ಉಡುಪಿ: ಕೊರೊನಾ ಕಾರಣದಿಂದ ಕಳೆದ ವರ್ಷ ರದ್ದಾಗಿದ್ದ ಸೇನಾ ನೇಮಕಾತಿ ರ್ಯಾಲಿ ಇಂದಿನಿಂದ ಜಿಲ್ಲೆಯ ಅಜ್ಜರಕಾಡುವಿನಲ್ಲಿ ಆರಂಭವಾಗಿದ್ದು, ಸಾವಿರಾರು ಅಭ್ಯರ್ಥಿಗಳು ಭಾಗಿಯಾಗುತ್ತಿದ್ದಾರೆ.
ನಗರದ ಅಜ್ಜರಕಾಡುವಿನ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಸೇನೆಗೆ ಸೇರಲು ತವಕಿಸಿದ ಅಭ್ಯರ್ಥಿಗಳ ದಂಡೇ ನೆರೆದಿದೆ. 10 ದಿನಗಳ ಕಾಲ ಭೂ ಸೇನೆಯು ಅಜ್ಜರಕಾಡುವಿನಲ್ಲಿ ಬೀಡುಬಿಟ್ಟಿದ್ದು, ಸೇನಾ ರ್ಯಾಲಿಯನ್ನ ನಡೆಸುತ್ತಿದೆ.
ಮೊದಲ ದಿನ ಉಡುಪಿ, ದ.ಕ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಅಭ್ಯರ್ಥಿಗಳು ಈ ಸೇನಾ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಂಡರು. ಸೇನಾಧಿಕಾರಿಗಳು ಅಭ್ಯರ್ಥಿಗಳ ದೈಹಿಕ ಕ್ಷಮತೆಯನ್ನ ಪರೀಕ್ಷೆಗೆ ಒಳಪಡಿಸಿದ್ದು, ಓಟ, ಉದ್ದ ಜಿಗಿತ ಸೇರಿದಂತೆ ಕಠಿಣ ಟಾಸ್ಕ್ ಗಳನ್ನು ಪಾಸ್ ಮಾಡಿದ ಅಭ್ಯರ್ಥಿಗಳಿಗೆ ಎತ್ತರ, ಎದೆ ಸುತ್ತಳತೆಯ ಪರೀಕ್ಷೆಯೂ ನಡೆಯುತ್ತಿದೆ. ಇದರಲ್ಲಿ ಪಾಸಾದ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯ ಮೂಲಕ ಸೇನೆಗೆ ನೇಮಕಾತಿಯಾಗಲಿದ್ದಾರೆ.
ಸೇನಾ ನೇಮಕಾತಿ ರ್ಯಾಲಿಗೆ ಬೇಕಾದ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿದ್ದು, ಕೋವಿಡ್ ಟೆಸ್ಟ್ ರಿಪೋಟ್ ನೀಡುವ ವ್ಯವಸ್ಥೆ ಕೂಡಾ ಮಾಡಿದೆ. ಇದಕ್ಕಾಗಿ ಒಬ್ಬರು ವೈದ್ಯರನ್ನೂ ನೇಮಿಸಲಾಗಿದೆ. ಇನ್ನು ದೈಹಿಕ ಪರೀಕ್ಷೆಗೆ ಬೇಕಾಗುವ ಎಲ್ಲಾ ಸಲಕರಣೆಗಳು ಮತ್ತು ವ್ಯವಸ್ಥೆಗಳು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದ್ದು ಸೇನಾಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರತಿ ದಿನ ರ್ಯಾಲಿಗೆ ಬರುವ ಸಾವಿರಾರು ಅಭ್ಯರ್ಥಿಗಳಿಗೆ ಉಚಿತ ಉಪಹಾರದ ವ್ಯವಸ್ಥೆಯನ್ನು ವಿದ್ಯುತ್ ಗುತ್ತಿಗೆದಾರರ ಸಂಘ ವಹಿಸಿಕೊಂಡರೆ, ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ಶ್ರೀಕೃಷ್ಣ ಮಠ ವಹಿಸಿಕೊಂಡಿದೆ. 10 ದಿನಗಳ ಸೇನಾ ನೇಮಕಾತಿ ರ್ಯಾಲಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಚಾಲನೆ ನೀಡಿ ಮಾತನಾಡಿದ್ದು, ಉಡುಪಿಯಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಯುತ್ತಿರುವುದು ತುಂಬಾ ಸಂತಸ ತಂದಿದೆ. ಇದಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿಕೊಡಲಾಗಿದೆ. ಬರುವ ಎಲ್ಲಾ ಅಭ್ಯರ್ಥಿಗಳಿಗೆ ಉಪಹಾರ ಮತ್ತು ಊಟದ ಉಚಿತ ವ್ಯವಸ್ಥೆ ಮಾಡಲಾಗಿದೆ ಎಂದರು.
ಓದಿ: ಬೆಂಗಳೂರು, ಗಡಿ ಜಿಲ್ಲೆ ಕಲಬುರಗಿ, ಬೀದರ್ನಲ್ಲಿ ಹೆಚ್ಚು ಗಮನ ಹರಿಸಿ: ಸಿಎಂಗೆ ಪ್ರಧಾನಿ ಮೋದಿ ಸೂಚನೆ
ಕೋವಿಡ್ ಟೆಸ್ಟ್ ಸರ್ಟಿಫಿಕೇಟ್ ಇದ್ದವರು ಮಾತ್ರ ಈ ರ್ಯಾಲಿಗೆ ಭಾಗವಹಿಸಲು ಅವಕಾಶ ಇದ್ದು, ಸ್ಥಳದಲ್ಲೇ ಟೆಸ್ಟ್ ಮಾಡಿಸಿ ಸರ್ಟಿಫಿಕೇಟ್ ನೀಡುವ ವ್ಯವಸ್ಥೆ ಮಾಡಿದ್ದೇವೆ. ಸೇನೆಗೆ ಸೇರುವ ಅಭ್ಯರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.