ETV Bharat / state

ಜಿಲ್ಲಾಸ್ಪತ್ರೆಗೆ ದಾಖಲಿಸಿಕೊಳ್ಳದ ಆರೋಪ: ರಕ್ತ ಸ್ರಾವದಿಂದ ಬಾಣಂತಿ.. ಹುಟ್ಟಿದ ಅವಳಿ ಮಕ್ಕಳ ಸಾವು

author img

By

Published : Nov 3, 2022, 3:23 PM IST

Updated : Nov 3, 2022, 6:41 PM IST

ತಾಯಿ ಕಾರ್ಡ್, ಆಧಾ‌ರ್​ ಕಾರ್ಡ್ ಇಲ್ಲ ಎಂದು ಹೇಳಿ ತುಮಕೂರು ಜಿಲ್ಲಾಸ್ಪತ್ರೆಯವರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗರ್ಭಿಣಿ ಮನೆಯಲ್ಲಿ ರಾತ್ರಿಯಿಡೀ ಹೆರಿಗೆ ನೋವಿನಿಂದ ಬಳಲಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

death-of-mother-and-newborn-twins-from-postpartum-haemorrhage-in-tumakur
ಆಧಾರ್​ ಕಾರ್ಡ್​ ಇಲ್ಲವೆಂದು ಜಿಲ್ಲಾಸ್ಪತ್ರೆಗೆ ದಾಖಲಿಸಿಕೊಳ್ಳದ ಆರೋಪ: ರಕ್ತ ಸ್ರಾವದಿಂದ ಬಾಣಂತಿ.. ಹುಟ್ಟಿದ ಅವಳಿ ಮಕ್ಕಳ ಸಾವು!

ತುಮಕೂರು: ನಗರದಲ್ಲಿ ಬಾಣಂತಿ ಹಾಗೂ ಅವಳಿ ಮಕ್ಕಳು ಅಸುನೀಗಿದ ಹೃದಯವಿದ್ರಾವಕ ಘಟನೆ ಗುರುವಾರ ನಡೆದಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಈ ಮಹಿಳೆಯನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿಕೊಳ್ಳದ ಕಾರಣಕ್ಕೆ ಈ ದುರಂತ ಸಂಭವಿಸಿದೆ. ಇದಕ್ಕೆ ವೈದ್ಯರೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇಲ್ಲಿನ ಭಾರತಿ ನಗರದಲ್ಲಿ ವಾಸವಿದ್ದ ತಮಿಳುನಾಡು ಮೂಲದ ಕಸ್ತೂರಿ ಎಂಬುವವರೇ ಮೃತರು. ಕಳೆದ ಒಂದು ತಿಂಗಳಿಂದ 6 ವರ್ಷದ ಮಗಳ ಜೊತೆ ಭಾರತಿ ನಗರದಲ್ಲಿ ಕಸ್ತೂರಿ ವಾಸವಿದ್ದರು. ಕಡುಬಡತದ ಇರುವ ತುಂಬು ಗರ್ಭಿಣಿಯಾಗಿದ್ದರು. ನಿನ್ನೆ (ನ.2) ಸಂಜೆ ಹೆರಿಗೆ ನೋವಿನಿಂದ ಬಳಲುತ್ತಿದ್ದರು.

ತಾಯಿ ಕಾರ್ಡ್ ಆಧಾ‌ರ್​ ಕಾರ್ಡ್ ಇರಲಿಲ್ಲ: ಇವರ ಕಷ್ಟಕ್ಕೆ ಮರುಗಿದ್ದ ಸ್ಥಳೀಯರು ಸ್ವಲ್ಪ ಹಣ ಕೊಟ್ಟು ಆಟೋ ಮಾಡಿ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು. ಕಸ್ತೂರಿ ಜೊತೆಗೆ ಪಕ್ಕದ ಮನೆಯ ಅಜ್ಜಿಯೊಬ್ಬರು ಕೂಡ ಆಸ್ಪತ್ರೆಗೆ ಬಂದಿದ್ದರು. ಆದರೆ, ಕಸ್ತೂರಿ ಬಳಿ ತಾಯಿ ಕಾರ್ಡ್, ಆಧಾ‌ರ್​ ಕಾರ್ಡ್ ಇಲ್ಲ ಎಂದು ಆಸ್ಪತ್ರೆಯವರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎಂದು ಹೇಳಲಾಗ್ತಿದೆ.

