ಬೆಂಗಳೂರು: ಬಜೆಟ್ ಅಧಿವೇಶನದ ನಂತರ 'ಜನತಾ ಜಲಧಾರೆಯ ಗಂಗಾ ರಥಯಾತ್ರೆ' ಆರಂಭ ಮಾಡಲು ಜೆಡಿಎಎಸ್ ನಿರ್ಧರಿಸಿದೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ನಾಲ್ಕು ಜಿಲ್ಲೆಗಳ ಶಾಸಕರು ಮತ್ತು ಮುಖಂಡರ ಜೊತೆ ಹೆಚ್ಡಿಕೆ ಜನತಾ ಜಲಧಾರೆಯ ಕುರಿತಾಗಿ ಮಹತ್ವದ ಸಭೆ ನಡೆಸಿದರು.
ಜನತಾ ಜಲಧಾರೆಯ ಮಹತ್ವ ಜನರಿಗೆ ಅರಿವಾಗುವಂತೆ ಮಾಡಬೇಕು. ಮನೆ ಮನೆಗಳಿಗೂ ಕರ ಪತ್ರ ಹಂಚಿ ರಾಜ್ಯದ ಜನತೆಗೆ ಯಾತ್ರೆಯ ಉದ್ದೇಶ ತಿಳಿಸಬೇಕು ಎಂದು ಅವರು ಸೂಚನೆ ನೀಡಿದರು.
ಪಶ್ಚಿಮಾಭಿಮುಖವಾಗಿ ಹರಿಯುವ ಕಣಕಂಬಿ, ಮಹದಾಯಿ, ಕೃಷ್ಣಾ ಜಲಾನಯನ ಪ್ರದೇಶ, ಮಲಪ್ರಭಾ, ಘಟಪ್ರಭಾ ಜಲಾಶಯ ಸೇರಿ 7 ಜಾಗಗಳಲ್ಲಿ ಜಲ ಸಂಗ್ರಹ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಹೇಳಿದರು.
ಇದೇ ವೇಳೆ ಮಹದಾಯಿ ಯೋಜನೆಯಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯವನ್ನು ಜನರಿಗೆ ತಿಳಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಖಾಷೆಂಪೂರ್, ವಿಧಾನ ಪರಿಷತ್ ಸದಸ್ಯ ಕೆ.ಎನ್. ತಿಪ್ಪೇಸ್ವಾಮಿ, ಹಿರಿಯ ಶಾಸಕ ವೆಂಕಟರಾವ್ ನಾಡಗೌಡ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಅಪಘಾತದಲ್ಲಿ ಗಾಯಾಳು ಮಹಿಳೆಯ ರಕ್ಷಣೆಗೆ ತಮ್ಮ ಕಾರನ್ನೇ ನೀಡಿದ ಚಿಕ್ಕಬಳ್ಳಾಪುರ ಎಸ್ಪಿ