ರಾಮನಗರ : ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಇಂದು ರಾಮನಗರ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಕಚೇರಿಯಿಂದ ಎಸ್ಪಿ ಕಚೇರಿವರೆಗೂ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದರು. ಕಾಲ್ನಡಿಗೆಯಲ್ಲಿ ಕೆಸಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿಕೆ.ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಸಚಿವ ಹೆಚ್ ಎಂ ರೇವಣ್ಣ, ಮಾಜಿ ಶಾಸಕ ಬಾಲಕೃಷ್ಣ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.
ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತನಾಗಿದ್ದವನು. ಆತ ಪಂಚಾಯತ್ನಲ್ಲಿ ಕೆಲಸ ಮಾಡಿದ್ದಾನೆ. ಪಂಚಾಯತ್ ಮಂತ್ರಿ ಹೇಳದೇ ಕೆಲಸ ಮಾಡಲು ಸಾಧ್ಯನಾ? ಎಲ್ಲಾ ಮಂತ್ರಿಗಳೂ 40% ತೆಗೆದುಕೊಳ್ಳುತ್ತಾರೆ. ನಾನು ಮಂತ್ರಿಯಾದಾಗ ನನಗೆ ಎಷ್ಟು ಪರ್ಸೆಂಟ್ ಹಣ ಕೊಟ್ಟಿದ್ದೀರಾ? ನಾನು ಪಡೆದಿದ್ದೇನೆ ಎಂದು ದೂರು ಬಂದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಕೆಸಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸಂತೋಷ್ ಪತ್ನಿಯ ಮಂಗಲ್ಯದ ಸರ, ಚಿನ್ನ ಅಡ ಇಟ್ಟು ಕೆಲಸ ಮಾಡಿಸಿದ್ದಾರೆ. ಬೆಳಗ್ಗೆ ಮೋದಿ, ಸಂಜೆ ಬೊಮ್ಮಾಯಿ ಅಂತಾ ಹೇಳುತ್ತಿದ್ದರು ಎಂದು ಆ ಮಹಿಳೆ ಅಳುತ್ತಿದ್ದಾಳೆ. ಕೆಲಸ ಮಾಡಿಸಿದ್ದಾರೆ. ಆದರೆ, ಹಣ ನೀಡಿಲ್ಲ. ಇದು ದೊಡ್ಡ ಭ್ರಷ್ಟ ಸರ್ಕಾರ, ಈಶ್ವರಪ್ಪನ್ನ ಬಂಧಿಸಬೇಕು. ಸಿಎಂ, ಗೃಹ ಮಂತ್ರಿಗಳು ಈಗಲೇ ನಿರ್ದೋಷಿ ಎನ್ನುತ್ತಿದ್ದಾರೆ. ಹೀಗಾದರೆ, ನಿಷ್ಪಕ್ಷ ಪಾತ ತನಿಖೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ದ್ವಂದ್ವ ನಿಲುವು : ಕುಮಾರಸ್ವಾಮಿ ಅವರದ್ದು ದ್ವಂದ್ವ ನಿಲುವು. ಗೋಹತ್ಯೆಗೆ ಯಾಕೆ ಬೆಂಬಲ ನೀಡಲಿಲ್ಲ. ಮೊನ್ನೆ ಈಶ್ವರಪ್ಪ ಲಂಚ ಹೊಡೆದಾಗ ಯಾಕೆ ಮಾತನಾಡಲಿಲ್ಲ. ಆತ್ಮಸಾಕ್ಷಿ ವಿರುದ್ಧವಾಗಿ ರಾಜಕಾರಣ ಮಾಡಬಾರದು. ಈ ಧ್ವಂದ್ವ ನೀತಿ ಸರಿಯಲ್ಲ. ರಾಮನಗರ. ಚನ್ನಪಟ್ಟಣ ಮತದಾರರನ್ನ ಮಾತ್ರ ಗಮನದಲ್ಲಿಟ್ಟುಕೊಂಡು ಮಾತನಾಡಬೇಡಿ ಎಂದರು.
ಇದನ್ನೂ ಓದಿ: ಕಾಂಗ್ರೆಸ್-ಬಿಜೆಪಿಗೆ ಮತ ನೀಡಿದ್ರೆ ಇನ್ನೂ 70 ವರ್ಷವಾದ್ರೂ ನೀರು ಬರೋಲ್ಲ: ಹೆಚ್ಡಿಕೆ