ಶಿವಮೊಗ್ಗ: ಸಾಗರ ತಾಲೂಕು ಆಸ್ಪತ್ರೆಯ ಮಕ್ಕಳ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14 ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದೆ. ನಿನ್ನೆ ರಾತ್ರಿ 8 ಗಂಟೆ ಸಮಯದಲ್ಲಿ ಮಕ್ಕಳ ಚಿಕಿತ್ಸೆಗೆಂದು ನೀಡಿದ ಇಂಜೆಕ್ಷನ್ನಿಂದ ಮಕ್ಕಳ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಿದೆ. ಇದರಿಂದ ಮಕ್ಕಳ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ 10 ತಿಂಗಳ ಮಗುವಿನಿಂದ 12 ವರ್ಷದೊಳಗಿನ ಸುಮಾರು 14 ಮಕ್ಕಳು ಬೇರೆ ಬೇರೆ ಸಮಸ್ಯೆಯಿಂದ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಬೆಳಗ್ಗೆ ನೀಡಿದಂತೆ ರಾತ್ರಿ ಸಹ ಸೆಫ್ಟ್ರಿಯಾಕ್ಷನ್ ಎಂಬ ಆ್ಯಂಟಿಬಯಾಟಿಕ್ ಇಂಜೆಕ್ಷನ್ ನೀಡಲಾಗಿದೆ. ಈ ಡೋಸ್ ಕೊಟ್ಟ ಕೆಲವೇ ನಿಮಿಷಗಳಲ್ಲಿ ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗಿದೆ.
ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದ ಮಕ್ಕಳಿಗೆ ಇಂಜೆಕ್ಷನ್ನಿಂದ ಅಡ್ಡಪರಿಣಾಮವಾಗಿ ಆರೋಗ್ಯ ಹದಗೆಟ್ಟು ಹೋಗಿದೆ. ನಾಲ್ಕು ಮಕ್ಕಳಲ್ಲಿ ತೀವ್ರ ಚಳಿ ಜ್ವರ ಬಂದರೇ, ಇನ್ನೂ ನಾಲ್ಕು ಮಕ್ಕಳಿಗೆ ಪೀಡ್ಸ್ ಸಹ ಬಂದಿದೆ. ಕೂಡಲೇ ಮೂರು ಮಕ್ಕಳಾದ ವಿನೋದ (11), ಐರಾಫ್ (10 ತಿಂಗಳು), ಆರ್ಯಗೌಡ 2 ವರ್ಷ 9 ತಿಂಗಳು ಇವರಿಗೆ ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್ಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಮಕ್ಕಳ ಆರೋಗ್ಯದ ಮೇಲೆ ತೀವ್ರ ನಿಗಾ : ಇನ್ನು ನಿಶ್ಚಿತಾ ಎನ್ನುವ 8 ವರ್ಷದ ಮಗುವನ್ನು ಸರ್ಜಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 10 ಮಕ್ಕಳಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯ ಮಕ್ಕಳ ವಾರ್ಡ್ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಾ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಸದ್ಯ ಶಿವಮೊಗ್ಗಕ್ಕೆ ಶಿಫ್ಟ್ ಮಾಡಿದ ಮಕ್ಕಳ ಆರೋಗ್ಯದ ಮೇಲೆ ತೀವ್ರ ನಿಗಾವನ್ನು ಮಕ್ಕಳ ವೈದ್ಯರು ವಹಿಸಿದ್ದಾರೆ.
