ETV Bharat / state

ಕೊನೆಗೂ ಗ್ರಾಮಕ್ಕೆ ಬಂತು ಸರ್ಕಾರಿ ಬಸ್: ಪೂಜೆ ಸಲ್ಲಿಸಿ ಸ್ವಾಗತಿಸಿದ ಗ್ರಾಮಸ್ಥರು

author img

By ETV Bharat Karnataka Team

Published : Jan 5, 2024, 1:12 PM IST

Updated : Jan 5, 2024, 4:03 PM IST

ಮೈಲುಗಟ್ಟಲೆ ಶಾಲೆ ಕಾಲೇಜುಗಳಿಗೆ ನಡೆದುಕೊಂಡೇ ಹೋಗುತ್ತಿದ್ದ ವಿದ್ಯಾರ್ಥಿಗಳ ಮೊಗದಲ್ಲಿ ಸರ್ಕಾರಿ ಬಸ್​ ಸೌಲಭ್ಯವು ಸಂತಸ ಮೂಡಿಸಿದೆ.

Govt bus to Navilu Kurike village for the first time after independence
ಕೊನೆಗೂ ಗ್ರಾಮಕ್ಕೆ ಬಂತು ಸರ್ಕಾರಿ ಬಸ್

ಕೊನೆಗೂ ಗ್ರಾಮಕ್ಕೆ ಬಂತು ಸರ್ಕಾರಿ ಬಸ್

ತುಮಕೂರು: ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸರ್ಕಾರಿ ಬಸ್ ಸಂಪರ್ಕವೇ ಕಾಣದ ಕೊರಟಗೆರೆ ತಾಲೂಕಿನ ನವಿಲು ಕುರಿಕೆ ಗ್ರಾಮಕ್ಕೆ ಬಸ್ ಬಂದಿದ್ದು, ಗ್ರಾಮಸ್ಥರು ಸಂಭ್ರಮದಿಂದ ಬಸ್​ಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಸ್ವಕ್ಷೇತ್ರ ಕೊರಟಗೆರೆ ತಾಲೂಕಿನ ಈ ಹಳ್ಳಿಯ ಜನರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು.

ಬಸ್ ಸಂಪರ್ಕ ಇಲ್ಲದೇ ನಿತ್ಯ ಪರದಾಡುತ್ತಿದ್ದ ಗ್ರಾಮಸ್ಥರು, ವಿದ್ಯಾರ್ಥಿಗಳು ಇತ್ತೀಚೆಗೆ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಕಾರ್ಯಕ್ರಮದಲ್ಲಿ ಬಸ್​ಗಾಗಿ ಮನವಿ ಸಲ್ಲಿಸಿದ್ದರು. ಈ ವೇಳೆ ಗ್ರಾಮಕ್ಕೆ ಬಸ್ ಸಂಪರ್ಕ ಕಲ್ಪಿಸುವಂತೆ ಅಂದಿನ ತಹಶೀಲ್ದಾರ್ ನಹಿದ ಜಂ. ಜಂ. ಅವರಿಗೆ ಗೃಹ ಸಚಿವರು ನಿರ್ದೇಶನ ನೀಡಿದ್ದರು. ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದ ವಿದ್ಯಾರ್ಥಿಗಳು ಇದೀಗ ಫುಲ್​ ಖುಷ್​ ಆಗಿದ್ದಾರೆ.

ಪತ್ರಿದಿನ ತುಮಕೂರು, ಕೊರಟಗೆರೆಯತ್ತ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಮೈಲುಗಟ್ಟಲೆ ನಡೆದುಕೊಂಡೇ ಹೋಗುತ್ತಿದ್ದರು. ಈಗ ಸರ್ಕಾರಿ ಬಸ್​ನಲ್ಲಿ ಪ್ರಯಾಣ ಮಾಡುವ ಸೌಲಭ್ಯ ದೊರೆತಿದೆ. ಬಸ್ ಕಂಡು ಸಂತಸಪಟ್ಟ ನವಿಲುಕುರಿಕೆ, ದಮಗಲಯ್ಯನ ಪಾಳ್ಯ ಗ್ರಾಮಸ್ಥರು, ಸರ್ಕಾರಿ ಬಸ್​ಗೆ ಬಾಳೆ ಕಂದು, ಹೂ, ಬಲೂನು, ಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಇದನ್ನೂ ಓದಿ: ದಾವಣಗೆರೆ: ಹರನಹಳ್ಳಿ ಕೆಂಗಾಪುರ ಗ್ರಾಮಕ್ಕೆ ಕೊನೆಗೂ ಬಂದ ಬಸ್​.. ಪೂಜೆ ಮಾಡಿ ಗ್ರಾಮಸ್ಥರ ಹರ್ಷ

Last Updated :Jan 5, 2024, 4:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.