ETV Bharat / state

ಪ್ರಿಯಾಂಕ್​ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ: ಕೆ ಎಸ್ ಈಶ್ವರಪ್ಪ

author img

By ETV Bharat Karnataka Team

Published : Dec 12, 2023, 6:03 PM IST

ಮಾಜಿ ಡಿಸಿಎಂ ಈಶ್ವರಪ್ಪ, ಸಚಿವ ಪ್ರಿಯಾಂಕ್​ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.

former-dcm-k-s-eshwarappa-slams-minister-priyank-kharge
ಪ್ರಿಯಾಂಕ್​ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ : ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ಸಚಿವ ಪ್ರಿಯಾಂಕ್​ ಖರ್ಗೆ ಸದಾ ಸುದ್ದಿಯಾಗಲು ಹೇಳಿಕೆ ನೀಡುತ್ತಿರುತ್ತಾರೆ. ಅವರಿಗೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ. ಪ್ರಿಯಾಂಕ್​ ಖರ್ಗೆ ಪೇಪರ್ ಬಾಕ್ಸ್​ ನ್ಯೂಸ್​ ನಾಯಕ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು. ಭದ್ರಾವತಿ ಪಟ್ಟಣದಲ್ಲಿ ಹಲ್ಲೆಗೊಳಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಬಿಜೆಪಿ ಕಾರ್ಯಕರ್ತನನ್ನು ಭೇಟಿಯಾದ ನಂತರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಿಯಾಂಕ್​ ಖರ್ಗೆಗೂ ಸ್ವಾತಂತ್ರ್ಯ ಹೋರಾಟಗಾರರಿಗೂ ಏನು ಸಂಬಂಧ. ಮಲ್ಲಿಕಾರ್ಜುನ ಅವರು ಸ್ವಲ್ಪವಾದರೂ ದೇಶದ ಬಗ್ಗೆ ಮಾತನಾಡುತ್ತಾರೆ. ಬಾಯಿಗೆ ಬಂದಂತೆ ಮಾತನಾಡುವ ಪ್ರಿಯಾಂಕ್​ ಖರ್ಗೆ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ ಎಂದರು.

ಪ್ರಿಯಾಂಕ ಖರ್ಗೆ ವೀರ ಸಾರ್ವಕರ್ ಅವರ ಭಾವಚಿತ್ರವನ್ನು ತೆಗೆದು ಹಾಕುವ ಕುರಿತು ಮಾತನಾಡುತ್ತಾರೆ. ಪೇಪರ್​ನಲ್ಲಿ ಬಾಕ್ಸ್ ನ್ಯೂಸ್ ಬರುತ್ತದೆ ಎಂದು ಈ ರೀತಿ ಹೇಳಿಕೆ ನೀಡುತ್ತಾರೆ. ಸಾಧ್ಯವಾದರೆ ವೀರ ಸಾರ್ವಕರ್ ಪೋಟೊ ತೆಗೆಯಲಿ ಎಂದು ಸವಾಲು ಹಾಕಿದರು. ಹಿಂದೆ ವಿಧಾನಸಭೆಯಲ್ಲಿ ವೀರ ಸಾರ್ವಕರ್ ಭಾವಚಿತ್ರ ಹಾಕುವಾಗ ಬಾಯಿಯಲ್ಲಿ ಇವರು ಬೆಣ್ಣೆ ಇಟ್ಟುಕೊಂಡಿದ್ರಾ ಅಥವಾ ಮಣ್ಣು ಇಟ್ಟುಕೊಂಡಿದ್ರಾ. ಅಂದೇ ಯಾಕೆ ಇವರೆಲ್ಲಾ ವಿರೋಧ ಮಾಡಲಿಲ್ಲ.ಭಾವಚಿತ್ರ ಅನಾವರಣಕ್ಕೆ ಬಂದು ಸುಮ್ಮನೆ ‌ನಿಂತಿದ್ರಲ್ಲಾ ಎಂದು ಕಿಡಿಕಾರಿದರು.

