ಶಿವಮೊಗ್ಗ : ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಾಗಿರುವ ಮರಳು ಮತ್ತು ಜಲ್ಲಿ ಸಾಗಣೆಗೆ ಯಾವುದೇ ಅಡೆತಡೆ ಆಗದ ಹಾಗೆ ಕ್ರಮಕೈಗೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದರು.
ಶಿಕಾರಿಪುರದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ, ಇವುಗಳಿಗೆ ಕೆಲವೆಡೆ ಮರಳು ಮತ್ತು ಜಲ್ಲಿಯ ಕೊರತೆ ಕಂಡು ಬಂದಿದೆ.
ಈ ಹಿನ್ನೆಲೆ, ಈಗಾಗಲೇ ಕ್ವಾರಿಗಳ ಮೂಲಕ ತೆಗೆದು ಸಂಗ್ರಹಿಸಲಾಗಿರುವ ಜಲ್ಲಿ ಮತ್ತು ಮರಳು ಸುಗಮ ಸಾಗಣೆಗೆ ಯಾವುದೇ ಅಡ್ಡಿಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಡಿಸಿಗಳಿಗೆ ಸೂಚಿಸಿ ಪತ್ರ ಬರೆಯಲಾಗಿದೆ. ಹಾಗಾಗಿ, ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗದಂತೆ ಕ್ರಮಕೈಗೊಂಡಿರುವುದಾಗಿ ಸಿಎಂ ಹೇಳಿದರು.
ಮಹದಾಯಿ ಸೇರಿದಂತೆ ರಾಜ್ಯದ ಎಲ್ಲಾ ನೀರಾವರಿ ಯೋಜನೆಯನ್ನು ಕಾಲಮಿತಿಯೊಳಗೆ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ. ಈ ನಡುವೆ ಮಹದಾಯಿ ಯೋಜನೆಯ ಅನುಷ್ಠಾನ ವಿಳಂಬವಾಗಿದೆ ಎಂದು ರೈತರು ಹೋರಾಟ ಆರಂಭಿಸಿರುವುದು ಗಮನಕ್ಕೆ ಬಂದಿದೆ. ಸರ್ಕಾರ ಈ ಬಗ್ಗೆ ಗಮನಹರಿಸಲಿದೆ ಎಂದರು.