ನನ್ನನ್ನು ಮನೆಯಲ್ಲೇ ಕೂರಿಸಬೇಕು, ನನ್ನನ್ನು ಮುಗಿಸಬೇಕೆಂದು ಎಲ್ಲರೂ ಪ್ರಯತ್ನಪಟ್ಟರು : ಜನಾರ್ದನ ರೆಡ್ಡಿ

author img

By

Published : Feb 26, 2023, 7:38 PM IST

formner-minister-janardhana-reddy-statement

ತುಮಕೂರಿನಲ್ಲಿ ಕೆಆರ್​​ಪಿಪಿ ಸಮಾವೇಶ - ನನ್ನನ್ನು ಮುಗಿಸಲು ಎಲ್ಲರೂ ಪ್ರಯತ್ನ ಪಟ್ಟರು ಎಂದ ಜನಾರ್ದನ ರೆಡ್ಡಿ - ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ

ನನ್ನನ್ನು ಮನೆಯಲ್ಲೇ ಕೂರಿಸಬೇಕು, ನನ್ನನ್ನು ಮುಗಿಸಬೇಕೆಂದು ಎಲ್ಲರೂ ಪ್ರಯತ್ನಪಟ್ಟರು : ಜನಾರ್ದನ ರೆಡ್ಡಿ

ತುಮಕೂರು : ನನ್ನನ್ನು ಮನೆಯಲ್ಲೇ ಕೂರಿಸಬೇಕು, ಇವನು ಹೊರಗಡೆ ಎಂದೂ‌ ಬರಬಾರದು. ಬಂದರೆ ಇವನು ಖಂಡಿತವಾಗಿಯೂ ರಾಜ್ಯ ಆಳುತ್ತಾನೆ. ಇವನನ್ನು ಹೇಗಾದರೂ ಮುಗಿಸಬೇಕು ಎಂದು ಎಲ್ಲರೂ ಪ್ರಯತ್ನಪಟ್ಟರು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಪಾವಗಡ ಪಟ್ಟಣದ ಗುರುಭವನದ ಮೈದಾನದಲ್ಲಿ ನಡೆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್​​ಪಿಪಿ) ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆದರೆ ಭಗವಂತನ ಇಚ್ಛೆ ಬೇರೆ ಇತ್ತು. ಒಬ್ಬ ಮನುಷ್ಯನ ಮುಗಿಸಬೇಕು ಎಂದರೆ, ಬೆಳೆಸಬೇಕು ಎಂದರೆ ಆ ಪರಮಾತ್ಮನೆ ಬರಬೇಕು. ಹಾಗಾಗಿ ಇವತ್ತು 12 ವರ್ಷಗಳ ನಂತರ ನಾನು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಜನರ ಪ್ರೀತಿ, ಅಭಿಮಾನ, ಭಗವಂತನ ಆಶೀರ್ವಾದದಿಂದ ಮತ್ತೇ ನಿಮ್ಮ ಮುಂದೆ ನಿಂತಿದ್ದೇನೆ ಎಂದು ಹೇಳಿದರು.

31 ಕ್ಷೇತ್ರದಲ್ಲಿ ಪಕ್ಷ ಸಂಘಟನೆ : ಇಡೀ ಕರ್ನಾಟಕದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ, ನಮ್ಮ ಪಕ್ಷ ದಿನೆ ದಿನೆ ಬಲವರ್ಧನೆ ಆಗುತ್ತಿದೆ. ಈಗಾಗಲೇ 31 ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಆಗಿದ್ದು ಪಕ್ಷದ ಎಲ್ಲಾ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿವೆ. ಎಲ್ಲೇ ಹೋದರೂ ನಂಬಿಕೆ ಮತ್ತು ವಿಶ್ವಾಸದಿಂದ ಜನ ನಮ್ಮನ್ನು ಸ್ವಾಗತ ಮಾಡುತ್ತಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡ ಕ್ಷೇತ್ರದ ನಾಗೇಂದ್ರ ಕುಮಾರ್ ಅವರು ಕಳೆದ 60 ದಿನಗಳಿಂದಲೂ ನನ್ನ ಸಂಪರ್ಕದಲ್ಲಿದ್ದಾರೆ ಎಂದರು.

