ETV Bharat / state

ಕಿಮ್ಮನೆ - ಆರಗ ಮಧ್ಯೆ ಯುವ ಕೃಷಿಕನನ್ನ ಅಭ್ಯರ್ಥಿಯಾಗಿ ಘೋಷಿಸಿದ ಕುಮಾರಸ್ವಾಮಿ

author img

By

Published : Dec 22, 2022, 2:18 PM IST

ಮಲೆನಾಡಿನಲ್ಲಿ ಅಳಿದು ಉಳಿದಿರುವ ಜೆಡಿಎಸ್ ಬಲಪಡಿಸಲು ಆಯ್ದ ತಾಲೂಕುಗಳಲ್ಲಿ ರಣತಂತ್ರ ಹೆಣೆದಿರುವ ಕುಮಾರಸ್ವಾಮಿ ತೀರ್ಥಹಳ್ಳಿಯಲ್ಲಿಯೂ ಪ್ರಾಬಲ್ಯ ಇರುವ ಒಕ್ಕಲಿಗ ಯುವಕ ರಾಜಾರಾಮ್ ಅವರನ್ನು ಕಣಕ್ಕೆ ಇಳಿಸಿದ್ದಾರೆ.

JDS Candidate Rajaram Yaduru
ಯುವ ಮುಖಂಡ ರಾಜಾರಾಮ್ ಯಡೂರ್

ಯುವ ಮುಖಂಡ ರಾಜಾರಾಮ್ ಯಡೂರ್

ಶಿವಮೊಗ್ಗ: ತೀರ್ಥಹಳ್ಳಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯನ್ನಾಗಿ ಪ್ರಗತಿಪರ ರೈತ ಹಾಗೂ ಯುವ ಮುಖಂಡ ರಾಜಾರಾಮ್ ಯಡೂರ್ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕಾರ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಮಧ್ಯೆ ಈಗ ಯುವ ಮುಖವನ್ನು ತರುವ ಮೂಲಕ ಹೆಚ್ ಡಿ ಕುಮಾರಸ್ವಾಮಿ ಅಚ್ಚರಿ ಮೂಡಿಸಿದ್ದಾರೆ‌.

ಮಲೆನಾಡಿನಲ್ಲಿ ಅಳಿದು ಉಳಿದಿರುವ ಜೆಡಿಎಸ್ ಬಲಪಡಿಸಲು ಆಯ್ದ ತಾಲೂಕುಗಳಲ್ಲಿ ರಣತಂತ್ರ ಹೆಣೆದಿರುವ ಕುಮಾರಸ್ವಾಮಿ ತೀರ್ಥಹಳ್ಳಿಯಲ್ಲಿಯೂ ಪ್ರಾಬಲ್ಯವಿರುವ ಒಕ್ಕಲಿಗ ಯುವಕ ರಾಜಾರಾಮ್ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಾರಾಮ್ ತನ್ನ ಆಯ್ಕೆ ಖುಷಿ ತಂದಿದೆ ಎಂದಿದ್ದಾರೆ.

ನನಗೆ ಬಹಳ ಹೆಮ್ಮೆಯಾಗುತ್ತಿದೆ. ಸಮಾಜವಾದಿ ನೆಲದಲ್ಲಿ ನನ್ನ ರಾಜಕೀಯ ಜೀವನ ಆರಂಭ ಮಾಡುತ್ತಿದ್ದೇನೆ. ಅದಕ್ಕಿಂತ ಮುಖ್ಯವಾಗಿ ಕುಮಾರಸ್ವಾಮಿ ರೈತ ಕುಟುಂಬದ ಒಬ್ಬ ಯುವಕನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ರಾಜ್ಯದಲ್ಲಿ ರೈತಾಪಿ ಕುಟುಂಬದಿಂದ ಆಯ್ಕೆ ಮಾಡಿರೋದು ಖುಷಿ ತಂದಿದೆ. ಇದು ನನ್ನ ಪುಣ್ಯ, ನಾನು ತೀರ್ಥಹಳ್ಳಿ ಕ್ಷೇತ್ರದ ಜನರ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ರಾಜಾರಾಮ್​ ಹೇಳಿದ್ದಾರೆ.

