ETV Bharat / state

ಮೂಢನಂಬಿಕೆಗೆ ಕಟ್ಟುಬಿದ್ದು ವಿಚ್ಛೇದನಕ್ಕೆ ಮುಂದಾದ ದಂಪತಿಯನ್ನು ಒಂದು ಮಾಡಿದ ನ್ಯಾಯಾಧೀಶರು

author img

By

Published : Feb 1, 2023, 8:51 PM IST

ಮೂಢನಂಬಿಕೆಯಿಂದ ತಲೆ ಹಾಳು ಮಾಡಿಕೊಂಡು ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಪತಿಯನ್ನು ನ್ಯಾಯಾಧೀಶರು ಮನವೊಲಿಸಿ ದಂಪತಿಯನ್ನು ಒಂದು ಮಾಡಿಸಿದ್ದಾರೆ.

ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿ
ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿ

ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿಯನ್ನು ಒಂದಾಗಿಸಿದ ನ್ಯಾಯಾಧೀಶ

ತುಮಕೂರು : ಮೂಢನಂಬಿಕೆಗೆ ಕಟ್ಟುಬಿದ್ದು ಹೆಂಡತಿಗೆ ವಿಚ್ಛೇದನ ನೀಡಲು ಮುಂದಾಗಿದ್ದ ವ್ಯಕ್ತಿಯೊಬ್ಬ ನ್ಯಾಯಾಧೀಶರ ಬುದ್ದಿಮಾತು ಕೇಳಿ ಪತ್ನಿಯೊಂದಿಗೆ ಬಾಳಲು ಒಪ್ಪಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನಡೆದಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ಮಂಜುನಾಥ್ ಹಾಗೂ ಪಾರ್ವತಮ್ಮ ದಂಪತಿ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮೂಡನಂಬಿಕೆಯಿಂದ ಪತ್ನಿಗೆ ವಿಚ್ಚೇದನ ನೀಡಲು ಮಂಜುನಾಥ್ ಕೋರ್ಟ್​ ಮೆಟ್ಟಿಲೇರಿದ್ದರು. ಚಿಕ್ಕನಾಯಕನಹಳ್ಳಿ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಟೇಶಪ್ಪ ಅವರ ಬುದ್ದಿಮಾತು ಕೇಳಿ, ನ್ಯಾಯಾಲಯದಲ್ಲೇ ಹಾರ ಬದಲಾಯಿಸಿ ಇಬ್ಬರೂ ಒಟ್ಟಿಗೆ ಬಾಳಲು ನಿರ್ಧರಿಸಿದ್ದಾರೆ.

