ETV Bharat / state

ಜ.22 ರಂದು ರಾಜ್ಯದ ರಾಮಮಂದಿರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ: ಸಿಎಂ

author img

By ETV Bharat Karnataka Team

Published : Jan 12, 2024, 4:38 PM IST

Updated : Jan 12, 2024, 5:15 PM IST

ಜನವರಿ 22ರ ನಂತರ ಅಯೋಧ್ಯೆಗೆ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ

ಶಿವಮೊಗ್ಗ: ನಾವೂ ಕೂಡ ಶ್ರೀರಾಮನ ಭಕ್ತರು. ಆದರೆ, ಬಿಜೆಪಿಯವರು ಶ್ರೀರಾಮನ ರಾಜಕೀಯ ಮಾಡಲು ಹೋಗುತ್ತಿದ್ದಾರೆ. ನಾವು ಅದರ ವಿರುದ್ಧವೇ ಹೊರತು ಶ್ರೀರಾಮನನ್ನು ವಿರೋಧ ಮಾಡುತ್ತಿಲ್ಲ. ನಾನು ಕೂಡ 22ರ ನಂತರ ಅಯೋಧ್ಯೆಗೆ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮ ಮಂದಿರದ ಉದ್ಘಾಟನೆಗೆ ನನಗೆ ಆಹ್ವಾನ ಬಂದಿಲ್ಲ. ಶ್ರೀರಾಮನ ಪೂಜೆ ಮಾಡುವುದರಲ್ಲಿ ಅವರಿಗಿಂತ ನಾವು ಹಿಂದೆ ಬಿದ್ದಿಲ್ಲ. ನಾವೂ ಕೂಡ ರಾಮನನ್ನು ಆರಾಧಿಸುತ್ತೇವೆ. ಆದರೆ, ರಾಮ ಮಂದಿರ ವಿಚಾರದಲ್ಲಿ ಅವರು ರಾಜಕೀಯ ಮಾಡುತ್ತಿದ್ದಾರೆ. ನಾವು ಅವರ ರಾಜಕೀಯವನ್ನು ವಿರೋಧಿಸುತ್ತೇವೆಯೇ ಹೊರತು ಶ್ರೀರಾಮಚಂದ್ರನನ್ನು ಅಲ್ಲ. ಆದರೂ, ಬಿಡುವು ಮಾಡಿಕೊಂಡು ಜನವರಿ 22ರ ಬಳಿಕ ಅಯೋಧ್ಯೆಗೆ ತೆರಳುವೆ. ಅಲ್ಲದೇ ಜನವರಿ 22 ರಂದು ಕರ್ನಾಟಕದ ಎಲ್ಲ ರಾಮಮಂದಿರಗಳಿಗೆ ತೆರಳಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದು ಸಹ ಅವರು ಹೇಳಿದ್ದಾರೆ.

  • ರಾಮಲಲ್ಲ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂಬ ನಮ್ಮ ಪಕ್ಷದ ಹಿರಿಯ ನಾಯಕರ ನಿಲುವನ್ನು ಬೆಂಬಲಿಸುತ್ತೇನೆ ಎಂಬ ಹೇಳಿಕೆಯ ವಿರುದ್ಧ ರಾಜ್ಯದ @BJP4Karnataka ನಾಯಕರು ಯಥಾಪ್ರಕಾರ ನನ್ನನ್ನು ಹಿಂದು ವಿರೋಧಿ ಎಂದು ಚಿತ್ರಿಸಲು ನಾಲಗೆ ಹರಿಬಿಡುತ್ತಿದ್ದಾರೆ.

    ನಾನು ಹಿಂದೂ ವಿರೋಧಿಯೂ ಅಲ್ಲ, ಶ್ರೀರಾಮಚಂದ್ರನ ವಿರೋಧಿಯೂ…

    — Siddaramaiah (@siddaramaiah) January 12, 2024 " class="align-text-top noRightClick twitterSection" data=" ">

