ETV Bharat / state

ವಿವಾದದ ನಡುವೆ ಬಮೂಲ್ ಉತ್ಸವಕ್ಕೆ ಸಿದ್ಧತೆ.. ಬಿಜೆಪಿ ಮುಖಂಡರಿಂದ ಪ್ರತಿಭಟನೆ ಎಚ್ಚರಿಕೆ

author img

By

Published : Feb 25, 2023, 9:30 PM IST

ಫೆ.27ಕ್ಕೆ ಬಮೂಲ್​ ಉತ್ಸವ - ಆಮಂತ್ರಣ ಪತ್ರಿಕೆಯಲ್ಲಿ ಸಿ.ಪಿ ಯೋಗೇಶ್ವರ್​ ಹೆಸರು ಹಾಕದಿರುವುದಕ್ಕೆ ತೀವ್ರ ಖಂಡನೆ - ಬಿಜೆಪಿ ಮುಖಂಡರಿಂದ ಪ್ರತಿಭಟನೆ ಎಚ್ಚರಿಕೆ

ramanagara-preparing-for-the-controversial-bamul-festival
ರಾಮನಗರ: ವಿವಾದದ ಬಮೂಲ್ ಉತ್ಸವಕ್ಕೆ ಸಿದ್ಧತೆ

ರಾಮನಗರ: ವಿವಾದದ ಬಮೂಲ್ ಉತ್ಸವಕ್ಕೆ ಸಿದ್ಧತೆ

ರಾಮನಗರ: ಬೊಂಬೆನಾಡು ಚನ್ನಪಟ್ಟಣದಲ್ಲಿ ಬಮೂಲ್ ಉತ್ಸವ ರಾಜಕೀಯ ರಂಗು ಪಡೆದುಕೊಳ್ಳುತ್ತಿದೆ. ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಪಾಲಿಸಿಲ್ಲ ಎಂಬ ವಿಷಯಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಆರೋಪ ಪ್ರತ್ಯಾರೋಪ ಮುಂದುವರೆದಿದೆ.

ಈ ನಡುವೆ ಫೆ.27ಕ್ಕೆ ಬಮೂಲ್ ಉತ್ಸವ ಮಾಡೋದಕ್ಕೆ ಜೆಡಿಎಸ್ ಸಜ್ಜಾಗಿದ್ದು, ಆಮಂತ್ರಣ ಪತ್ರಿಕೆಯಲ್ಲಿ ಹಾಲಿ ಎಂಎಲ್​ಸಿ ಸಿ.ಪಿ. ಯೋಗೇಶ್ವರ್ ಹಾಗೂ ಹಾಲು ಉತ್ಪಾದಕ ಸಹಕಾರ ಸಂಘದ ನಾಮನಿರ್ದೇಶಕ ಲಿಂಗೇಶ್ ಕುಮಾರ್ ಹೆಸರು ಹಾಕದಿರುವುದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ಕಾರ್ಯಕ್ರಮ ನಡೆಯುವ ದಿನ ವೇದಿಕೆಯ ಮುಂಭಾಗವೇ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನ ಬಿಜೆಪಿ ಮುಖಂಡರು ನೀಡಿದ್ದಾರೆ.

ಬಮೂಲ್ ಉತ್ಸವಕ್ಕೆ ಸಜ್ಜು: ಬೊಂಬೆನಾಡು ಚನ್ನಪಟ್ಟಣ ಹೈನೋದ್ಯಮದಿಂದ ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ತಾಲೂಕು ಎಂಬ ಹೆಸರಿಗೆ ಪಾತ್ರವಾಗಿದೆ. ಪ್ರತಿ ದಿನ 2 ಲಕ್ಷ ಲೀಟರ್ ಹಾಲು ಇದೊಂದೇ ತಾಲೂಕಿನಿಂದ ಬೆಂಗಳೂರು ಡೈರಿಗೆ ಸರಬರಾಜು ಮಾಡುವ ಕೀರ್ತಿ ಪಡೆದಿದೆ. ಇದರ ಜೊತೆಗೆ ತಾಲೂಕಿನಲ್ಲಿ 19 ಸಾವಿರಕ್ಕೂ ಹೆಚ್ಚು ಕುಟುಂಬಗಳು ಹೈನುಗಾರಿಕೆಯನ್ನ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೈನುಗಾರರನ್ನ ಒಂದೆಡೆ ಸೇರಿಸುವ ಉದ್ದೇಶದಿಂದ ಬಮೂಲ್ ಉತ್ಸವ ಮಾಡಲು ಸಜ್ಜಾಗಿದೆ.