'ಮಕ್ಕಳ ವಾರ್ಡ್ನಲ್ಲಿ 14 ಮಕ್ಕಳಿಗೆ ಸಂಜೆ ಡೋಸ್ ನೀಡಲಾಯಿತು. ಇಂಜೆಕ್ಷನ್ ನೀಡಿದ ಬಳಿಕ 14 ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ನಾಲ್ಕು ಮಕ್ಕಳಲ್ಲಿ ಒಂದು ಮಗುವಿಗೆ ಪೀಡ್ಸ್ ಬಂದಿದೆ. ಮೂರು ಮಕ್ಕಳನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಒಂದು ಮಗುವನ್ನು ಪೋಷಕರ ಬೇಡಿಕೆಯಂತೆ ಖಾಸಗಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಾಲ್ಕು ಮಕ್ಕಳ ಆರೋಗ್ಯ ಸ್ಥಿರವಾಗಿದೆ. ಮಕ್ಕಳ ವೈದ್ಯರು 24 ಗಂಟೆ ಮಕ್ಕಳ ಮೇಲೆ ನಿಗಾವಹಿಸಲಿದ್ದಾರೆ' ಎಂದು ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ತಿಳಿಸಿದರು.
ಡಿಸ್ಟಲರಿ ಮಿಕ್ಸ್ ಮಾಡದ ಪರಿಣಾಮ ಅಡ್ಡಪರಿಣಾಮ : ಇನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮಕ್ಕಳ ವಾರ್ಡ್ನಲ್ಲಿ ಮಾತ್ರ ಯಡವಟ್ಟು ಆಗಿದೆ. ನಿನ್ನೆ ರಾತ್ರಿ ಸೆಫ್ಟ್ರಿಯಾಕ್ಷನ್ ಎಂಬ ಆ್ಯಂಟಿಬಯಾಟಿಕ್ ಇಂಜೆಕ್ಷನ್ ನೀಡುವ ಸಮಯದಲ್ಲಿ ಇಂಜೆಕ್ಷನ್ಗೆ ಸೂಕ್ತ ರೀತಿಯಲ್ಲಿ ಡಿಸ್ಟಲರಿ ಮಿಕ್ಸ್ ಮಾಡದ ಪರಿಣಾಮ ಅಡ್ಡಪರಿಣಾಮ ಉಂಟಾಗಿದೆ ಎನ್ನಲಾಗಿದೆ. ಮಕ್ಕಳ ವಾರ್ಡ್ಗೆ ನೀಡಿದ ಇಂಜೆಕ್ಷನ್ ಯಾವುದು ಸಹ ಅವಧಿ ಮುಗಿದಿಲ್ಲ. ಆದರೂ ಮುಂಜಾಗೃತಾ ಕ್ರಮ ಆ ಬ್ಯಾಚ್ನ ಎಲ್ಲಾ ಇಂಜೆಕ್ಷನ್ಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಲ್ಯಾಬ್ಗೆ ಕಳುಹಿಸಿ ವರದಿ ತರಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಆಸ್ಪತ್ರೆಯಲ್ಲಿದ್ದ ಮಕ್ಕಳಿಗೆ ಜ್ವರ, ಶೀತ ಮತ್ತಿತರ ಕಾರಣಗಳಿಗಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಸಹ ಚಿಕಿತ್ಸೆ ನೀಡಲಾಗುತ್ತಿತ್ತು. ಅದರಲ್ಲಿ ಕೆಲವರು ಡಿಸ್ಚಾರ್ಜ್ ಆಗುವ ಹಂತಕ್ಕೆ ಸಹ ಬಂದಿದ್ದರು. ಇದರ ನಡುವೆ ಮಕ್ಕಳ ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಕಾರಣ ಆಸ್ಪತ್ರೆಯಲ್ಲಿದ್ದ ಪೋಷಕರು ಕೆಲಕಾಲ ಆತಂಕಕ್ಕೊಳಗಾಗಿದರಲ್ಲದೇ, ವೈದ್ಯರ ನಿರ್ಲಕ್ಷ್ಯದಿಂದಲೇ ಸಮಸ್ಯೆಯಾಗಿದೆ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಓದಿ: ದಾವಣಗೆರೆ : ಚಿನ್ನದ ನಾಣ್ಯಗಳೆಂದು 2.50 ಲಕ್ಷ ರೂ. ವಂಚಿಸಿದ್ದ ಆರೋಪಿಯ ಬಂಧನ