವಾದಲ್ಲಿ ಸಾಕಷ್ಟು ಹಾನಿ ಸಂಭವಿಸುವ ಸಾಧ್ಯತೆ ಇರುವುದು ಆತಂಕಕ್ಕೆ ಕಾರಣವಾಗಿದೆ.

ಆಯಾ ತಾಲೂಕುಗಳಲ್ಲಿರುವ ಗುಡ್ಡ ಕುಸಿತ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದೆ. ಅಲ್ಲದೆ, ಈ ಪ್ರದೇಶಗಲ್ಲಿ ಮುಂಜಾಗೃತಾ ಕ್ರಮವಹಿಸಲು ತಂಡಗಳನ್ನು ರಚನೆ ಮಾಡಲಾಗಿದೆ. ಜೆಸಿಬಿ ಹಾಗೂ ಕಾರ್ಮಿಕರನ್ನು ಬಳಸಿ ಏನೆಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ತಂಡ ಕ್ರಮವಹಿಸುತ್ತಿದೆ. ಹೊನ್ನಾವರ ಹಾಗೂ ಕುಮಟಾದಲ್ಲಾದ ಗುಡ್ಡ ಕುಸಿತವನ್ನು ತೆರವು ಮಾಡಲಾಗಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಗುಡ್ಡ ಕುಸಿತವಾಗಿರುವ ಪ್ರದೇಶಗಳು ಇಲ್ಲ ಎಂಬುದನ್ನು ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಸಭೆಯಲ್ಲಿ ತಿಳಿಸಿದ್ದಾರೆ. ಆದರೆ, ಈಗಾಗಲೇ ಗುರುತಿಸಿರುವ ಸ್ಥಳಗಳಲ್ಲಿ ಮುಂಜಾಗ್ರತೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Uttara Kannada Rain : ಜೋಯಿಡಾದಲ್ಲಿ ವ್ಯಕ್ತಿಯ ಶವ ಸಾಗಾಟಕ್ಕೆ ಪರದಾಟ; ಕಂಬಳಿ ಜೋಲಿಯಲ್ಲಿ ರೋಗಿಯ ಸಂಕಟ

ಇನ್ನು ಜಿಲ್ಲೆಯಲ್ಲಿ ಒಂದು ವಾರ ಸುರಿದ ಮಳೆಗೆ ಅನೇಕ ಅನಾಹುತಗಳು ಸಂಭವಿಸಿ ಅಪಾರ ಹಾನಿಗೆ ಕಾರಣವಾಗಿದೆ. ಸದ್ಯ ಮಳೆ ಬಿಡುವು ನೀಡಿದ್ದು ಆಗಸ್ಟ್ ಸಮಯದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಒಂದು ವೇಳೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ನೀಡಿರುವ ವರದಿಯಲ್ಲಿ ಸೂಚಿಸಿರುವ ಪ್ರದೇಶಗಳಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ವಹಿಸದಿದ್ದರೆ ಭಾರಿ ಪ್ರಮಾಣದ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾಡಳಿತ ಈ ವರದಿಯನ್ನು ಗಂಭೀರವಾಗಿ ಪರಿಗಣಿಸಬೇಕಿದ್ದು, ಸೂಚಿಸಿರುವ ಪ್ರದೇಶಗಳಲ್ಲಿ ಭೂಕುಸಿತವಾದರೆ ಉಂಟಾಗಬಹುದಾದ ಅನಾಹುತಗಳ ಕುರಿತು ಕೂಡ ಸಾಧ್ಯತಾ ವರದಿ ತಯಾರಿಸಬೇಕು. ಜನ ಜಾನುವಾರುಗಳ ಸ್ಥಳಾಂತರ, ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರಾದ ಮಾಧವ ನಾಯಕ ಆಗ್ರಹಿಸಿದ್ದಾರೆ.

ಉತ್ತರ ಕನ್ನಡದಲ್ಲಿ ಕಳೆದ ಕೆಲ ದಿನಗಳಿಂದ ಅಬ್ಬರಿಸುತ್ತಿದ್ದ ಮಳೆ ಗುರುವಾರ ಸ್ವಲ್ಪ ಕಡಿಮೆಯಾಗಿದೆ. ಘಟ್ಟದ ಮೇಲ್ಭಾಗದ ಸಿದ್ದಾಪುರದಲ್ಲಿ ಮಾತ್ರ 105 ಮಿ. ಮೀ ಮಳೆಯಾಗಿದೆ. ಉಳಿದಂತೆ ಬಹುತೇಕ ತಾಲೂಕುಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಭಾರಿ ಮಳೆಯಿಂದಾಗಿ ತೀವ್ರ ಸಮಸ್ಯೆ ಎದುರಿಸುತ್ತಿದ್ದ ಜನ ಇದೀಗ ಕೊಂಚ ನಿರಾಳರಾಗುವಂತಾಗಿದೆ.

Last Updated : Jul 29, 2023, 1:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.