ETV Bharat / state

ವನ್ಯಜೀವಿ ಮಂಡಳಿಗೆ ಅನರ್ಹರ ನೇಮಕ ಆರೋಪ: ನೇಮಕಾತಿ ಕಡತ ಕೇಳಿದ ಹೈಕೋರ್ಟ್

author img

By

Published : Jan 22, 2021, 6:45 AM IST

ಪರಿಸರವಾದಿ ಪ್ರಮೋದ್ ವೆಂಕಟೇಶಮೂರ್ತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಕೋರ್ಟ್​ ನೇಮಕಾತಿಯ ಮೂಲ ಕಡತ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

ಹೈಕೋರ್ಟ್
High Court

ಬೆಂಗಳೂರು: ರಾಜ್ಯ ವನ್ಯಜೀವಿ ಮಂಡಳಿಗೆ ಅನರ್ಹರನ್ನು ಹಾಗೂ ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಆರೋಪಕ್ಕೆ ಸಂಬಂಧಿಸಿದಂತೆ ನೇಮಕಾತಿಯ ಮೂಲ ಕಡತ ಸಲ್ಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.

ನಗರದ ಪರಿಸರವಾದಿ ಪ್ರಮೋದ್ ವೆಂಕಟೇಶಮೂರ್ತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಆರೋಪಿತ ಸದಸ್ಯರ ಪರ ವಕೀಲರು ವಾದಿಸಿ ಕೆಲವೇ ಸದಸ್ಯರನ್ನು ಗುರಿಯಾಗಿಸಿಕೊಂಡು ಅರ್ಜಿ ಸಲ್ಲಿಸಲಾಗಿದೆ. ಕೆಲವು ಸದಸ್ಯರ ಹೆಸರನ್ನು ಕೈಬಿಡಲಾಗಿದೆ. ಇದನ್ನು ಗಮನಿಸಿದರೆ ಅರ್ಜಿದಾರರ ನಡೆ ಅನುಮಾನಾಸ್ಪದವಾಗಿದೆ ಎಂದು ಆರೋಪಿದರು.

ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲೆ ಅನು ಚೆಂಗಪ್ಪ, ಇಬ್ಬರು ಸದಸ್ಯರ ಹೆಸರನ್ನಷ್ಟೇ ಪ್ರತಿವಾದಿಗಳ ಪಟ್ಟಿಯಿಂದ ಕೈಬಿಡಲಾಗಿದೆ. ಅವರಿಬ್ಬರು ಈ ಹಿಂದೆಯೂ ಮಂಡಳಿ ಸದಸ್ಯರಾಗಿದ್ದರೆಂಬ ಕಾರಣಕ್ಕೆ ಸೇರಿಸಿಲ್ಲ. ನ್ಯಾಯಾಲಯ ಸೂಚಿಸಿದರೆ ಅವರನ್ನೂ ಸಹ ಪ್ರತಿವಾದಿಗಳನ್ನಾಗಿ ಮಾಡಲಾಗುವುದು. ಆದರೆ, ಅರ್ಜಿಯ ಮುಖ್ಯ ಉದ್ದೇಶ ಅನರ್ಹರನ್ನು ನೇಮಕವನ್ನು ರದ್ದು ಮಾಡಬೇಕು ಎನ್ನುವುದಷ್ಟೇ ಎಂದರು.

ಓದಿ: ಶಿವಮೊಗ್ಗ: ಕಲ್ಲು ಕ್ವಾರಿಯಲ್ಲಿ ಭೀಕರ ಸ್ಫೋಟ... ಎಂಟು ಸಾವು, ಮೃತರ ಸಂಖ್ಯೆ ಹೆಚ್ಚಾಗುವ ಶಂಕೆ!

ವಾದ - ಪ್ರತಿವಾದ ಆಲಿಸಿದ ಪೀಠ, ಮಂಡಳಿ ಸದಸ್ಯರ ನೇಮಕಕ್ಕೆ ಸಂಬಂಧಿಸಿದ ಕಡತವನ್ನು ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಮಾರ್ಚ್ .1ಕ್ಕೆ ಮುಂದೂಡಿತು. ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಸೆಕ್ಷನ್ 6(1) ಅಡಿ ಸರ್ಕಾರ ವನ್ಯಜೀವಿ ಮಂಡಳಿ ರಚನೆ ಮಾಡಿದೆ. ನಿಯಮದಂತೆ ಪರಿಸರವಾದಿಗಳು, ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವವರು ಮತ್ತು ಪರಿಶಿಷ್ಟ ಪಂಗಡದವರು ಮಂಡಳಿಯಲ್ಲಿ ಇಲ್ಲ. ಬದಲಿಗೆ ಕ್ಷೇತ್ರದಲ್ಲಿ ಪರಿಣಿತರಲ್ಲದವರನ್ನು ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ನಿಯಮಗಳನ್ನು ಗಾಳಿಗೆ ತೂರಿ ಮಾಡಿರುವ ನೇಮಕಾತಿ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.