ಸರ್ಕಾರವು ರಂಗ ಎಂಬುದನ್ನು ತೆಗೆದು ಮಂಗ ಎಂಬಂತೆ ಮಾಡಿದೆ: ಮೀಸಲಾತಿ ಘೋಷಣೆ ವಿರುದ್ಧ ಹೆಚ್​ಡಿಕೆ ಕಿಡಿ

author img

By

Published : Dec 30, 2022, 10:54 AM IST

kumaraswamy

ಪಂಚಮಸಾಲಿ ಸಮುದಾಯದ ಮೀಸಲಾತಿ ಘೋಷಣೆ ಕುರಿತು ಹೆಚ್​ಡಿಕೆ ಕಿಡಿ - ಪಂಚಮಸಾಲಿ ಜನಾಂಗಕ್ಕೆ ಮೂಗಿಗೆ ತುಪ್ಪ ಸವರುವ ಬದಲು ಹಣೆಗೆ ಸವರಿದ ಸರ್ಕಾರ - ಸರ್ಕಾರದ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ

ಸರ್ಕಾರದ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ

ತುಮಕೂರು: ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಲಿಂಗಾಯತ ಮತ್ತು ಒಕ್ಕಲಿಗರಿಗಾಗಿ ಪ್ರತ್ಯೇಕ ಪ್ರವರ್ಗ ರಚಿಸಲು ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ನೇತೃತ್ವದ ಸರ್ಕಾರ ನಿರ್ಧಾರ ಮಾಡಿರೋದು ನೋಡಿದ್ರೆ ರಂಗ ಎಂಬ ಪದವನ್ನು ತೆಗೆದು ಮಂಗ ಎಂದು ಮಾಡಿದಂತಾಗಿದೆ ಅಂತಾ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದರು.

ತುಮಕೂರು ತಾಲೂಕಿನ ಉರ್ಡಿಗೆರೆ ಗ್ರಾಮದಲ್ಲಿ ಮಾತನಾಡಿದ ಅವರು, ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಜನಾಂಗಕ್ಕೆ ಒಂದು ರೀತಿ ಮೂಗಿಗೆ ತುಪ್ಪ ಸವರುವ ಬದಲು ಹಣೆಗೆ ಸವರಿ ಅದರ ವಾಸನೆಯನ್ನು ಕೂಡ ಪಡೆದುಕೊಳ್ಳದಂತೆ ಸರ್ಕಾರ ಮಾಡಿದೆ. ಈ ರೀತಿ ಮೀಸಲಾತಿ ವರ್ಗೀಕರಣ ಮಾಡಲು ಸಾವಿರಾರೂ ಕೋಟಿ ರೂ. ಖರ್ಚು ಮಾಡಿ ಆಯೋಗವನ್ನು ರಚಿಸಿರುವುದು ದೊಡ್ಡ ಸಾಧನೆ ಎಂಬಂತೆ ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ. ಇಂತಹದಕ್ಕೆಲ್ಲಾ ಜನ ಮರುಳಾಗುವುದಿಲ್ಲ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ: ಎರಡು ಪ್ರಬಲ ಸಮುದಾಯಗಳಾದ ಲಿಂಗಾಯತ ಹಾಗೂ ಒಕ್ಕಲಿಗರಿಗೆ ಪ್ರತ್ಯೇಕ ಪ್ರವರ್ಗ ರಚಿಸಿ ಮೀಸಲಾತಿ ನೀಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. 3ಬಿ ಪ್ರವರ್ಗದಲ್ಲಿದ್ದ ಲಿಂಗಾಯತರಿಗೆ 2ಡಿ ಪ್ರವರ್ಗ ಹಾಗೂ 3ಎ ಪ್ರವರ್ಗದಲ್ಲಿದ್ದ ಒಕ್ಕಲಿಗರಿಗಾಗಿ 2ಸಿ ಪ್ರತ್ಯೇಕ ಪ್ರವರ್ಗ ರಚಿಸಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಆದರೆ, ಇನ್ನೂ ಮೀಸಲಾತಿ ಪ್ರಮಾಣ ಘೋಷಿಸಿಲ್ಲ. ಮುಂದಿನ ದಿನಗಳಲ್ಲಿ ಮೀಸಲಾತಿ ಪ್ರಮಾಣ ಘೋಷಿಸಲು ತೀರ್ಮಾನಿಸಲಾಗಿದೆ. ಈ ಎರಡೂ ಸಮುದಾಯಗಳಿಗೆ EWSನ ಶೇ 10ರಷ್ಟು ಮೀಸಲಾತಿಯಿಂದ ಎಷ್ಟು ಉಳಿಯುತ್ತೋ ಅದನ್ನು 2D ಮತ್ತು 2Cಗೆ ಶಿಫ್ಟ್ ಮಾಡುವ ಚಿಂತನೆ ಇದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಂಚಮಸಾಲಿ ಸಮಾಜದ ಮೀಸಲಾತಿ ಸ್ಪಷ್ಟವಾಗಿಲ್ಲ: ಜಯಮೃತ್ಯುಂಜಯ ಶ್ರೀ