ಇದೇ ವೇಳೆ, ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ತ್ರಿವಳಿ ಡಿಸಿಎಂ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸದೇ ಸುದ್ದಿಯನ್ನು ಸಾರಾಸಗಟಾಗಿ ಅಲ್ಲಗಳೆದರು. ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜನವರಿ 21ರಂದು ರಾಜ್ಯ ಕಾಂಗ್ರೆಸ್​ ಕಾರ್ಯಕರ್ತರ ಸಮಾವೇಶವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಎಲ್ಲ ಕಾರ್ಯಕರ್ತರು ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ​ ಖರ್ಗೆ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಚಿಕ್ಕವರು - ದೊಡ್ಡವರು ಅನ್ನದೇ ರಾಜ್ಯದ ಎಲ್ಲ ಮುಖಂಡರು ತಮ್ಮ ಸ್ವ - ಇಚ್ಛೆಯಿಂದ ಬರುವಂತೆ ತಿಳಿಸಿದರು.

ಇದನ್ನೂ ಓದಿ: ಯುವನಿಧಿ ಯೋಜನೆಗೆ ಅದ್ಧೂರಿ ಚಾಲನೆ: ಫಲಾನುಭವಿಗಳ ಖಾತೆಗೆ ಹಣ ಜಮೆ

ಇದಕ್ಕೂ ಮುನ್ನ ಫ್ರೀಡಂ ಪಾರ್ಕ್​ನಲ್ಲಿ ನಡೆದ ಬೃಹತ್​ ಸಮಾವೇಶದಲ್ಲಿ ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆ ಯುವನಿಧಿಗೆ ಚಾಲನೆ ನೀಡಲಾಯಿತು. ಯೋಜನೆಯ ಕೆಲ ಫಲಾನುಭವಿಗಳಿಗೆ ಚೆಕ್ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ​ ಇತರ ಸಚಿವರುಗಳು ಚಾಲನೆ ನೀಡಿದರು. ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಅವರು ಫಲಾನುಭವಿಗಳ ಖಾತೆಗೆ ಹಣ ಜಮೆ ಕೂಡ ಮಾಡಿದರು.

ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ಐತಿಹಾಸಿಕ ದಿನ ಎಂದರೆ ತಪ್ಪಾಗಲಾರದು. ನಾವು ಚುನಾವಣೆ ಪೂರ್ವದ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜನರ ಮುಂದಿಟ್ಟಿದ್ದೆವು. ಆ ಎಲ್ಲಾ ಗ್ಯಾರಂಟಿಗಳನ್ನು ಇಂದು ಪೂರೈಸಿದ್ದೇವೆ. ಅಧಿಕಾರಕ್ಕೆ ಬಂದ ತಕ್ಷಣ ಎಲ್ಲವನ್ನೂ ಜಾರಿ ಮಾಡುತ್ತೇವೆ ಎಂದಿರಲಿಲ್ಲ. ಆದರೂ, ಸಹ ಅಧಿಕಾರಕ್ಕೆ ಬಂದ ಬಳಿಕ ಐದೂ ಗ್ಯಾರಂಟಿ ನೀಡಿದ್ದೇವೆ. ಇದೀಗ ಯುವನಿಧಿ ಕಾರ್ಯಕ್ರಮಕೂ ಚಾಲನೆ ನೀಡಲಾಗಿದೆ. ಎರಡು ವರ್ಷ ಭತ್ಯೆ ನೀಡುವ ಜೊತೆಗೆ ಉದ್ಯೋಗ ತರಬೇತಿ, ಉದ್ಯೋಗ ಮೇಳಗಳನ್ನು ಮಾಡಲಾಗುತ್ತಿದೆ. ರಾಜ್ಯ, ದೇಶ ಹಾಗೂ ವಿದೇಶದಲ್ಲೂ ಉದ್ಯೋಗ ಅವಕಾಶ ಕೊಡಿಸಲಿದ್ದೇವೆ. ಬೇಡಿಕೆ ಇರುವ ಉದ್ಯೋಗಗಳಿಗೆ ತರಬೇತಿ ನೀಡಲಾಗುತ್ತದೆ. ನಿರುದ್ಯೋಗ ಸಮಸ್ಯೆ ಪರಿಹರಿಸಬೇಕು ಎಂಬುದು ನಮ್ಮ ಉದ್ದೇಶ. ಸಾಮಾಜಿಕ, ಆರ್ಥಿಕವಾಗಿ ಯಾರೂ ಭ್ರಮನಿರಸವಾಗಬಾರದು ಎಂದರು.

Last Updated : Jan 12, 2024, 5:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.