ಅಲ್ಲದೇ, ವೈದ್ಯರ ಬಳಿ ಅಂಗಲಾಚಿ ಬೇಡಿದರೂ ಸ್ಪಂದಿಸಿಲ್ಲವಂತೆ. ನಾವು ಚಿಕಿತ್ಸೆ ಕೊಡಲ್ಲ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬರೆದುಕೊಡುತ್ತೇವೆ, ಅಲ್ಲಿಗೆ ಹೋಗಿ ಎಂದು ವೈದ್ಯೆಯೊಬ್ಬರು ಹೇಳಿದ್ದರಂತೆ. ಅಲ್ಲಿಗೆ ಹೋಗಲು ಹಣ ಇಲ್ಲದೇ ಕಸ್ತೂರಿ ನೋವಿನಲ್ಲೇ ವಾಪಸ್ ಮನೆಗೆ ಹಿಂತಿರುಗಿದ್ದರು ಎಂದು ತಿಳಿದುಬಂದಿದೆ.

ರಕ್ತ ಸ್ರಾವದಿಂದ ತಾಯಿ.. ಹುಟ್ಟಿದ ಅವಳಿ ಮಕ್ಕಳ ಸಾವು: ಮನೆಯಲ್ಲಿ ರಾತ್ರಿಯಿಡೀ ಹೆರಿಗೆ ನೋವಿನಿಂದ ಬಳಲಿದ ಕಸ್ತೂರಿ ಇಂದು ಬೆಳಗಿನ ಜಾವ ಜೋರಾಗಿ ಚೀರಾಡಿದ್ದಾರೆ. ಸ್ಥಳೀಯರು ಸ್ಥಳಕ್ಕೆ ಹೋಗುವಷ್ಟರಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿ, ತೀವ್ರ ರಕ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾರೆ. ಇತ್ತ, ಹುಟ್ಟಿದ ಅವಳಿ ಮಕ್ಕಳು ಕೂಡ ಮೃತಪಟ್ಟಿವೆ.

ಹೆರಿಗೆಯಾದ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ತಾಯಿ ಮತ್ತು ಮಕ್ಕಳ ಮೃತದೇಹಗಳಿದ್ದ ದೃಶ್ಯ ನೋಡಿದರೆ, ಎಂತಹವರ ಕರುಳು ಕಿತ್ತು ಬರುವಂತಿದೆ. ಈ ಮೂರು ಜೀವಗಳ ಸಾವಿಗೆ ಜಿಲ್ಲಾಸ್ಪತ್ರೆ ವೈದ್ಯರೇ ಕಾರಣ, ಹೆರಿಗೆ ನೋವೆಂದು ಬಂದಾಗ ದಾಖಲಿಸಿಕೊಂಡಿದ್ದರೆ ತಾಯಿ ಮತ್ತು ಮಕ್ಕಳಿಬ್ಬರು ಬದುಕುತ್ತಿದ್ದರು. ವೈದ್ಯರ ನಿರ್ಲಕ್ಷ್ಯವೇ ಮೂವರ ಸಾವಿಗೆ ಕಾರಣ ಎಂದು ಸ್ಥಳೀಯರಾದ ಶಂಕರ್ ಆರೋಪಿಸಿದ್ದಾರೆ.

ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮದ ಭರವಸೆ: ಈ ಘಟನೆ ಕುರಿತಂತೆ ಸ್ಪಷ್ಟನೆ ನೀಡಿರುವ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕಿ ಡಾ.ವೀಣಾ, ಈ ಘಟನೆಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ. ಆಕಸ್ಮಾತ್ ಈ ಗರ್ಭಿಣಿ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ಅವಕಾಶ ಕೇಳಿದ್ದರೆ, ಅದಕ್ಕೆ ನಿರಾಕರಿಸಿದ್ದರೆ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ನವಜಾತ ಶಿಶುವಿನ ಹೊಟ್ಟೆಯಿಂದ 8 ಭ್ರೂಣ ಹೊರತೆಗೆದ ರಾಂಚಿ ವೈದ್ಯರು.. ಇದು ವಿಶ್ವದಲ್ಲೇ ಮೊದಲ ಪ್ರಕರಣ

Last Updated : Nov 3, 2022, 6:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.