ಹಂದನಕೆರೆ ಗ್ರಾಮದಲ್ಲಿರುವ ದೇಗುಲವೊಂದರಲ್ಲಿ ವ್ಯಕ್ತಿಯೊಬ್ಬ ನಿನ್ನ ಪತ್ನಿ ಮೈಮೇಲೆ ದೇವರು ಬರುತ್ತದೆ ಎಂದು ಹೇಳಿದ್ದ. ಇದನ್ನು ನಂಬಿದ ಮಂಜುನಾಥ್​ ತನ್ನ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ವಿಚ್ಛೇದನ ಯಾಕೆ ಕೊಡುತ್ತಿದ್ದೀಯಾ? ಎಂದು ಮಂಜುನಾಥ್‌ನನ್ನು ಕೇಳಿದ್ದು ಅವರು ನೀಡಿದ ಉತ್ತರಕ್ಕೆ ನ್ಯಾಯಾಧೀಶರು ಅಚ್ಚರಿಗೊಂಡಿದ್ದರು. ನಂತರ, ಅದನ್ನು ನಂಬದಂತೆ ತಿಳಿ ಹೇಳಿ ವೈವಾಹಿಕ ಜೀವನವನ್ನು ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಆಸ್ತಿಗಾಗಿ ಅಜ್ಜಿಯನ್ನು ಹೊರದಬ್ಬಿದ ಮೊಮ್ಮಗ: ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ 3ನೇ ವಾರ್ಡ್ ನಲ್ಲಿ 80 ವರ್ಷದ ವೃದ್ಧೆಯ ಮನೆಯನ್ನು ಆಕ್ರಮಿಸಿಕೊಂಡಿದ್ದ ಮೊಮ್ಮಗನಿಂದ ಕಾನೂನು ಪ್ರಕಾರವೇ ವಾಪಸ್ ಪಡೆದು ವೃದ್ಧೆಗೆ ತಾಲೂಕು ಉಪವಿಭಾಗಾಧಿಕಾರಿ ಹಸ್ತಾಂತರ ಮಾಡಿದ್ದಾರೆ. 8 ತಿಂಗಳ ಹಿಂದೆ ಕಾವಲಮ್ಮನನ್ನು ಮನೆಯಿಂದ ಮೊಮ್ಮಗ ಮಾರುತಿ ಹೊರದಬ್ಬಿದ್ದನು. 8 ತಿಂಗಳ ಹಿಂದೆ ಕ್ಯಾನ್ಸರ್​ನಿಂದ ಕಾವಲಮ್ಮ ಮಗಳಾದ ಲಕ್ಷ್ಮಮ್ಮ ಮೃತಪಟ್ಟಿದ್ದರು. ಲಕ್ಷ್ಮಮ್ಮ ಮೃತಪಟ್ಟ ಬಳಿಕ ಮನೆಯನ್ನು ಮೊಮ್ಮಗ ಮಾರುತಿ ಆಕ್ರಮಿಸಿಕೊಂಡಿದ್ದನು. ಬಳಿಕ ಮನೆಯಲ್ಲಿದ್ದ ಅಜ್ಜಿಯನ್ನು ಹೊರದಬ್ಬಿ ಮನೆ ಮಾರಾಟ ಮಾಡಲು ಹೊಂಚುಹಾಕಿದ್ದ. ಬೀದಿಗೆ ಬಿದ್ದ ಬಳಿಕ ಸಂಬಂಧಿಕರ ಮನೆಯಲ್ಲಿ ವೃದ್ಧೆ ಕಾವಲಮ್ಮ ಆಶ್ರಯ ಪಡೆದಿದ್ದರು. ಇದರಿಂದ ಮಾರುತಿ ವಿರುದ್ಧ ಹಿರಿಯ ನಾಗರೀಕರ ಹಕ್ಕು ಕಾಯ್ದೆ ಅಡಿ ಸಂಬಂಧಿಕರು ದೂರು ನೀಡಿದ್ದರು.

ಪ್ರಕರಣದ ಬಗ್ಗೆ ಕೂಲಂಕಶವಾಗಿ ವಿಚಾರಣೆ ನಡೆಸಿದ್ದ ಮಧುಗಿರಿ ಎಸಿ ರಿಶಿ ಆನಂದ್ ಅವರು ಮೊಮ್ಮಗನಿಂದ ವೃದ್ಧೆಗೆ ಮನೆ ಬಿಡಿಸಿಕೊಂಡುವಂತೆ ಆದೇಶ ನೀಡಿದ್ದಾರೆ. ಎಸಿ ಆದೇಶದಂತೆ ಮಾರುತಿಯನ್ನು ಮನೆಯಿಂದ ಅಧಿಕಾರಿಗಳು ಖಾಲಿ ಮಾಡಿಸಿದರು. ಸದ್ಯ ತಹಶೀಲ್ದಾರ್, ಪೊಲೀಸರ ಸಮಕ್ಷಮದಲ್ಲಿ ವೃದ್ಧೆ ಕಾವಲಮ್ಮ ತನ್ನ ಮನೆ ಸೇರಿದ್ದಾರೆ.

ಇದನ್ನೂ ಓದಿ: ವಿಚ್ಛೇದಿತ ಪತಿ ಹತ್ಯೆ ಮಾಡಲು ಮಾಜಿ ಪತ್ನಿ ಸುಪಾರಿ ಆರೋಪ: ದೂರು ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.