ಶಿವಮೊಗ್ಗ: ವರುಣದಲ್ಲಿ ಮತ ಪ್ರಚಾರ ಚೆನ್ನಾಗಿ ಆಗಿದೆ. ನನಗೆ ವರುಣದಲ್ಲಿ ಯಾರು ಸ್ಪರ್ಧೆ ಮಾಡಿದ್ದಾರೆ ಎಂದು ಗೊತ್ತಿಲ್ಲ. ಸೋಮಣ್ಣ ಹಾಗೂ ಪ್ರತಾಪ್ ಸಿಂಹ ಅವರ ಬಗ್ಗೆ ಗೌರವವಿದೆ. ನನಗೆ ಯಾರೂ ವೈರಿಗಳಿಲ್ಲ. ಎಲ್ಲರೂ ನನ್ನ ಸ್ನೇಹಿತರೇ. ನನಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂದು ಗೂತ್ತಿದೆ. ನನಗೀಗ 61 ವರ್ಷ ಎಂದು ಸೂಚ್ಯವಾಗಿ ಮಾಧ್ಯಮದವರ ಪ್ರಶ್ನೆಗಳಿಗೆ ನಟ ಶಿವರಾಜ್ ಕುಮಾರ್ ಉತ್ತರಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೂಂದಿಗೆ ಮಾತನಾಡಿದ ಅವರು, ವರುಣದಲ್ಲಿ ನಾನು ನಿನ್ನೆ ಪ್ರಚಾರಕ್ಕೆ ಹೋಗಿದ್ದೆ. ಅಲ್ಲಿ ಪ್ರಚಾರ ಚೆನ್ನಾಗಿತ್ತು. ಆದರೆ ನನಗೆ ಸೋಮಣ್ಣ ಅಲ್ಲಿ ಸ್ಪರ್ಧೆ ಮಾಡಿದ್ದಾರೆ ಅಂತಾ ಗೊತ್ತಿರಲಿಲ್ಲ ಎಂದರು.
ಅಪ್ಪು ಹೆಸರಿನಲ್ಲಿ ಅಭಿಮಾನಿಗಳು ಅನೇಕ ಕೆಲಸ ಮಾಡಿದ್ದಾರೆ. ರಾಯಚೂರಿನಲ್ಲಿ ಒಬ್ಬರು ಸಾದಿಕ್ ಅಂತಾ ಇದ್ದಾರೆ. ಅವರು ಅಪ್ಪು ಬದುಕಿದ್ದಾಗ ಅನೇಕ ಸೇವೆ ಮಾಡಿದ್ದರು. ಅಪ್ಪು ತೀರಿ ಹೋದ ಮೇಲೂ ಹಲವು ಕೆಲಸಗಳನ್ನು ಅಪ್ಪು ಹೆಸರಿನಲ್ಲಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಅವರು ಯಾರೂ ಅಪ್ಪು ಹೆಸರಿನಲ್ಲಿ ಮಾಡಿದ ಕೆಲಸವನ್ನು ಹೇಳಿಕೊಂಡು ಓಡಾಡಲ್ಲ. ಇಂತಹವರಿಗೆ ನಾವು ಗೌರವ ಕೊಡುತ್ತೇವೆ. ಶಿವಣ್ಣನಿಗೆ ಮಾತನಾಡಲು ಆಗಲ್ಲ ಅಂತಲ್ಲ. ನಾನು ಮಾತನಾಡಲ್ಲ ಅಷ್ಟೇ. ನಾನು ಪ್ರಚಾರಕ್ಕೆ ಹೋದಂತೆ ಸುದೀಪ್ ಅವರೂ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಹಾಗಂತ ನಾಳೆ ನಾನು ಸುದೀಪ್ ಅವರನ್ನು ಮಾತನಾಡಿಸಲು ಆಗಲ್ವಾ?, ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಇಂದು ಶಿರಸಿ, ಮುಂಡುಗೋಡಿನಲ್ಲಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷದವರು ಪ್ರಚಾರಕ್ಕೆ ಕರೆದಿಲ್ಲ: ನನಗೆ ಕಾಂಗ್ರೆಸ್ ಪಕ್ಷ ಬಿಟ್ಟು ಬೇರೆ ಪಕ್ಷದವರು ಪ್ರಚಾರಕ್ಕೆ ಕರೆದಿಲ್ಲ. ಬೇರೆ ಪಕ್ಷದವರು ಪ್ರಚಾರಕ್ಕೆ ಕರೆದಿದ್ದರೆ ಅವರ ಪರ ಪ್ರಚಾರಕ್ಕೂ ಹೋಗುತ್ತಿದ್ದೆ. ನಾನು ಸಿನಿಮಾದಲ್ಲಿ ಬ್ಯುಸಿ ಇದ್ದೆ. ಈಗ ಪ್ರಚಾರದಲ್ಲಿ ಬ್ಯುಸಿಯಾಗಿದ್ದೇನೆ ಎಂದರು.
ರಾಹುಲ್ ಭೇಟಿ ಆಸೆ ಇತ್ತು: ನನಗೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡುವ ಆಸೆ ಇತ್ತು. ಇದಕ್ಕಾಗಿ ಮೊನ್ನೆ ಭೇಟಿ ಮಾಡಿದ್ದೇನೆ. ಅವರ ಫಿಟ್ನೆಸ್ ಇಷ್ಟವಾಯಿತು. ಭಾರತ್ ಜೋಡೋದಲ್ಲಿ ಭಾಗಿಯಾಗಿದ್ದನ್ನು ನೋಡಿದ್ದೆ. ಇದರಿಂದ ನನಗೆ ಇಂಪ್ರೆಸ್ ಆಯ್ತು. ರಾಹುಲ್ ಗಾಂಧಿ ಸ್ಮಾರ್ಟ್ ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಭಜರಂಗಿ ಬಲ.. ಮಾಜಿ ಸಿಎಂ ಪರ ಶಿವಣ್ಣ ಭರ್ಜರಿ ಪ್ರಚಾರ
ವರುಣದಲ್ಲಿ ಪ್ರಚಾರ: ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪರ ವರುಣದಲ್ಲಿ ಶಿವರಾಜ್ ಕುಮಾರ್ ಗುರುವಾರ ಮತಯಾಚಿಸಿದ್ದರು. ಕ್ಷೇತ್ರದ ರಾಂಪುರ, ಮರಳೂರು, ಗೊದ್ದನಪುರ, ತಾಂಡವಪುರದಲ್ಲಿ ಪತ್ನಿ ಗೀತಾ ಶಿವರಾಜ್ ಕುಮಾರ್ ಮತ್ತು ಯುವ ನಟಿ ನಿಶ್ವಿಕಾ ನಾಯ್ಡು ಅವರು ರೋಡ್ ಶೋ ನಡೆಸಿದ್ದರು.