ಕೃಷಿಕರು, ಯುವಕರು, ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿರುವ ಸಮುದಾಯದ ಪರ ಕೆಲಸ ಮಾಡಲು ನಾನು ಸಿದ್ಧನಾಗಿದ್ದೇನೆ. ಈ ಸಲ ಜನ ಆಶೀರ್ವಾದ ಮಾಡೇ ಮಾಡುತ್ತಾರೆ. ರಾಜ್ಯದಲ್ಲಿ ತೀರ್ಥಹಳ್ಳಿ ಕ್ಷೇತ್ರ ಮಹತ್ವವನ್ನು ಪಡೆದಿದೆ. ಗೋಪಾಲಗೌಡರಂಥ ಪ್ರಾಮಾಣಿಕ ರಾಜಕಾರಣಿ ಇದ್ದಂತಹ ನೆಲ ಇದು. ದೇವೇಗೌಡರು, ಕುಮಾರಸ್ವಾಮಿ ಜೊತೆ ಪಕ್ಷದ ಎಲ್ಲ ವರಿಷ್ಠರಿಗೂ ನನ್ನ ಧನ್ಯವಾದಗಳು. ಎಲ್ಲ ಕಾರ್ಯಕರ್ತರೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

2002ರಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಕೃಷಿಯಲ್ಲಿ ತೊಡಗಿಕೊಂಡೆ. ತಂದೆ ನಿಧನ ನಂತರ ಸಂಪೂರ್ಣ ಕೃಷಿ ಜವಾಬ್ದಾರಿ ನನ್ನ ಮೇಲೆ ಬಿತ್ತು. ಸುಮಾರು 22 ವರ್ಷ ಕೃಷಿಯಲ್ಲಿ ಏಳು-ಬೀಳುಗಳನ್ನು ನೋಡಿದ್ದೇನೆ. ಈತನಕ ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ. ಆದರೆ, ಜೆಡಿಎಸ್​ನಲ್ಲಿ ಹಲವು ವರ್ಷ ಕೆಲಸ ಮಾಡಿಕೊಂಡು ಬಂದಿದ್ದೇನೆ. ಇದನ್ನು ಗುರುತಿಸಿ ಕುಮಾರಸ್ವಾಮಿ ಅವರು ನನ್ನನ್ನು ಅಭ್ಯರ್ಥಿಯನ್ನಾಗಿ ಸೂಚಿಸಿದ್ದಾರೆ. ಜೆಡಿಎಸ್ ಪುನಃ ಸ್ಥಾಪನೆ ಮಾಡುತ್ತೇನೆ ಎಂದರು.

ಕಿಮ್ಮನೆ ರತ್ನಾಕರ್ ಹಾಗೂ ಆರಗ ಜ್ಞಾನೇಂದ್ರ ಅವರಿಗಿರುವ ರಾಜಕೀಯ ಅನುಭವದಷ್ಟು ನನಗೆ ವಯಸ್ಸಾಗಿಲ್ಲ. ಒಬ್ಬರು ಹಾಲಿ, ಇನ್ನೊಬ್ಬರು ಮಾಜಿ ಮಂತ್ರಿ. ನಮ್ಮ ಕ್ಷೇತ್ರವೇ ವಿಭಿನ್ನ. ಇಲ್ಲಿ ಶುಶಿಕ್ಷಿತರು ಇದ್ದಾರೆ. ಅವರ ಮಾರ್ಗದರ್ಶನ ಪಡೆದುಕೊಂಡು ಕೆಲಸ ಮಾಡುತ್ತೇನೆ. ಐದು ವರ್ಷ ಜನ ನನಗೆ ಅವಕಾಶ ಕೊಟ್ಟರೆ ಇಲ್ಲಿಯ ಚಿತ್ರಣವನ್ನೇ ಬದಲಾಯಿಸುತ್ತೇನೆ.

ಈಗಿರುವ ಇಬ್ಬರು ನಾಯಕರು 30 ವರ್ಷ ರಾಜಕಾರಣ ಮಾಡಿದ್ದಾರೆ. ತೀರ್ಥಹಳ್ಳಿಯಲ್ಲಿ ಕೃಷಿ ಸಂಬಂಧಿತರು ಅನೇಕ ಕೆಲಸಗಳು ಬಹುವಾಗಿ ಕಾಡುತ್ತಿದೆ. ಈಗಾಗಲೇ ಕುಮಾರಸ್ವಾಮಿ ಕೂಡ ರೋಗ ಸಂಬಂಧ ವಿಜ್ಞಾನಿಗಳ ಜೊತೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ. ಕುಮಾರಸ್ವಾಮಿಯವರ ಸರ್ಕಾರ ಬಂದರೆ ಇವೆಲ್ಲ ಕೆಲಸಗಳು ಕೈಗೂಡುತ್ತವೆ ಎಂದು ರಾಜಾರಾಮ್ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಬಹುಮತದಿಂದ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ : ಹೆಚ್​ ಡಿ ಕುಮಾರಸ್ವಾಮಿ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.