ETV Bharat / state

ಮುಂದುವರಿದ ವರುಣಾರ್ಭಟ.. ಶಿವಮೊಗ್ಗ ಜಿಲ್ಲೆಯಲ್ಲಿ 397 ಮನೆಗಳಿಗೆ ಹಾನಿ, ತಕ್ಷಣ ಪರಿಹಾರಕ್ಕೆ ಸೂಚನೆ

author img

By

Published : Jul 17, 2022, 6:19 PM IST

ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಹಲವು ಅವಾಂತರಗಳು ಸೃಷ್ಟಿ- ಮಳೆಹಾನಿಗೆ ಒಳಗಾಗಿರುವ ಕುಟುಂಬಗಳಿಗೆ ತಕ್ಷಣ ಪರಿಹಾರ- ಜಿಲ್ಲಾಧಿಕಾರಿ ಸೂಚನೆ

dc-selvamani-said-compensation-will-be-provided-to-rain-damage-caused-in-shimoga
ಜಿಲ್ಲೆಯಲ್ಲಿ 397 ಮನೆಗಳಿಗೆ ಹಾನಿ : ತಕ್ಷಣ ಪರಿಹಾರ ನೀಡುವಂತೆ ಸೂಚಿಸಿದ ಡಿಸಿ ಡಾ.ಆರ್.ಸೆಲ್ವಮಣಿ

ಶಿವಮೊಗ್ಗ : ಮಳೆ ಹಾನಿಯಿಂದ ಆಸ್ತಿ-ಪಾಸ್ತಿಗಳ ನಷ್ಟ ಉಂಟಾಗಿರುವ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಲು ಕಂದಾಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಹೇಳಿದ್ದಾರೆ.

ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಕೋಟ್ಯಾಂತರ ರೂ. ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ಮಳೆಯಿಂದ ಸೊರಬ ಮತ್ತು ಹೊಸನಗರ ತಾಲೂಕುಗಳಲ್ಲಿ ತಲಾ ಒಂದೊಂದು ಜೀವಹಾನಿ ಪ್ರಕರಣ, ಜಿಲ್ಲೆಯಲ್ಲಿ 8 ಜಾನುವಾರು ಸಾವು ಪ್ರಕರಣಗಳು ದಾಖಲಾಗಿದ್ದು, ಈ ಸಂತ್ರಸ್ತರಿಗೆ ಪರಿಹಾರ ಧನ ನೀಡಲಾಗಿದೆ ಎಂದು ಹೇಳಿದರು.

ಮಳೆ ಹಾನಿ ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡಲು ಕ್ರಮ : ಆಸ್ತಿ-ಪಾಸ್ತಿ ಕಳೆದುಕೊಂಡಿರುವ ಕುಟುಂಬಗಳಿಗೆ ತಕ್ಷಣದ ಪರಿಹಾರ ಕ್ರಮವಾಗಿ ಸರ್ಕಾರದ ಮಾರ್ಗಸೂಚಿಯನ್ವಯ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಪರಿಹಾರ ಧನ ದೊರೆಯದಿರುವ ಕುಟುಂಬಗಳಿಗೆ ಸಹಾಯಧನ ವಿತರಿಸಲು ಕಂದಾಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಈ ವರೆಗೆ 397 ಮನೆಗಳು ಹಾನಿಗೊಳಗಾಗಿದ್ದು, ಅವುಗಳ ಪೈಕಿ 30 ಮನೆಗಳು ಪೂರ್ಣಪ್ರಮಾಣದಲ್ಲಿ, 269 ಮನೆಗಳು ಭಾಗಶಃ, 98 ಮನೆಗಳು ತೀವ್ರತರಹದ ಹಾನಿಗೊಳಗಾಗಿವೆ. ಸುಮಾರು 774 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಮತ್ತು ಮೆಕ್ಕೆಜೋಳದ ಬೆಳೆ ಹಾನಿಗೊಳಗಾಗಿವೆ. ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಆಗಿರುವ ಬೆಳೆಯ ಪೂರ್ಣ ಪ್ರಮಾಣದ ಮಾಹಿತಿ ಪಡೆದು, ನಷ್ಟದ ಪರಿಹಾರಧನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದಲ್ಲದೇ 258 ಕಿ.ಮೀ. ರಸ್ತೆ, 546 ವಿದ್ಯುತ್ ಕಂಬಗಳು ಹಾಗೂ 6 ಟ್ರಾನ್ಸ್‌ಫರ್ಮರ್‌ಗಳು, ಶಾಲಾ ಹಾಗೂ ಅಂಗನವಾಡಿ ಕಟ್ಟಡಗಳು ಹಾನಿಗೊಳಗಾಗಿವೆ ಎಂದು ವಿವರಿಸಿದರು.

ತುಂಗಾ ಮತ್ತು ಭದ್ರಾ ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಹೆಚ್ಚಿದೆ. ಒಳಹರಿವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ನೀರನ್ನು ಜಲಾಶಯದಿಂದ ಹೊರಬಿಡಲು ಸೂಚಿಸಲಾಗಿದೆ. ಭದ್ರಾ ಜಲಾಶಯದಿಂದ ಪ್ರಸ್ತುತ ಪ್ರತಿನಿತ್ಯ ಸುಮಾರು 45000 ಕ್ಯೂಸೆಕ್​ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಪಾತ್ರದಲ್ಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಅಲ್ಲದೇ ಈ ಭಾಗದ ಜನರ ಸುರಕ್ಷತೆಗಾಗಿ ಭದ್ರಾವತಿಯಲ್ಲಿ ಒಟ್ಟು 4 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸುಮಾರು 400 ಮಂದಿ ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ಒದಗಿಸಲಾಗಿದೆ. ಕಾಳಜಿ ಕೇಂದ್ರದಲ್ಲಿ ತಾತ್ಕಾಲಿಕ ವಸತಿ, ಔಷಧ ಹಾಗೂ ಊಟೋಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಭಾರಿ ವಾಹನಗಳ ಸಂಚಾರಕ್ಕೆ ತಡೆ : ಆಗುಂಬೆ ರಸ್ತೆಯಲ್ಲಿ ಭೂಕುಸಿತ, ಮರಗಳು ಧರೆಗುರುಳಿರುವ ಬಗ್ಗೆ ಮಾಹಿತಿಯಿದ್ದು, ಈ ತಿಂಗಳ ಅಂತ್ಯದವರೆಗೆ ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಅಲ್ಲದೇ ಪರ್ಯಾಯ ರಸ್ತೆ ಸಂಚಾರಕ್ಕೆ ಮಾರ್ಗ ಸೂಚಿಸಲಾಗಿದೆ. ಮಳೆಯಿಂದ ಜಿಲ್ಲೆಯ ಬೇರೆ-ಬೇರೆ ತಾಲೂಕುಗಳಲ್ಲಿ ಮರಗಳು ಉರುಳಿದ್ದು ತೆರವುಗೊಳಿಸಲು ಸೂಚಿಸಲಾಗಿದೆ. ಅದಕ್ಕಾಗಿ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ ಉಪಸ್ಥಿತರಿದ್ದರು.

ಓದಿ : ಉಕ್ರೇನ್ ನಿಂದ ಪಾರಾದ ವೈದ್ಯಕೀಯ ವಿದ್ಯಾರ್ಥಿಗಳ ಬದುಕು ಅತಂತ್ರ : ಆತಂಕದಲ್ಲಿ ಪೋಷಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.