ಧಾರ್ಮಿಕ ಭಾವನೆಗೆ ಧಕ್ಕೆ ಪ್ರಕರಣ: ಸಾಹಿತಿ ಭಗವಾನ್​ಗೆ ಷರತ್ತುಬದ್ಧ ಜಾಮೀನು

author img

By

Published : Dec 12, 2022, 10:43 PM IST

Conditional bail for writer Bhagwan by sagar court

ಧಾರ್ಮಿಕ ಭಾವನೆಗೆ ಧಕ್ಕೆ ಪ್ರಕರಣ ಸಂಬಂಧ ಸಾಹಿತಿ ಕೆ.ಎಸ್.ಭಗವಾನ್ ಅವರಿಗೆ ಸಾಗರದ ಜೆಎಂಎಫ್​ಸಿ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ.

ಶಿವಮೊಗ್ಗ: ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ ಪ್ರಕರಣ ಸಂಬಂಧ ಸಾಹಿತಿ ಕೆ.ಎಸ್.ಭಗವಾನ್ ಅವರಿಗೆ ಸಾಗರದ ಜೆಎಂಎಫ್​ಸಿ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಭಗವಾನ್ ಸಾಗರದ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಭಗವಾನ್ ರಚಿಸಿದ್ದ 'ರಾಮಮಂದಿರ ಏಕೆ ಬೇಡ?' ಎಂಬ ಕೃತಿ ಬಿಡುಗಡೆ ಮಾಡಬಾರದು ಎಂದು ಸಾಗರ ತಾಲೂಕಿನ ಇಕ್ಕೇರಿಯ ಮಹಾಬಲೇಶ್ವರ ಎಂಬುವರು ಖಾಸಗಿ ಕ್ರಿಮಿನಲ್ ದೂರು ದಾಖಲಿಸಿದ್ದರು. ಈ ದೂರಿನ ಬಗ್ಗೆ ದೀರ್ಘಕಾಲದ ವಿಚಾರಣೆ ನಡೆಸಿದ ನ್ಯಾಯಾಲಯ, ಭಗವಾನ್ ವಿರುದ್ಧ ಐಪಿಸಿ ಸೆಕ್ಷನ್ 295(ಎ) ಅಡಿ ಧಾರ್ಮಿಕ ಭಾವನೆಗೆ ಧಕ್ಕೆ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಿಳಿಸಿತ್ತು. ಅಲ್ಲದೆ, ಕಳೆದ ಡಿ. 2ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಮೈಸೂರು ಎಸ್​​ಪಿ ಮೂಲಕ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ಸಮನ್ಸ್ ಜಾರಿಯಾಗಿದ್ದರೂ ಭಗವಾನ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.

ಇದರಿಂದ ಜೆಎಂಎಫ್​ಸಿ ನ್ಯಾಯಾಲಯವು ಜಾಮೀನುರಹಿತ ಬಂಧನ ವಾರೆಂಟ್ ಜಾರಿಗೆ ಆದೇಶಿಸಿತ್ತು. ಸಾಗರದ ಪೇಟೆ ಠಾಣೆ ಪೊಲೀಸರಿಗೆ ವಾರೆಂಟ್ ಜಾರಿ ಮಾಡುವಂತೆ ನ್ಯಾಯಾಲಯ ಆದೇಶ ಮಾಡಿತ್ತು. ಈ ಸಂಬಂಧ ಭಗವಾನ್ ನಿರೀಕ್ಷಣಾ ಜಾಮೀನು ಕೋರಿ ಸಾಗರದ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಭಗವಾನ್​ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅಲ್ಲದೆ, 10 ದಿನಗಳ ಒಳಗಾಗಿ ಪೊಲೀಸರ ಮುಂದೆ ಹಾಜರಾಗುವಂತೆ, ಒಂದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ನೀಡುವಂತೆ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರಭಾವತಿ ಆದೇಶಿಸಿದ್ದಾರೆ. ದೂರುದಾರರ ಪರ ವಕೀಲ ಕೆ.ವಿ.ಪ್ರವೀಣ ಕುಮಾರ್ ಹಾಗೂ ಭಗವಾನ್​ ಪರ ಹೆಚ್​ಬಿ ರಾಘವೇಂದ್ರ ಮತ್ತು ರಶೀದ್ ವಾದಿಸಿದ್ದರು.

ಇದನ್ನೂ ಓದಿ: ಎಂಟು ವರ್ಷ ಕಳೆದರೂ ಆದೇಶ ಪಾಲಿಸದ ತಹಶೀಲ್ದಾರ್​ಗೆ 3 ಲಕ್ಷ ರೂ ದಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.