ಮೂಲಗಳ ಪ್ರಕಾರ, ಲಿಂಗಾಯತರಿಗಾಗಿ 2D ಪ್ರವರ್ಗದಲ್ಲಿ ಶೇ7ರಷ್ಟು ಮೀಸಲಾತಿ ಹಾಗೂ ಒಕ್ಕಲಿಗರಿಗಾಗಿ 2C ಪ್ರವರ್ಗದಲ್ಲಿ ಶೇ 6ರಷ್ಟು ಮೀಸಲಾತಿ ಕಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಂಚಮಸಾಲಿ ಸಮುದಾಯದ ಪ್ರತಿಭಟನೆ: ಕಳೆದ ಒಂದು ವರ್ಷದಿಂದ ಬಸವ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯದಿಂದ ಪ್ರಬಲ ಪ್ರತಿಭಟನೆ ನಡೆಯುತ್ತಿತ್ತು. ಕಳೆದ ವಾರ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಶ್ರೀಗಳು ನಿರ್ಧರಿಸಿದ್ದರು. ಆದರೆ, ಸಿಎಂ ಪಂಚಮಸಾಲಿ ಶ್ರೀಗಳು ಮತ್ತು ಸಮಾಜದ ಮುಖಂಡರ ಜತೆ ಚರ್ಚಿಸಿ, ಡಿಸೆಂಬರ್​ 29ಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದರು.

ಆ ಬಳಿಕ ಶ್ರೀಗಳು ಪ್ರತಿಭಟನೆ ಕೈಬಿಟ್ಟಿದ್ದರು. ಆದರೆ, ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಇನ್ನೊಂದೆಡೆ, ಒಕ್ಕಲಿಗರು ತಮ್ಮ ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿದ್ದರು. ಇದೀಗ ಸರ್ಕಾರವು ಎರಡು ಪ್ರಬಲ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗದಂತೆ ಪ್ರತ್ಯೇಕ ಪ್ರವರ್ಗ ರಚಿಸುವ ತೀರ್ಮಾನ ಮಾಡಿದೆ. ಜೊತೆಗೆ 2A ಪ್ರವರ್ಗದಲ್ಲಿ ಯಾವುದೇ ಬದಲಾವಣೆ ಆಗದಂತೆ ಜಾಣೆ ನಡೆ ಅನುಸರಿಸಿದೆ.‌

ಇದನ್ನೂ ಓದಿ: ಲಿಂಗಾಯತ, ಒಕ್ಕಲಿಗರಿಗೆ ಸಿಹಿಸುದ್ದಿ: ಎರಡು ಪ್ರತ್ಯೇಕ ಪ್ರವರ್ಗ ರಚನೆಗೆ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.