ಗೂಂಡಾ ರಾಜ್ಯವಾಗುತ್ತಿದೆ : ನಮ್ಮ ರಾಜ್ಯ ಗೂಂಡಾ ರಾಜ್ಯವಾಗುತ್ತಿದೆ ಎಂದು ನೋವಿನಿಂದ ಹೇಳುತ್ತಿದ್ದೇನೆ. ರಾಜಭವನಕ್ಕೆ ಬಾಂಬ್ ಬೆದರಿಕೆ ಹಾಕುವ ಮಟ್ಟಕ್ಕೆ ಬಂದಿದೆ ಎಂದರೆ ಇದು ರಾಜ್ಯ ಸರ್ಕಾರದ ವೈಫಲ್ಯವಾಗಿದೆ. ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕುತ್ತಿದ್ದಾರೆ. ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇವುಗಳ ತನಿಖೆಯನ್ನು ಎನ್​ಐಎಗೆ ನೀಡಿದರೆ ಹೀಗೆಲ್ಲ ಆಗಲ್ಲ ಎಂದರು. ಇದೇ ವೇಳೆ, ಸಚಿವ ಜಮೀರ್​ ಅಹ್ಮದ್​ ಖಾನ್​ ವಿರುದ್ಧ ವಾಗ್ದಾಳಿ ನಡೆಸಿದರು.

ಹಲ್ಲೆ ಆರೋಪಿಗಳನ್ನು ಬಂಧಿಸಬೇಕು : ರಾಜ್ಯದ ಎಲ್ಲ ಮೂಲೆಗಳಲ್ಲೂ ಗಾಂಜಾ, ಡ್ರಗ್ಸ್ ದಂಧೆ ನಡೆಯುತ್ತಿದೆ. ಭದ್ರಾವತಿಯಲ್ಲಿ ಗೋಕುಲಕೃಷ್ಣ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದವರನ್ನು ಇದುವರೆಗೂ ಬಂಧಿಸಿಲ್ಲ. ಇದರಲ್ಲಿ ಭದ್ರಾವತಿ ಶಾಸಕನ ಪುತ್ರನೂ ಇದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. ಅನೇಕ ಕಡೆ ದರೋಡೆ ನಡೆಯುತ್ತಿದೆ. ಪೊಲೀಸ್​ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ಭದ್ರಾವತಿ ಘಟನೆಯ ಬಗ್ಗೆ ಪೊಲೀಸರು ಹೆಚ್ಚಿನ ನಿಗಾವಹಿಸಿ ಆರೋಪಿಗಳನ್ನು ಬಂಧಿಸಬೇಕೆಂದು ಇಂತಹ ಬೆದರಿಕೆಯ ಬಗ್ಗೆ ಬಿಜೆಪಿ ಕಾರ್ಯಕರ್ತರು ಎಂದೂ ಹೆದರುವುದಿಲ್ಲ ಎಂದರು.

ಸುಪ್ರೀಂ ಕೋರ್ಟ್​ ತೀರ್ಪಿಗೆ ಸ್ವಾಗತ : ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್​ 370 ರದ್ಧತಿಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್​ ತೀರ್ಪನ್ನು ಈಶ್ವರಪ್ಪ ಅವರು ಸ್ವಾಗತಿಸಿದರು. ಸುಪ್ರೀಂಕೋರ್ಟ್ ತೀರ್ಪು ನಾವೆಲ್ಲ ತಲೆ ಎತ್ತುವಂತೆ ಮಾಡಿದೆ. ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದು ಹಾಕಿದ್ದು ಸ್ವಾತಂತ್ರ್ಯ ಹೋರಾಟಗಾರಿಗೆ ಸಂದ ಜಯ ಎಂದು ಹೇಳಿದರು.

ಇದನ್ನೂ ಓದಿ : ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಹಡಪದ ಸಮಾಜದಿಂದ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.