ರಾಜ್ಯದ ಜನ ಬದಲಾವಣೆ ಬಯಸುತ್ತಿದ್ದಾರೆ : ಇನ್ನು, ಈ‌ ಕ್ಷೇತ್ರದಲ್ಲಿ ಒಂದು ಸರ್ವೆ ಮಾಡಿಸಿದ್ದಾರೆ. ನನ್ನ ಪಕ್ಷ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಆಗುತ್ತದೆ ಎಂಬುದು ಜನರ ಭಾವನೆಯಾಗಿದೆ. ಹೀಗಾಗಿ ಈ ಕ್ಷೇತ್ರದ ಅಭ್ಯರ್ಥಿ ಆಗಿ ನಾಗೇಂದ್ರ ಕುಮಾರ್ ಅವರನ್ನು ಘೋಷಣೆ ಮಾಡಿದ್ದೇವೆ. ಈಗಾಗಲೇ ಎಲ್ಲಾ ಕಡೆಯಿಂದ ಪಕ್ಷಕ್ಕೆ ಜನರು ಬರುತ್ತಿದ್ದಾರೆ ಎಂದರು. ಅದೇ ರೀತಿ ಮಧುಗಿರಿ, ಪಾವಗಡದಲ್ಲಿ ನಮ್ಮ ಪಕ್ಷದ ಕಡೆ ಅತಿ ಹೆಚ್ಚು ಜನರು ಆಸಕ್ತಿ ತೋರುತ್ತಿದ್ದಾರೆ. ನಾನು‌ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಜನರ ಬೆಂಬಲ ವ್ಯಕ್ತವಾಗುತ್ತಿದೆ. ಸುಡುವ ಬಿಸಿಲಿನಲ್ಲಿಯೂ ಕೂಡ ಜನ ಆಗಮಿಸಿದ್ದಾರೆ. ರಾಜ್ಯ ರಾಜಕೀಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಪಾವಗಡದಲ್ಲಿ ಕಂಡು ಬಂದ ವಾತಾವರಣ ನನಗೆ ಖುಷಿ ತಂದಿದೆ ಎಂದು ಜನಾರ್ದನ ರೆಡ್ಡಿ ಹೇಳಿದರು.

ಈಗಾಗಲೇ ನಮ್ಮ‌ ಪಕ್ಷದಿಂದ 9 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇವೆ. ಅದೇ ರೀತಿ ಮುಂದಿನ ದಿನಗಳಲ್ಲಿ ಗೆಲ್ಲುವ ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ. ಮೊದಲಿನಿಂದಲೂ ನಾನು ಅದನ್ನೇ ಹೇಳುತ್ತಾ ಬಂದಿದ್ದೇನೆ. ಯಡಿಯೂರಪ್ಪನವರ ಮೇಲೆ ನನಗೆ ತುಂಬಾ ಗೌರವ ಇದೆ. ರಾಜಕೀಯವಾಗಿ ಅವರ ಹೆಸರು ದುರುಪಯೋಗಪಡಿಸಿಕೊಳ್ಳಲ್ಲ‌ ಎಂದರು. ಸಮಾವೇಶದಲ್ಲಿ ನೇರಳಕುಂಟೆ ನಾಗೇಂದ್ರ ಅವರನ್ನು ಕೆಆರ್​​ಪಿಪಿ ಪಾವಗಡ ಕ್ಷೇತ್ರದ ಅಭ್ಯರ್ಥಿ ಎಂದು ಜನಾರ್ದನ ರೆಡ್ಡಿ ಘೋಷಣೆ ಮಾಡಿದರು.

ಇದನ್ನೂ ಓದಿ : ಜನಾರ್ಧನ ರೆಡ್ಡಿ ಪಕ್ಷ‌ ಧೂಳಿಪಟವಾಗಲಿದೆ: ಎಸ್.ಆರ್.ಹಿರೇಮಠ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.