ETV Bharat / state

ಬಿಡದಿ: ಸಚಿವ ಅಶ್ವತ್ಥ ನಾರಾಯಣರನ್ನು ಹೊಗಳಿದ ಜೆಡಿಎಸ್ ಶಾಸಕ ಮಂಜುನಾಥ್‌

author img

By

Published : Dec 16, 2022, 9:35 PM IST

Minister Ashwattha Narayan arriving in Ramanagara district
ರಾಮನಗರ ಜಿಲ್ಲೆಗೆ ಆಗಮಿಸುತ್ತಿರುವ ಸಚಿವ ಅಶ್ವತ್ಥ ನಾರಾಯಣ

ನಾವಿಬ್ಬರೂ ಬೇರೆಬೇರೆ ಪಕ್ಷಗಳಿಗೆ ಸೇರಿರಬಹುದು. ಆದರೆ ಸಚಿವರು ಜಿಲ್ಲೆಯ ಅಭಿವೃದ್ಧಿಯಲ್ಲಿ ಎಂದೂ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಹಾಕುವುದಿಲ್ಲ ಎಂದು ಮಾಗಡಿ ಶಾಸಕ ಮಂಜುನಾಥ್ ಹೇಳಿದರು.

ರಾಮನಗರ: ಜಿಲ್ಲೆಯ 6 ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯಲಿರುವ 125 ಕೋಟಿ ರೂಪಾಯಿ ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಇಂದು ಶಂಕುಸ್ಥಾಪನೆ ನೆರವೇರಿಸಿದರು. ಬಿಡದಿಯಲ್ಲಿರುವ ಯುವಜನ ಇಲಾಖೆಯ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ಎಂ ಟಿ ಬಿ ನಾಗರಾಜ್ ಮತ್ತು ಮಾಗಡಿ ಶಾಸಕ ಮಂಜುನಾಥ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥ ನಾರಾಯಣ ಅವರು, ಜಿಲ್ಲೆಯ ಎರಡು ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸಲು ಒಟ್ಟು 2 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಈ ಪೈಕಿ ಈಗಾಗಲೇ 1,300 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಇತ್ತೀಚೆಗೆ ಇನ್ನೂ 500 ಕೋಟಿ ರೂಪಾಯಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದರು.

ರಾಮನಗರ ಜಿಲ್ಲೆಯು ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎರಡನೇ ಜಿಲ್ಲೆಯಾಗಿದೆ. ಇಲ್ಲಿ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಬೇಕು ಎಂದರೆ, ಜನರು ಕೂಡ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಅಭಿವೃದ್ಧಿ ಸಾಧಿಸಲು ಒಳ್ಳೆಯ ಗುಣಮಟ್ಟದ ಮೂಲ ಸೌಲಭ್ಯ ಇರಬೇಕು. ಹೀಗಾಗಿ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ರಾಜಕಾಲುವೆ, ತಡೆಗೋಡೆ, ಸೇತುವೆ, ಉದ್ಯಾನ, ಶೌಚಾಲಯ, ಸಮುದಾಯ ಭವನ, ಅಂಗನವಾಡಿಗಳನ್ನು ನಿರ್ಮಿಸಲಾಗುತ್ತಿದೆ. ಜಿಲ್ಲೆಯಲ್ಲಿ ನೆಲೆಯೂರಿರುವ ಟೊಯೋಟಾ ಮತ್ತು ಸುಜುಕಿ ಕಂಪನಿಗಳು ಇನ್ನೂ 50 ಸಾವಿರ ಜನರಿಗೆ ಉದ್ಯೋಗ ಕೊಡಲು ಸಿದ್ಧ ವಾಗಿವೆ. ಇದಕ್ಕಾಗಿ ಅರ್ಹರಿಗೆ ಕೌಶಲ್ಯಾಭಿವೃದ್ಧಿ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಸಚಿವರನ್ನು ಪ್ರಶಂಸಿಸಿದ ಜೆಡಿಎಸ್ ಶಾಸಕ: ಕಾರ್ಯಕ್ರಮದಲ್ಲಿ ಮಾತನಾಡಿದ ಮಾಗಡಿ ಶಾಸಕ ಮಂಜುನಾಥ್ ಅವರು, ಸಚಿವ ಅಶ್ವತ್ಥ ನಾರಾಯಣ ಅವರನ್ನು ಪಕ್ಷಭೇದ ಮರೆತು ಮುಕ್ತವಾಗಿ ಪ್ರಶಂಸಿಸಿದರು. ನಾವಿಬ್ಬರೂ ಬೇರೆಬೇರೆ ಪಕ್ಷಗಳಿಗೆ ಸೇರಿರಬಹುದು. ಆದರೆ ಸಚಿವರು ಜಿಲ್ಲೆಯ ಅಭಿವೃದ್ಧಿಯಲ್ಲಿ ಎಂದೂ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಹಾಕುವುದಿಲ್ಲ. ಬದಲಿಗೆ ರಾಮನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕನಸನ್ನು ಅವರು ಬಿತ್ತುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿಂದಿನ ಸರಕಾರ ಮಂಜೂರು ಮಾಡಿದ್ದ ಯೋಜನೆಗಳಿಗೆ ಕೂಡ ಸಚಿವರು ಎಂದೂ ತಡೆ ಹಾಕಿಲ್ಲ. ಇಂತಹ ಮುಕ್ತ ಮನೋಭಾವದ ಸಚಿವರನ್ನು ನಾನು ಹಿಂದೆಂದೂ ನೋಡಿಲ್ಲ. ಇವರ ಬಗ್ಗೆ ನನಗೆ ವಿಶೇಷ ಗೌರವವಿದೆ. ಜಿಲ್ಲಾ ಉಸ್ತುವಾರಿ ಸಚಿವರ ಈ ಮನೋಭಾವ ದಿಂದ ಪ್ರಗತಿಯ ಹೊಸ ಶಕೆಯೇ ರಾಮನಗರ ಜಿಲ್ಲೆಯಲ್ಲಿ ಆರಂಭವಾಗಿದೆ ಎಂದು ಮಂಜುನಾಥ್ ಶ್ಲಾಘಿಸಿದರು.

ಇದನ್ನೂ ಓದಿ: ಹೊಸ ವರ್ಷದ ಸಡಗರ: ಮಧ್ಯರಾತ್ರಿ ಎಂಜಿ ರಸ್ತೆಯಲ್ಲಿ ಲೈಟ್ ಆಫ್ ಮಾಡಂಗಿಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.