ಉಡುಪಿ: ಉಡುಪಿ, ಮಣಿಪಾಲ್ ನಗರದಲ್ಲಿ ನೈಟ್ ಕರ್ಫ್ಯೂ ಬೇಡ ಅಂತಾ ಉಡುಪಿ ಶಾಸಕ ರಘಪತಿ ಭಟ್ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಏಪ್ರಿಲ್, ಮೇ ತಿಂಗಳಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ದೈವದ ಕೋಲ, ನಾಗಾರಾಧನೆ, ಯಕ್ಷಗಾನ ನಡೆಯಲಿದೆ ಈ ಹಿನ್ನೆಲೆ ನೈಟ್ ಕರ್ಫ್ಯೂ ಬೇಡ ಎಂದಿದ್ದಾರೆ.
ಕಳೆದ ವರ್ಷ, ಕೋವಿಡ್ ಲಾಕ್ಡೌನ್ನಿಂದ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಯಲಿಲ್ಲ. ಸಾಕಷ್ಟು ಜನ ಸಂಕಷ್ಷಕ್ಕೆ ಒಳಗಾಗಿದ್ದಾರೆ, ಧಾರ್ಮಿಕ ಭಾವನೆಗೆ ದಕ್ಕೆಯಾಗಿದೆ. ದೈವದ ಕೋಲಗಳು ಮುಂಚಿತವಾಗಿ ನಿಗದಿಯಾಗಿರುತ್ತೆ. ನೈಟ್ ಕರ್ಫ್ಯೂ ಜಾರಿ ಆದರೆ, ರಾತ್ರಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ತೊಂದರೆ ಆಗುತ್ತದೆ. ಎಂಐಟಿ ಹೊರತು ಪಡಿಸಿದರೆ ಉಡುಪಿ ಮಣಿಪಾಲ್ನಲ್ಲಿ ಯಾವುದೇ ಆತಂಕವಿಲ್ಲ ಎಂದಿದ್ದಾರೆ.
ಎಂಐಟಿಯಲ್ಲಿ ಕಂಟೇನ್ಮೆಂಟ್ ಝೋನ್ ಮಾಡಿ ಪಾಸಿಟಿವ್ ರೇಟ್ ಕಡಿಮೆ ಆಗಿದೆ. ಜಿಲ್ಲೆಯಲ್ಲಿ ಕೇವಲ 400 ಸಕ್ರೀಯ ಪ್ರಕರಣಗಳಿವೆ. ಕೇವಲ 59 ಮಂದಿ ಆಸ್ಪತ್ರೆಯಲ್ಲಿ ಇದ್ದು, ಯಾರೊಬ್ಬರೂ ಗಂಭೀರ ಸ್ಥಿತಿಯಲ್ಲಿಲ್ಲ. ಡೆತ್ ರೇಟ್ ಕಡಿಮೆ ಇದೆ. ಸರಾಸರಿ ಎರಡೂವರೆ ಸಾವಿರ ಟೆಸ್ಟ್ ಮಾಡುತ್ತಿದ್ದೇವೆ ಕೇವಲ 50 ರಿಂದ 60 ಪಾಸಿಟಿವ್ ಬರುತ್ತಿದೆ. ಹೀಗಾಗಿ ನೈಟ್ ಕರ್ಪ್ಯೂ ಜಾರಿ ಮಾಡದೇ, ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡಿ ಎಂದು ಮನವಿ ಮಾಡಿದ್ದಾರೆ.