ETV Bharat / state

ತುಮಕೂರು: ಎಮ್ಮೆ ತೊಳೆಯಲು ಹೋಗಿ ಇಬ್ಬರು ಬಾಲಕರು ನೀರುಪಾಲು

author img

By ETV Bharat Karnataka Team

Published : Oct 23, 2023, 7:19 PM IST

ಎಮ್ಮೆ ತೊಳೆಯಲು ಹೋಗಿ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ದೇವರಹಟ್ಟಿಯಲ್ಲಿ ನಡೆದಿದೆ.

two-boys-who-went-to-wash-buffalo-drewn-in-water-in-tumakuru
ತುಮಕೂರು: ಎಮ್ಮೆ ತೊಳೆಯಲು ಹೋಗಿ ಇಬ್ಬರು ಬಾಲಕರು ನೀರುಪಾಲು

ತುಮಕೂರು: ಎಮ್ಮೆ ತೊಳೆಯಲು ತೆರಳಿದ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ತಾಲೂಕಿನ ಅರೆಯೂರು ಸಮೀಪದ ದೇವರಹಟ್ಟಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಮನೋಜ್​ (12) ಹಾಗೂ ಚಿರಂತ್ (14) ಮೃತರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ಹೊರತೆಗೆದು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ದಸರಾ ರಜೆ ಹಿನ್ನೆಲೆಯಲ್ಲಿ ಬಾಲಕರು ತಮ್ಮ ಅಜ್ಜಿ ಮನೆಗೆ ಬಂದಿದ್ದರು ಎಂದು ತಿಳಿದುಬಂದಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಂಪತಿ ನೀರುಪಾಲು: ಇತ್ತೀಚಿಗೆ, ಬಟ್ಟೆ ಒಗೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಪತ್ನಿಯನ್ನು ರಕ್ಷಿಸಲು ಹೋದ ಪತಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹರತಲೆ ಗ್ರಾಮದ ಬೀಚನಹಳ್ಳಿ ಬಲದಂಡೆ ನಾಲೆಯಲ್ಲಿ ನಡೆದಿತ್ತು. ತಾಲೂಕಿನ ಹುಸ್ಕೂರು ಗ್ರಾಮದ ಶಂಕರ ಮತ್ತು ಪತ್ನಿ ಬೇಬಿ ಮೃತರು. ಹುಸ್ಕೂರು ಗ್ರಾಮದಿಂದ ಹರತಲೆ ಬಳಿಯಿರುವ ಬೀಚನಹಳ್ಳಿ ಬಲದಂಡೆ ನಾಲೆಗೆ ಬಟ್ಟೆ ಒಗೆಯಲೆಂದು ಬೇಬಿ ಬಂದಿದ್ದರು. ನಂತರ ಪತ್ನಿಯನ್ನು ಕರೆದುಕೊಂಡು ಬರುವುದಾಗಿ ಶಂಕರ ನಾಲೆಯ ಬಳಿ ಬಂದಿದ್ದರು. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬೇಬಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವೇಳೆ ಪತ್ನಿಯನ್ನು ರಕ್ಷಿಸಲೆಂದು ಶಂಕರ ಸಹ ನಾಲೆಗಿಳಿದಿದ್ದರು. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಇಬ್ಬರೂ ಮೃತಪಟ್ಟಿದ್ದರು.

ಗೋ ಕಟ್ಟೆಗೆ ಬಿದ್ದು ನಾಲ್ವರು ಸಾವು: ಸಿದ್ದಗಂಗಾ ಮಠದ ಹಿಂಭಾಗದಲ್ಲಿರುವ ಗೋ ಕಟ್ಟೆಯಲ್ಲಿ (ಕೃಷಿ ಹೊಂಡದಂತಿರುವ ಕೆರೆ) ಬಿದ್ದು ನಾಲ್ವರು ಮೃತಪಟ್ಟಿರುವ ಘಟನೆ ಆ.13 ನಡೆದಿತ್ತು. ಬಾಗಲಗುಂಟೆಯ ಲಕ್ಷ್ಮೀ (33) ಹಾಗೂ ಯಾದಗಿರಿ ಜಿಲ್ಲೆಯ ಅಫಜಲಪುರದ ಮಹದೇವಪ್ಪ (44) ಚಿಕ್ಕಮಗಳೂರಿನ ಶಂಕರ್ (11), ರಾಮನಗರದ ಹರ್ಷಿತ್ (11) ಮೃತಪಟ್ಟಿದ್ದರು. ರಂಜಿತ್‌ನ​ ತಾಯಿ ಲಕ್ಷ್ಮೀ ಮಗನನ್ನು ಭೇಟಿಯಾಗಲು ಮಠಕ್ಕೆ ಬಂದಿದ್ದರು. ಈ ವೇಳೆ ಅವರು ಊಟಕ್ಕೆ ಮಠದ ಹಿಂಭಾಗದಲ್ಲಿರುವ ಗೋ ಕಟ್ಟೆಗೆ ತೆರಳಿದ್ದರು. ಬಳಿಕ ರಂಜಿತ್​ ಗೋ ಕಟ್ಟೆಗೆ ಈಜಲು ತೆರಳಿ, ಈಜು ಸಾಧ್ಯವಾಗದೆ ಮುಳುಗಿದ್ದರು.

ಇದನ್ನು ನೋಡಿದ ತಾಯಿ ನೀರಿಗೆ ಹಾರಿ ಆಕೆಯೂ ನೀರು ಪಾಲಾಗಿದ್ದರು. ಇಬ್ಬರನ್ನು ಕಾಪಾಡಲು ಅಲ್ಲಿಯೇ ಇದ್ದ ಆತನ ಇಬ್ಬರು ಸ್ನೇಹಿತರಾದ ಶಂಕರ್ ಮತ್ತು ಹರ್ಷಿತ್​ ಗೋ ಕಟ್ಟೆಗೆ ಇಳಿದಿದ್ದರು, ಘಟನೆಯಲ್ಲಿ ಅವರೂ ಮೃತಟ್ಟಿದ್ದರು. ಮಹಾದೇವ ಎಂಬವರು ನೀರಿಗೆ ಬಿದ್ದವರನ್ನು ರಕ್ಷಿಸಲು ಧಾವಿಸಿದ್ದು, ಈಜು ಬಾರದೆ ಮುಳುಗಿ ಸಾವನ್ನಪ್ಪಿದ್ದರು. ಘಟನೆಯಲ್ಲಿ ರಂಜಿತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ದರ್ಗಾಕ್ಕೆ ಭೇಟಿ ನೀಡಲು ಬಂದು ಕೃಷ್ಣಾ ನದಿ ಪಾಲಾದ ಯುವಕ: ಮುಂದುವರಿದ ಶೋಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.