ಇದರಿಂದಲೇ ಫೆ.27ರಂದು ತಾಲೂಕಿನ ದೊಡ್ಡಮಳೂರು ಗ್ರಾಮದ ಬಳಿ ಬಮೂಲ್ ಉತ್ಸವಕ್ಕೆ ಸಜ್ಜು ಮಾಡಲಾಗಿದ್ದು, ಹೈನುಗಾರರ ದೊಡ್ಡ ಮಟ್ಟದ ಕಾರ್ಯಕ್ರಮ ಬೃಹತ್ ವೇದಿಕೆ ಮಾಡಲು ಹೊರಟಿದ್ದಾರೆ. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಈ ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಗಣ್ಯರು ಭಾಗಿಯಾಗಲಿದ್ದಾರೆಂದು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದ್ದು, ಕ್ಷೀರ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿರುವ ರೈತರಿಗೆ ಅನುಕೂಲವಾಗಲೆಂದು ಈ ಉತ್ಸವನ್ನ ಹಮ್ಮಿಕೊಳ್ಳಲಾಗಿದೆ ಎಂಬುದು ಜೆಡಿಎಸ್ ಮುಖಂಡ ಜಯುಮುತ್ತು ಅವರ ಅಭಿಪ್ರಾಯವಾಗಿದೆ.

ಉತ್ಸವದಲ್ಲಿ ಕೃಷಿ, ಆರೋಗ್ಯ, ಉದ್ಯೋಗ ಮೇಳ ಆಯೋಜನೆ: ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಬೇಕು ಎಂಬ ಉದ್ದೇಶದಿಂದ ರೈತ ಮಕ್ಕಳಿಗೆ ಅನುಕೂಲವಾಗಲೆಂದು ಈ ಉತ್ಸವದಲ್ಲೇ ಬೃಹತ್ ಉದ್ಯೋಗ ಮೇಳವನ್ನ ಕೂಡ ಆಯೋಜನೆ ಮಾಡಲಾಗಿದೆ. 60ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಸಹಯೋಗದಲ್ಲಿ ಈ ಮೇಳ ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಲಾಗಿದೆ.

ಜೊತೆಗೆ ರೈತರಿಗೆ ಅನುಕೂಲವಾಗಲೆಂದು ಕೃಷಿ ಮೇಳ ಹಾಗೂ ವಿಶೇಷ ರಾಸುಗಳ ಪ್ರದರ್ಶನವನ್ನ ಸಹ ಹಮ್ಮಿಕೊಳ್ಳಲಾಗಿದೆ, ಮೇಳದಲ್ಲಿ ಕೃಷಿಗೆ ಸಂಬಂದಿಸಿದ ವಿವಿದ ಇಲಾಖೆಗಳು ಹಾಗೂ ಖಾಸಗಿ ಕಂಪನಿಗಳು ಭಾಗವಹಿಸುತ್ತಿದ್ದು, ಸಂಬಂಧಪಟ್ಟ ಇಲಾಖೆಗಳಿಂದ ಹಾಗೂ ಖಾಸಗಿ ಕಂಪನಿಗಳಿಂದ ದೊರೆಯುವ ಸೌಲಭ್ಯಗಳು ಹಾಗೂ ಕೃಷಿಯಲ್ಲಿ ಅಳವಡಿಸಿಕೊಳ್ಳಬಹುದಾದ ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಕೂಡ ನೀಡಲಾಗುತ್ತದೆಂದು ಜಯಮುತ್ತು ತಿಳಿಸಿದ್ದಾರೆ.

ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಪಾಲಿಸಿಲ್ಲ: ಹೈನುಗಾರಿಕೆ ಉತ್ಸವ ಮಾಡುವುದಕ್ಕೆ ನಮ್ಮದೇನು ಅಡ್ಡಿಯಿಲ್ಲ. ಆದರೆ ಸಹಕಾರ ಅಂಗ ಸಂಸ್ಥೆಯಾಗಿರುವ ಬಮೂಲ್​ ನಲ್ಲಿ ಯಾವುದೇ ಕಾರ್ಯಕ್ರಮ ಮಾಡಿದರು ಕೂಡ ಶಿಷ್ಟಾಚಾರ ಪಾಲನೆ ಮಾಡಬೇಕೆಂಬ ನಿಯಮವಿದೆ. ಆದರೆ ಚನ್ನಪಟ್ಟಣದಲ್ಲಿ ನಡೆಸುತ್ತಿರುವ ಸಹಕಾರ ಇಲಾಖೆಯ ಅಡಿಯಲ್ಲಿ ನಡೆಸುತ್ತಿರುವ ಬಮೂಲ್ ಉತ್ಸವದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಸ್ಥಳೀಯ ಎಂಎಲ್​ಸಿ ಹಾಗೂ ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್ ಹೆಸರು ಪತ್ರಿಕೆಯಲ್ಲಿ ಮುದ್ರಣ ಮಾಡಿಲ್ಲ ಎಂದು ಬಮೂಲ್ ನಿರ್ದೇಶಕ ಲಿಂಗೇಶ್ ಕುಮಾರ್ ಆರೋಪಿಸಿದರು.

