ಹಗಲು 'ನಾವು ಜೇನು ಬಿಚ್ಚುವವರು..' ರಾತ್ರಿ ದೇಗುಲ ಲೂಟಿ ಮಾಡಿದ ಕಳ್ಳರು: ಸಿಸಿಟಿವಿಯಲ್ಲಿ ಕೃತ್ಯ ಸೆರೆ

author img

By

Published : Sep 13, 2021, 6:45 PM IST

hieves who broke the temple door

ಕಳ್ಳರು ದೇವಾಲಯದ ಮುಂದೆ ಇರುವ ಕ್ಯಾಮರಾಗಳನ್ನು ಬೇರೆ ಕಡೆಗೆ ತಿರುಗಿಸಿದ್ದಾರೆ. ಆದ್ರೆ ಬಾಗಿಲಿನ ಬಲಭಾಗದಲ್ಲಿದ್ದ ಕ್ಯಾಮರಾವನ್ನು ಅವರು ಗಮನಿಸಿಲ್ಲ.

ರಾಮನಗರ: ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ಪಟ್ಟಲದಮ್ಮ ದೇವಾಲಯ ಹಾಗೂ ವಡ್ಡರದೊಡ್ಡಿ ಗ್ರಾಮದ ಮಹದೇಶ್ವರ ದೇವಸ್ಥಾನದಲ್ಲಿ ಖದೀಮರು ಕಳವು ಮಾಡಿದ್ದಾರೆ.

ಕಳ್ಳರು ಮಹದೇಶ್ವರ ದೇವಾಲಯದ ಬೀಗ ಮುರಿದು ಒಳನುಗ್ಗಿದ್ದಾರೆ. ನಂತರ ಅಲ್ಲಿ ದೇವರಿಗೆ ಧರಿಸಲಾಗಿದ್ದ 30 ಕೆ.ಜಿ ತೂಕದ ಪಂಚಲೋಹದ ಪ್ರಭಾವಳಿ, ನಾಗರ ಸೆಡೆ, ದೀಪಗಳು, ಆರತಿ ತಟ್ಟೆ, ಬಿಂದಿಗೆ ಹುಂಡಿ ಹಾಗೂ ಗಂಟೆಗಳನ್ನು ಹೊತ್ತೊಯ್ದಿದ್ದಾರೆ. ಸುಮಾರು 30 ರಿಂದ 40 ಸಾವಿರ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂಬ ಮಾಹಿತಿ ದೊರೆತಿದೆ.

robbery-in-temple-at-ramanagara
ಕಳ್ಳರು ಲೂಟಿ ಮಾಡಿದ ದೇವಾಲಯ

ಮಹದೇಶ್ವರ ದೇವಾಲಯ ಕಳ್ಳತನದ ನಂತರ ಚಕ್ಕೆರೆ ಶಕ್ತಿ ದೇವತೆ ಪಟ್ಟಲದಮ್ಮ ದೇವಾಲಯ‌ ಕಳ್ಳತನ ಮಾಡಲು ಯತ್ನಿಸಿ ವಿಫಲರಾಗಿದ್ದಾರೆ. ದೇವಾಲಯಕ್ಕೆ ಅಳವಡಿಸಿದ ಸಿಸಿ ಕ್ಯಾಮೆರಾಗಳನ್ನು ಬೇರೆಡೆ ತಿರುಗಿಸಿದ್ದಾರೆ. ಕಿಟಕಿ ಗ್ಲಾಸ್ ಒಡೆದಿದ್ದಾರೆ. ಬಾಗಿಲಿನಲ್ಲಿ ನಿಂತು ಪಕ್ಷಿಗಳನ್ನು ಬೇಟೆಯಾಡುವ ಕ್ಯಾಟರ್‌ಬಿಲ್ ಬಳಸಿ ದೇವಾಲಯದ ಒಳಗಿದ್ದ ಸಿಸಿಟಿವಿಯ ಡಿವಿಆರ್​ ಒಡೆದಿದ್ದಾರೆ. ನಂತರ ಬಾಗಿಲು ಒಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ, ಬಾಗಿಲು ಒಡೆಯಲು ಸಾಧ್ಯವಾಗದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.

robbery-in-temple-at-ramanagara
ಗ್ರಾಮಾಂತರ ಪಿಎಸ್ಐ ಶಿವಕುಮಾರ್ ದೇವಸ್ಥಾನಕ್ಕೆ ಭೇಟಿ, ಪರಿಶೀಲನೆ

ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಪಟ್ಟಲದಮ್ಮ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಕಳ್ಳರು ದೇವಾಲಯದ ಮುಂದಿರುವ ಸಿಸಿಟಿವಿ ಕ್ಯಾಮರಾಗಳನ್ನು ಬೇರೆಡೆಗೆ ತಿರುಗಿಸಿದ್ದಾರೆ. ಆದ್ರೆ ಬಾಗಿಲಿನ ಬಲಭಾಗದಲ್ಲಿದ್ದ ಕ್ಯಾಮರಾವನ್ನು ಅವರು ಗಮನಿಸಿಲ್ಲ. ಹೀಗಾಗಿ, ಕೃತ್ಯ ಸೆರೆಯಾಗಿದೆ.

4-5 ದಿನಗಳಿಂದ ಗ್ರಾಮದಲ್ಲೇ ಇದ್ದ ಕಳ್ಳರು

ದೇವಾಲಯದಲ್ಲಿ ಕಳ್ಳತನ ಎಸಗಿರುವ ಖದೀಮರು ಕಳೆದ 5 ದಿನಗಳಿಂದ ಗ್ರಾಮದಲ್ಲೇ ವಾಸ್ತವ್ಯ ಹೂಡಿದ್ದಾರೆ. ಇಬ್ಬರು ಗಂಡಸರು, ಒಬ್ಬಳು ಮಹಿಳೆ ಹಾಗೂ ಇಬ್ಬರು ಮಕ್ಕಳು, ನಾವು ಜೇನು ಬಿಚ್ಚುವವರು ಎಂದು ಹೇಳಿಕೊಂಡು ಗ್ರಾಮದ ಪಟ್ಟಲದಮ್ಮ ಕಲ್ಯಾಣ ಮಂಟಪದ ಮುಂದೆ ಓಡಾಡುತ್ತಿದ್ದರಂತೆ. ಇದೀಗ ಸಿಸಿಟಿವಿಯಲ್ಲಿ ಸೆರೆಯಾದವರು ಅವರೇ ಎಂಬುದು ತಿಳಿದು ಬಂದಿದೆ.

accused
ಸಿಸಿಟಿವಿಯಲ್ಲಿ ಸೆರೆಯಾದ ಆರೋಪಿ

ಗ್ರಾಮಾಂತರ ಪಿಎಸ್ಐ ಶಿವಕುಮಾರ್ ಎರಡೂ ದೇವಾಲಯದ ಸ್ಥಳಗಳಿಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಕೂಡಾ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ದೊಣ್ಣೆಯಿಂದ ಹೊಡೆದು ತಂದೆಯನ್ನು ಕೊಂದ ಮಗ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.