ETV Bharat / state

ರಾಜ್ಯದ ಜನರಿಗೆ ಈ ಸರ್ಕಾರ ಬೇಡವಾಗಿದೆ, ಉರುಳಿಸುವ ಕೆಲಸವನ್ನೇಕೆ ಬಿಜೆಪಿ ಮಾಡಬಾರದು?: ಕೆ.ಎಸ್.ಈಶ್ವರಪ್ಪ

author img

By ETV Bharat Karnataka Team

Published : Oct 19, 2023, 3:19 PM IST

Updated : Oct 19, 2023, 3:41 PM IST

ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಭರದಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ

ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿಕೆ

ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಯಾಕೆ ಉರುಳಿಸುವ ಕೆಲಸ ಮಾಡಬಾರದು ಎಂದು ಬಿಜೆಪಿಯ ಹಿರಿಯ ನಾಯಕ ಹಾಗು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಹೋದಾಗ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಯಾವ ಶಾಸಕರೂ ಕೂಡಾ ಅಲ್ಲಿರಲಿಲ್ಲ ಎಂದು ಟೀಕಿಸಿದರು. ಇದೇ ವೇಳೆ, ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಯಾವುದೇ ಹೊಸ ಅಭಿವೃದ್ಧಿ ಕಾಮಗಾರಿಯೂ ನಡೆಯುತ್ತಿಲ್ಲ. ಆಡಳಿತ ಪಕ್ಷದ ಶಾಸಕರುಗಳಿಗೆ ಸರ್ಕಾರ ಇರುವುದೇ ಬೇಡವಾಗಿದೆ. ರಾಜ್ಯದ ಜನರಿಗೂ ಸಹ ಸರ್ಕಾರ ಬೇಡವಾಗಿದೆ. ಇದರಿಂದಾಗಿ ಸರ್ಕಾರ ಬೀಳಿಸುವ ನಿಟ್ಟಿನಲ್ಲಿ ಬಿಜೆಪಿ ಯಾಕೆ ಪ್ರಯತ್ನಿಸಬಾರದು ಎಂದರು.

"ಇಂದಲ್ಲ ನಾಳೆ ಡಿಕೆಶಿ ಜೈಲಿಗೆ": ಡಿ.ಕೆ.ಶಿವಕುಮಾರ್ ಎಷ್ಟು ಅಕ್ರಮ ಆಸ್ತಿ ಹಾಗೂ ಹಣ ಸಂಗ್ರಹ ಮಾಡಿದ್ದರು ಎಂದು ತ‌ನಿಖೆಯಿಂದ ಹೊರಬಂದು, ಅವರು ಜೈಲಿಗೆ ಹೋಗಿ ಬಂದಿದ್ದಾರೆ. ಜೈಲಿಗೆ ಹೋಗಿ ಬಂದು ಈಗ ಬೇಲ್​ನಲ್ಲಿದ್ದಾರೆ ಎಂದು ಹೇಳಿದರೆ ಅವರಿಗೆ ಸಿಟ್ಟು ಬರುತ್ತದೆ. ಡಿಕೆಶಿ ಇಂದಲ್ಲ ನಾಳೆ ಮತ್ತೆ ಜೈಲಿಗೆ ಹೋಗುತ್ತಾರೆ ಎಂದು ಹೇಳಿದರು.

ಐಟಿ ದಾಳಿ ವಿಚಾರ: ಐಟಿ ದಾಳಿಯಲ್ಲಿ ದೊರೆತ ಕೋಟಿಗಟ್ಟಲೆ ಹಣದ ವಿಚಾರವಾಗಿ ಪ್ರತಿಕ್ರಿಯಿಸಿ, ನೂರಾರು ಕೋಟಿ ರೂ. ಸಿಕ್ಕಿದೆ. ಅದನ್ನು ತನಿಖೆ ಮಾಡಿ ಎಂದರೆ ತನಿಖೆ ಮಾಡಲ್ಲ ಎನ್ನುತ್ತಾರೆ. ಡಿ.ಕೆ.ಶಿವಕುಮಾರ್ ಬಳಿ ಸೌಜನ್ಯದ ಮಾತಿಲ್ಲ. ಅವರ ಉತ್ತರದಲ್ಲೂ ಗೂಂಡಾಗಿರಿ ಇದೆ. ನಿಮ್ಮ ಮೇಲೆ ಬಂದಿರುವ ಆರೋಪವನ್ನು ಹೇಳಿದರೆ ಅದು ತಪ್ಪೇ ಎಂದು ಕೇಳಿದರು.

ಸಿಎಂ ಹಾಗೂ ಡಿಸಿಎಂ ಇಬ್ಬರು ನೇರವಾಗಿ ಕಳ್ಳರು ಅಂತ ನಾನು ಹೇಳುತ್ತಿಲ್ಲ. ಬಿಬಿಎಂಪಿಯಿಂದ ಹಣ ಬಿಡುಗಡೆ ಆಗಿದೆ. ಅದರ ಕಮಿಷನ್ 42 ಕೋಟಿ ರೂ. ಆಗುತ್ತದೆ. ರಾಮಲಿಂಗರೆಡ್ಡಿ ಅವರಿಗೆ ನಮ್ಮ ರಾಜ್ಯಾಧ್ಯಕ್ಷರ ಮೇಲೆ ಮಾತನಾಡುವ ಧೈರ್ಯ ಬಂದಿದೆಯೇ ಎಂದು ಪ್ರಶ್ನಿಸಿದರು.

"ಆಯನೂರು ಮಂಜುನಾಥ್ ತಲೆ ಕೆಟ್ಟವ": ಆಯನೂರು ಮಂಜುನಾಥ್​ ಅವರಂತಹ ತಲೆ ಕೆಟ್ಟವರಿಗೆ ನಾನು ಉತ್ತರ ಕೊಡಲ್ಲ. ಅವರಿಗೆ ಯಾವುದೇ ನೈತಿಕತೆ ಇಲ್ಲ. ಅವರು ಎಷ್ಟು ಪಕ್ಷ ಬಿಟ್ಟು ಹೋಗಿದ್ದಾರೆ ಎಂದು ಹೇಳಿದರು.

ಶಾಸಕ ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಬೆಳಗಾವಿ ಜಿಲ್ಲೆಯಲ್ಲಿ ಡಿಕೆಶಿ ಹಸ್ತಕ್ಷೇಪ ಮಾಡುತ್ತಿಲ್ಲ : ಶಾಸಕ ಬಾಬಾಸಾಹೇಬ ಪಾಟೀಲ

Last Updated :Oct 19, 2023, 3:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.