ಬಮೂಲ್ ಹೆಸರು ಹಾಗೂ ಲೋಗೋ ಬಳಸದಂತೆ ಆದೇಶ: ಮತ್ತೊಂದೆಡೆ ಸರ್ಕಾರದ ಅಂಗ ಸಂಸ್ಥೆಯಾಗಿರುವ ಸಹಕಾರ ಇಲಾಖೆ ಅಡಿಯಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳು ಬರುತ್ತದೆ. ಇದರಿಂದಲೇ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಪಾಲನೆ ಮಾಡೋದು ಅಷ್ಟೇ ಪ್ರಮುಖವಾಗಿರುತ್ತದೆ. ಚನ್ನಪಟ್ಟಣದಲ್ಲಿ ನಡೆಯುತ್ತಿರುವ ಬಮೂಲ್ ಉತ್ಸವದಲ್ಲಿ ಸಂಪೂರ್ಣವಾಗಿ ಶಿಷ್ಟಾಚಾರ ಉಲ್ಲಂಘಟನೆಯಾಗಿದೆ.

ಬಮೂಲ್ ಉತ್ಸವದ ಬದಲಾಗಿ ಜೆಡಿಎಸ್ ಪಕ್ಷ ಪ್ರಚಾರಕ್ಕೆ ವೇದಿಕೆ ಸಜ್ಜು ಮಾಡಲು ಹೊರಟಿದ್ದಾರೆ. ಈಗಾಗಲೇ ಸರ್ಕಾರದಿಂದಲೂ ಕೂಡ ಕಾರ್ಯಕ್ರಮಕ್ಕೆ ಬಮೂಲ್ ಹಾಗೂ ನಂದಿನಿ ಲೋಗೋ ಬಳಸದಂತೆ ಆದೇಶ ಹೊರಡಿಸಿದ್ದಾರೆ. ಇದಲ್ಲದೆ ಎಲ್ಲಾ ಸಹಕಾರ ಇಲಾಖೆಗೂ ಕೂಡ ಈಗಾಗಲೇ ಸರ್ಕಾರದಿಂದ ಪತ್ರ ರವಾನೆಯಾಗಿದ್ದು, ಸರ್ಕಾರದ ಅಡಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿಲ್ಲ. ಯಾವ ಅಧಿಕಾರಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ಆದೇಶ ಹೊರಡಿಸಿದ್ದಾರೆ.

ಕಾರ್ಯಕ್ರಮಕ್ಕೆ ಪ್ರತಿಭಟನೆ ಎಚ್ಚರಿಕೆ: ಈ ನಡುವೆ ಶಿಷ್ಟಾಚಾರ ಉಲ್ಲಂಘನೆ ಮಾಡಿ ಬಮೂಲ್ ಉತ್ಸವ ಮಾಡಲು ಹೊರಟರೆ ವೇದಿಕೆಯ ಮುಂಭಾಗವೇ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನ ಬಿಜೆಪಿ ಮುಖಂಡರು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಒಂದು ಪಕ್ಷದ ಪ್ರಚಾರಕ್ಕೆ ಹೈನೋದ್ಯಮದ ರೈತರನ್ನ ಬಳಸಿಕೊಳ್ಳಲು ನಾವು ಬಿಡುವುದಿಲ್ಲ. ಬೇಕಾದ್ರೆ ಅವರ ಪಕ್ಷದಿಂದ ಕಾರ್ಯಕ್ರಮ ಮಾಡಿಸಿಕೊಂಡು ಕಾರ್ಯಕ್ರಮ ಮಾಡಿ ರೈತರಿಗೆ ಬೇಕಾದ್ದನ್ನು ಕೊಡಲಿ ಎಂದರು.

ಅದನ್ನ ಬಿಟ್ಟು ಶಿಷ್ಟಾಚಾರ ಉಲ್ಲಂಘನೆ ಮಾಡಿ ಅವರಿಗೆ ಬೇಕಾದ ರೀತಿಯಲ್ಲಿ ಕಾರ್ಯಕ್ರಮ ಮಾಡುವುದಕ್ಕೆ ಬಮೂಲ್ ಅವರ ಖಾಸಗಿ ಸ್ವತ್ತಲ್ಲ. ಇದೊಂದು ಸರ್ಕಾರದ ಅಡಿಯಲ್ಲಿರುವ ಅಂಗ ಸಂಸ್ಥೆಯಾಗಿರುವುದರಿಂದ ಸರ್ಕಾರದ ನೀತಿ ರಿವಾಜುಗಳನ್ನ ಅನುಸರಿಸಲೇಬೇಕು. ಇಲ್ಲದಿದ್ದರೆ ಮುಂದಾಗುವ ಘಟನೆಗಳಿಗೆ ಕಾರ್ಯಕ್ರಮದ ಆಯೋಜಕರೇ ಕಾರಣ ಆಗಲಿದ್ದಾರೆಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ಇದನ್ನೂ ಓದಿ: ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿವಾದಕ್ಕೆ ನಾಳೆ ಸಿಗಲಿದೆಯೇ ಅಂತಿಮ ರೂಪ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.